ಈ ಅಲೆಮಾರಿ ಕುಟುಂಬಕ್ಕೆ ಸ್ವಂತ ಸೂರಿಲ್ಲ. ಆಕಾಶವೇ ಚಪ್ಪರ ಎಂಬಂತೆ ಹರಕು ಸೀರೆಗಳಿಂದ ತಯ್ಯಾರಿಸಿಕೊಂಡ ಗುಡಿಸಲು ಇವರ ಬದುಕಿಗೆ ಆಸರೆ. ಬೀದಿ ಬದಿಯಲ್ಲಿ ಅಲೆದಾಡಿ ಚಿಂದಿ ಆಯುವುದು ಇವರ ನಿತ್ಯದ ಕಾಯಕ. ಸರ್ಕಾರದ ಕನಿಷ್ಠ ಸೌಲಭ್ಯಗಳು ಇವರ ಮನೆ ಬಾಗಿಲಿಗೆ ತಲುಪಿಲ್ಲ. 60 ವಯಸ್ಸಿನ ಆಸುಪಾಸಿನ ದಂಪತ ವಯಸ್ಸಿಗೆ ಬಂದ ಮಗನ ಮದುವೆ ಮಾಡೋಣ ಅಂತ ಜೋಪಾನದಿಂದ ಕೂಡಿಟ್ಟ ₹55 ಸಾವಿರ ಹಣ ಈಗ ಆಕಸ್ಮಿಕ ಬೆಂಕಿಗೆ ಸುಟ್ಟು ಬೂದಿಯಾಗಿದೆ. ಬೆಂಕಿ ಕೆನ್ನಾಲಿಗೆಗೆ ಇಡೀ ಸಂಸಾರವೇ ಕಳೆದುಕೊಂಡಿರುವ ಬಡ ಕುಟುಂಬ ಅಕ್ಷರಶಃ ಬೀದಿಪಾಲಾಗಿದೆ.
ಹೌದು, ಇಂತಹದೊಂದು ಮನಕಲಕುವ ಘಟನೆ ನಡೆದಿರೋದು ಬೀದರ್ ಜಿಲ್ಲೆ ಔರಾದ್ ತಾಲೂಕು ಕೇಂದ್ರದಲ್ಲಿ. ಪಟ್ಟಣದ ಅಮರೇಶ್ವರ ಕನ್ಯಾ ಪ್ರೌಢ ಶಾಲೆ, ಬಿಇಒ ಕಚೇರಿ ಸಮೀಪದ ರಸ್ತೆ ಬದಿಯಲ್ಲಿ ವಾಸಿಸುತ್ತಿದ್ದ ಫುಲುಬಾಯಿ ಹಿಮತ್ ವಾಘಮಾರೆ ಎಂಬುವರ ಗುಡಿಸಲಿಗೆ ಸೋಮವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ, ಬೆಂಕಿ ಕೆನ್ನಾಲಿಗೆಗೆ ಗುಡಿಸಲಿನಲ್ಲಿದ್ದ ಬಟ್ಟೆ, ಮನೆ ಬಳಕೆ ಸಾಮಾಗ್ರಿ, ಆಹಾರ ಪದಾರ್ಥ, ಅಡುಗೆ ಸಾಮಾನು, ಪೆಟ್ಟಿಗೆಯಲ್ಲಿದ್ದ ₹55 ಸಾವಿರದಷ್ಟು ನಗದು ಸೇರಿ ಎಲ್ಲವೂ ಬೆಂಕಿಯಲ್ಲಿ ಬೆಂದು ಭಸ್ಮವಾಗಿವೆ.
ವಿಷಯ ತಿಳಿದು ʼಈದಿನʼ ಪ್ರತಿನಿಧಿ ಘಟನಾ ಸ್ಥಳಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದರು. ಬೆಂಕಿಗೆ ಸುಟ್ಟು ಕರಕಲಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಅಡುಗೆ ಸಾಮಾನು, ಮನೆ ಬಳಕೆ ಸಾಮಾನು, ಹಾಸಿಗೆ, ಮಂಚ ಎಲ್ಲವೂ ಕಳೆದುಕೊಂಡ ಕುಟುಂಬ ದಿಕ್ಕುತೋಚದೆ ಅಸಹಾಯಕವಾಗಿ ಕುಳಿತಿತ್ತು. ನೋವು, ಯಾತನೆ ಬೀರಿದ ಮುಖದಲ್ಲಿ ಸಹಾಯದ ನಿರೀಕ್ಷೆಯಲ್ಲಿ ಇರುವಂತೆ ಕಂಡಿತು.
ಈ ಘಟನೆ ಹೇಗಾಗಿದೆ ಎಂದು ನಾನು ಫುಲುಬಾಯಿ ಅವರೊಂದಿಗೆ ಮಾತಿಗಿಳಿದಾಗ, ʼಹೊಟ್ಟೆಪಾಡಿಗಾಗಿ ಕಳೆದ 15 ವರ್ಷಗಳಿಂದ ಇಲ್ಲಿ ಹಳೆ ಸೀರೆಗಳಿಂದ ಪುಟ್ಟ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದ ನಮ್ಮ ಕುಟುಂಬ ಇಂದು ಬೀದಿಪಾಲಾಗಿದೆ. ರಾತ್ರಿ ಎಲ್ಲಿ ಮಲಗೋದು, ತುತ್ತು ಅನ್ನಕ್ಕೂ ಗತಿ ಇಲ್ಲದಂತಾಗಿ ನನಗೆ ಆಕಾಶ ತಲೆ ಮೇಲೆ ಕಳಚಿ ಬಿದ್ದಂತಾಗಿದೆʼ ಎಂದು ಹೇಳುತ್ತಾ ಸೆರಗಿನಿಂದ ಕಣ್ಣೀರು ಒರೆಸುಕೊಂಡರು.

ʼನಾವು ಅಲೆಮಾರಿಗಳು, ನಮಗೆ ಸ್ವಂತ ಜಾಗ, ಮನೆ ಯಾವುದೂ ಇಲ್ಲ. ಇಲ್ಲಿ ಕಳೆದ 15 ವರ್ಷಗಳಿಂದ ಜೋಪಡಿ ಕಟ್ಟಿಕೊಂಡು ವಾಸಿಸುತ್ತೇವೆ. ರಸ್ತೆ ಬದಿಯಲ್ಲಿ ಬಿದ್ದ ಚಿಂದಿ ಆಯುವುದು ನಮ್ಮ ನಿತ್ಯದ ಕೆಲಸ, ಅದರಿಂದಲೇ ನಮ್ಮ ಉಪಜೀವನ ನಡೆಯೋದು. ಹೋಳಿ ಹುಣ್ಣಿಮೆ ವೇಳೆ ಮಗನ ಮದುವೆ ಇದೆ ಅಂತ ಹೊಟ್ಟೆಪಾಡಿಗಾಗಿ ಎಲ್ಲರೂ ತಿಂಗಳ ಹಿಂದೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಕಡೆಗೆ ಹೋಗಿ ನೆಲೆಸಿದ್ದೇವೆ. ರಾತ್ರಿ ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದು ಎಲ್ಲ ಸುಟ್ಟು ಹೋಗಿದೆ ಅಂತ ಸ್ಥಳೀಯರು ತಿಳಿಸಿದಾಗ ಬೆಳಿಗ್ಗೆ ಬಂದಿದ್ದೇವೆ. ಇಲ್ಲಿ ನೋಡಾದಕ್ಷಣ ಸಂಸಾರವೇ ಬರ್ಬಾದ್ ಆಗಿದೆ, ಮುಂದಿನ ಬದುಕು ಹೇಗೆಂದು ಚಿಂತೆ ಕಾಡುತ್ತಿದೆʼ ಎಂದು ಫುಲುಬಾಯಿ ಅಳಲು ತೋಡಿಕೊಂಡರು.
ʼವಿದ್ಯುತ್ ಶಾರ್ಟ್ ಸರ್ಕೀಟ್ದಿಂದ ಈ ಅವಘಡ ಸಂಭವಿಸಿ ಗುಡಿಸಲು ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ನಾವು ಯಾರೂ ಮನೆಯಲ್ಲಿ ಇರಲಿಲ್ಲ. ಇದರಿಂದಾಗಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಮಗ ಸಂದೀಪ ಹೇಳಿದರು. ಈ ಅವಘಡದಿಂದ ಬದುಕಿನ ಆಸರೆ ಕಳೆದುಕೊಂಡು ತೀವ್ರವಾಗಿ ಮನನೊಂದಿರುವ ಫುಲುಬಾಯಿ ಹಿಮತ್ ಹಾಗೂ ಅವರ ಮಗ ಸಂದೀಪ ಅವರು ʼನಮಗೆ ಯಾರಾದರೂ ದಾನಿಗಳು ಸಹಾಯ ಮಾಡಿದರೆ ಅನುಕೂಲವಾಗುತ್ತದೆʼ ಎಂದು ಅಂಗಲಾಚುತ್ತಿದ್ದಾರೆ.
ಮುಖ್ಯ ರಸ್ತೆಯಲ್ಲಿ ಇವರ ಒಂದೇ ಗುಡಿಸಲು ಇರುವುದು, ಹೀಗಾಗಿ ಬೇರೆ ಯಾವುದಕ್ಕೂ ಹಾನಿಯಾಗಿಲ್ಲ. ವಿಷಯ ತಿಳಿದಾಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ರಾತ್ರಿ ಬೆಂಕಿ ನಂದಿಸಿದ್ದಾರೆ. ಆದರೆ, ಗುಡಿಸಲು ಸಂಪೂರ್ಣ ಬೆಂಕಿಯಲ್ಲಿ ಬೆಂದು ಸುಟ್ಟು ಕರಕಲಾಗಿದೆ. ಸ್ಥಳೀಯ ಪ್ರಜ್ಞಾವಂತ ನಾಗರಿಕರು ಸ್ಥಳಕ್ಕೆ ಭೇಟಿ ನೀಡಿ ಫುಲುಬಾಯಿ ದಂಪತಿಗೆ ಸಮಾಧಾನಪಡಿಸಿದ್ದಾರೆ. ತೀರ ಬಡತನದಿಂದ ಜೀವನ ಸಾಗಿಸುತ್ತಿರುವ ಇವರಿಗೆ ಈ ಸ್ಥಿತಿ ಬರಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿ ಸಹಾಯಧನ ಒದಗಿಸುವ ಭರವಸೆ ನೀಡಿದ್ದಾರೆ.

ʼಸರ್ಕಾರದ ಕನಿಷ್ಠ ಸೌಲಭ್ಯಗಳಿಲ್ಲದೆ ವಸತಿ ವಂಚಿತರಾಗಿ ರಸ್ತೆ ಬದಿಯಲ್ಲಿ ವಾಸಿಸುವ ಅಲೆಮಾರಿ ಜನಾಂಗ ಕುಟುಂಬವೊಂದರ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿ ನಾಶ ಆಗಿರುವುದು ಅತ್ಯಂತ ನೋವಿನ ಸಂಗತಿ. ಇದ್ದೊಬ್ಬ ಮಗನ ಮದುವೆ ಮಾಡಬೇಕೆಂದು ಕೂಡಿಟ್ಟ ಪೋಷಕರ ಬೆವರಿನ ಹಣ ಸೇರಿ ಸಂಸಾರಕ್ಕೆ ಅಗತ್ಯವಾದ ಎಲ್ಲ ಬಳಕೆ ವಸ್ತುಗಳು ಸುಟ್ಟು ಹೋಗಿವೆ. ಈಗ ಆಶ್ರಯವಿಲ್ಲದೆ, ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದಂತೆ ಆಗಿರುವ ಅವರ ಸ್ಥಿತಿ ʼನೊಂದವರ ನೋವ ನೋಯದವರೇನು ಬಲ್ಲರಯ್ಯಾʼ ಎಂಬಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕುʼ ಎಂದು ಹೋರಾಟಗಾರ ರಾಹುಲ್ ಖಂದಾರೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಅರ್ಥಪೂರ್ಣ ಗಣರಾಜೋತ್ಸವ ಆಚರಣೆಗೆ ನಿರ್ಧಾರ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ʼಆಕಸ್ಮಿಕವಾಗಿ ಗುಡಿಸಲಿಗೆ ಬಿದ್ದ ಬೆಂಕಿಗೆ ಇಡೀ ಕುಟುಂಬವೇ ಬೀದಿಗೆ ಬಿದ್ದಿರುವುದು ಮಾತ್ರ ನಿಜಕ್ಕೂ ನೋವಿನ ಸಂಗತಿ. ವಿಷಯ ತಿಳಿದು ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ತತ್ಕ್ಷಣವೇ ಈ ಕುಟುಂಬದವರ ನೆರವಿಗೆ ದಾವಿಸಬೇಕಿದೆ. ಅಲೆಮಾರಿ ಜನಾಂಗಕ್ಕೆ ಮಂಜೂರಾದ ನಿವೇಶನ ಹಂಚಿಕೆಗೆ ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕುʼ ಎಂದು ಅಲೆಮಾರಿ ಸಮಾಜದ ಮುಖಂಡ ನಾಗನಾಥ ವಾಕೋಡೆ ಒತ್ತಾಯಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




