ಶಿವಯೋಗಿ ಸಿದ್ದರಾಮೇಶ್ವರರು ಬಸವಾದಿ ಶರಣರಲ್ಲಿ ಪ್ರಮುಖ ಶರಣರಾಗಿದ್ದರು. ಸಿದ್ಧರಾಮೇಶ್ವರರು ಬಸವಣ್ಣನವರನ್ನು ಪರಮ ಗುರುವಾಗಿ ಕಂಡರು, ಬಸವಣ್ಣನವರ ಮಾರ್ಗದರ್ಶನದಿಂದ ಸಿದ್ಧರಾಮೇಶ್ವರರು ಶಿವಯೋಗಿಯಾದರು ಎಂದು ಇಳಕಲ್ನ
ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.
ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ಧರಾಮೇಶ್ವರ ಜಯಂತಿ ಮತ್ತು ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ʼಸಿದ್ಧರಾಮೇಶ್ವರರು ಲಿಂಗಭೇದ ನಿವಾರಿಸಿ ಸಮಾನತೆಯ ಸಂದೇಶ ನೀಡಿದರು. ಕೆರೆ, ಬಾವಿ, ದೇವಾಲಯಗಳ ನಿರ್ಮಿಸಿ ಜನಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಸೊಲ್ಲಾಪುರವನ್ನು ಭೂಕೈಲಾಸವನ್ನಾಗಿ ಪರಿವರ್ತಿಸಿದರು. ಅಂತಹ ಶರಣರ ಆದರ್ಶಗಳು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕುʼ ಎಂದು ತಿಳಿಸಿದರು.
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼಸಿದ್ದರಾಮೇಶ್ವರರು ಕೇವಲ ದಾರ್ಶನಿಕರಾಗಿರದೆ, ತಮ್ಮ ಕಾಯಕ ಮತ್ತು ಚಿಂತನೆಗಳ ಮೂಲಕ ಸಮಾಜದ ಓರೆಕೋರೆಗಳನ್ನು ಸರಿಪಡಿಸಲು ಶ್ರಮಿಸಿದರುʼ ಎಂದು ತಿಳಿಸಿದರು.

ಸಂಕ್ರಾಂತಿ ಹಬ್ಬದ ನಿಮಿತ್ತ ಮಕ್ಕಳಿಗೆ ಇಳಕಲ್, ಭಾಲ್ಕಿ ಶ್ರೀಗಳು ಮಕ್ಕಳಿಗೆ ಸಂಕ್ರಾಂತಿ ಹಬ್ಬದ ಶುಭ ಕೋರಿದರು. ಚನ್ನಬಸವೇಶ್ವರ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉಭಯ ಪೂಜ್ಯರು ಎಳ್ಳು, ಬೆಲ್ಲ ವಿತರಿಸಿ ಆಶೀರ್ವದಿಸಿದರು.
ಸಾಮಾಜಿಕ ಕ್ರಾಂತಿ ಹಾಗೂ ವಚನ ಸಾಹಿತ್ಯಕ್ಕೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಅಪಾರ. ಅವರು ಶಿವಯೋಗಿ ಮಾತ್ರವಲ್ಲದೇ ಕಾಯಕ ಯೋಗಿ ಆಗಿದ್ದರು ಎಂದು ಗುರುಬಸವ ಪಟ್ಟದ್ದೇವರು ಹೇಳಿದರು.
ಇದನ್ನೂ ಓದಿ : ಬೀದರ್ | ಕೋಟಿ ಖರ್ಚಾದರೂ ಉದ್ಘಾಟನೆಯಾಗದ ಪದವಿ ಕಾಲೇಜು ಹಾಸ್ಟೆಲ್ : ಕುಸಿಯುತ್ತಿದೆ ದಾಖಲಾತಿ!
ಮದನೂರಿನ ಯುವ ಮುಖಂಡ ಗುಂಡಪ್ಪ ಬೆಲ್ಲೆ ಅವರು ಬಸವಣ್ಣನವರ ಮೂರ್ತಿಗೆ ಪೂಜೆ ನೆರವೇರಿಸಿದರು. ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ, ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪಪ್ರಾಚಾರ್ಯ ಸಿದ್ರಾಮ ಗೊಗ್ಗಾ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.





