ಒಳ ಮೀಸಲಾತಿ ವರದಿಯಿಂದ ಉಂಟಾದ ಅವೈಜ್ಞಾನಿಕ ಗೊಂದಲ ಸರಿಪಡಿಸುವಂತೆ ಆಗ್ರಹಿಸಿ ಮಾ.17 ರಂದು ಬೀದರ್ ನಗರದಲ್ಲಿ ಬಲಗೈ ಸಮುದಾಯದಿಂದ ನಡೆಯಲಿರುವ ಬೃಹತ್ ಪ್ರತಿಭಟನೆಯ ಕರಪತ್ರವನ್ನು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಬಿಡುಗಡೆ ಮಾಡಲಾಯಿತು.
ಹೋರಾಟ ಸಮಿತಿಯ ಅಧ್ಯಕ್ಷ ಮಹೇಶ ಗೋರನಾಳಕರ್ ಮಾತನಾಡಿ, ʼರಾಜ್ಯದಲ್ಲಿ ನ್ಯಾ.ನಾಗಮೋಹನದಾಸ್ ಅವರ ಒಳ ಮೀಸಲಾತಿ ವರದಿಯಿಂದ ಉಂಟಾದ ಅವೈಜ್ಞಾನಿಕ ಗೊಂದಲದಿಂದ ಪ್ರವರ್ಗ-ಬಿ ಹಾಗೂ ಪ್ರವರ್ಗ-ಸಿ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅನ್ಯಾಯವಾಗುತ್ತಿದೆ. ಯಾವುದೇ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶ ನಮ್ಮದಿಲ್ಲ. ಆದರೆ ನಮಗೆ ದಕ್ಕಬೇಕಾದ ಮೀಸಲಾತಿಯನ್ನು ನೈತಿಕವಾಗಿ ಕೇಳುವುದು ನಮ್ಮ ಸ್ವಾಭಿಮಾನದ ಹಕ್ಕುʼ ಎಂದು ಹೇಳಿದರು.
ʼರಾಜ್ಯದ 101 ಸಮುದಾಯಗಳಿಗೆ ಅನ್ಯಾಯವಾಗದಂತೆ ಸರ್ಕಾರ ಬಿಂದು ಶ್ರೇಣಿಯಲ್ಲಿ ಉಂಟಾದ ಗೊಂದಲವನ್ನು ಸರಿಪಡಿಸಿ ನ್ಯಾಯ ನೀಡಬೇಕೆಂದು ಒತ್ತಾಯಿಸಿ ಇದೇ ಮಾರ್ಚ್ 17ರಂದು ಬೀದರದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆʼ ಎಂದು ತಿಳಿಸಿದರು.
ಸಮಾಜದ ಹಿರಿಯ ಮುಖಂಡ ವಿಠಲದಾಸ ಪ್ಯಾಗೆ ಮಾತನಾಡಿ, ʼಬಲಗೈ ಸಮುದಾಯವು ಒಳಮೀಸಲಾತಿ ವಿರೋಧಿಯಲ್ಲ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಬಲಗೈ ಸಮುದಾಯದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಚಿವರಾದ ಹೆಚ್.ಸಿ.ಮಹಾದೇವಪ್ಪಾ, ಡಾ.ಜಿ.ಪರಮೇಶ್ವರ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಅವಮಾನ ಮಾಡುವ ಮೂಲಕ ಸಮಾಜಗಳಲ್ಲಿ ದ್ವೇಷ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇಂತಹ ಅಶಾಂತಿ ಮೂಡಿಸುವವರಿಗೆ ತಕ್ಕ ಉತ್ತರ ನೀಡುತ್ತೇವೆʼ ಎಂದು ಹೇಳಿದರು.
ಹಿರಿಯ ಮುಖಂಡ ಕಾಶಿನಾಥ ಚೆಲ್ವಾ ಮಾತನಾಡಿ, ʼಮಾ.17ರಂದು ನಡೆಯುವ ಹೋರಾಟವು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನಡೆಯುತ್ತಿದೆ. ಬೀದರ ಜಿಲ್ಲೆಯ ಜನತೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕುʼ ಎಂದು ಮನವಿ ನೀಡಿದರು.
ಇದನ್ನೂ ಓದಿ : ಬೀದರ್ | ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ 24 ಗಂಟೆಯೊಳಗೆ ಪರಿಹಾರ ಕಲ್ಪಿಸಿ : ಸಚಿವ ಈಶ್ವರ ಖಂಡ್ರೆ
ಹೋರಾಟ ಸಮಿತಿಯ ಸದಸ್ಯರಾದ ಅರುಣ ಪಟೇಲ್, ಸಂಜುಕುಮಾರ ಸಾಗರ, ಪವನ ಮಿಠಾರೆ, ಪ್ರಕಾಶ ರಾವಣ, ರಾಹುಲ್ ಡಾಂಗೆ, ವಿನೋದ ಬಂದಗೆ, ಪ್ರದೀಪ್ ನಾಟೆಕರ್, ಸೂರ್ಯಕಾಂತ ಸಾಧುರೆ, ಭೀಮರಾವ ಮಾಲಗತ್ತಿ ಪ್ರಮುಖರಾದ ಶಿವಕುಮಾರ ನಿಲಿಕಟ್ಟಿ, ರಾಜಕುಮಾರ ಮೂಲಭಾರತಿ, ಸಂಜುಕುಮಾರ ಮೇತ್ರೆ, ಉದಯ ನಾಯಕ, ಮುಕೇಶ್ ರಾಯ್, ಸುನೀಲ್ ಡೋಳೆ, ಮಲ್ಲಿಕಾರ್ಜುನ ಮೊಳಕೇರೆ, ಶಿವಕುಮಾರ ತುಂಗಾ, ಧನರಾಜ ಮುಸ್ತಾಪೂರ, ಸಂದೀಪ್ ಕಾಂಟೆ, ಸತೀಶ್ ಲಕ್ಕಿ, ಪುಟ್ಟು ದೀನೆ, ಶರಣು ಫುಲೆ, ಪ್ರವೀಣ ಕರಂಜೆ, ದಿನೇಶ್ ಶಿಂದೆ, ಸಂತೋಷ ಸೂರ್ಯವಂಶಿ, ವಿಠಲ ಕಾಂಬಳೆ, ಲಕ್ಷ್ಮಣ ಶೇರಿಕಾರ್, ತುಕಾರಾಮ ಯರನಳ್ಳಿ, ದಿಲೀಪ್ ಸನ್ನೂರಕರ್, ಶ್ರೀನಿವಾಸ ದಯಾಳ, ಸುಧಾಮಣಿ ಗುಪ್ತಾ, ಗಂಗಮ್ಮ ಫುಲೆ, ರಂಜೀತಾ ಜೈನೋರ್, ಮಹಾದೇವಿ ನೀಲಿಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





