ನಾವೆಲ್ಲರೂ ಸೌಹಾರ್ದತೆ ವಾತಾವರಣ ನಿರ್ಮಿಸಿ, ಜಗತ್ತಿಗೆ ಸಾಮರಸ್ಯ ಸಂದೇಶವನ್ನು ಸಾರೋಣ. ಆ ಮೂಲಕ ವಿಶ್ವ ದಾರ್ಶನಿಕರ ತತ್ವಗಳನ್ನು ಎತ್ತಿ ಹಿಡಿದು, ಸೋದರತ್ವ ಭಾವನೆಯಿಂದ ಬಾಳೋಣ ಎಂದು ಪ್ರಗತಿಪರ ಚಿಂತಕಿ ಪ್ರೊ. ಮೀನಾಕ್ಷಿ ಬಾಳಿ ಹೇಳಿದರು.
ಚಿಟಗುಪ್ಪದಲ್ಲಿ ಕರ್ನಾಟಕ ಸೌಹಾರ್ದ ವೇದಿಕೆ ಆಯೋಜಿಸಿದ್ದ ಸೌಹಾರ್ದ ನಡಿಗೆ ಹಾಗೂ ಶರಣ ಸೂಫಿ ಸಂತ ಸಮಾವೇಶದಲ್ಲಿ ಅವರು ಮಾತನಾಡಿದರು. “ಬಹುತ್ವ ಭಾರತದ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಯಬೇಕಾದರೆ ಬೇಧಭಾವ ಮರೆತು ಸಾಮರಸ್ಯದ ಬದುಕು ನಡೆಸುವುದು ಮುಖ್ಯ” ಎಂದರು.
ಸಾನಿಧ್ಯ ವಹಿಸಿದ್ದ ಕೋರಣೇಶ್ವರ ಸ್ವಾಮಿಜಿ ಮಾತನಾಡಿ, “ಈ ನಾಡಿನಲ್ಲಿ ಸೌಹಾರ್ದತೆಯ ವಿಚಾರಗಳು ಯಾವಾಗಲೂ ಇವೆ, ಜಾತಿ ಧರ್ಮ ಭಾಷೆಗಳನ್ನು ಮೀರಿ ನಾವೆಲ್ಲರೂ ಬಾಳಬೇಕು. ಶಿಕ್ಷಣ ಮೂಲಕ ಸಂಸ್ಕಾರಯುಕ್ತ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು. ಸಂವಿಧಾನಬದ್ಧ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನ್ಯಾಯ ನೀತಿ ಧರ್ಮದ ವಿಚಾರಗಳಿಗೆ ಗೌರವ ನೀಡಿದರೆ ಸೌಹಾರ್ದ ಭಾರತ ನಿರ್ಮಾಣವಾಗಲು ಸಾಧ್ಯ” ಎಂದರು.
ಡಾ. ಎಂ.ಎ ಖಾದ್ರಿ ಹಾಗೂ ಪಾಲ್ ಮಧುಕರ್ ರವರು ಮಾತನಾಡಿ, “ಎಲ್ಲ ಧರ್ಮದ ಬಂಧುಗಳು ಸಹೋದರತೆಯಿಂದ ಬಾಳಿದರೆ ಸಮೃದ್ಧ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ” ಎಂದರು.
ರಾಷ್ಟ್ರೀಯ ಬೌದ್ಧ ಮಾಹಾಸಭಾದ ಮಿಲಿಂದ್ ಗುರೂಜಿ ಮಾತನಾಡಿ, “ದೇಶಾದ್ಯಂತ ಸೌಹಾರ್ದತೆಯ ವಾತಾವರಣ ಇದೆ. ಈ ವಾತಾವರಣ ಯಾರು ಕಲ್ಮಶ ಮಾಡಬಾರದು. ಎಲ್ಲರಲ್ಲೂ ದಯೆ ಕರುಣೆ ಪ್ರೀತಿ ಸ್ನೇಹ ಮೂಡಿದರೆ ಭಾವೈಕ್ಯತೆ ಉಳಿಯುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೋರಾಟಗಾರ್ತಿ ಕೆ.ನೀಲಾ, ಸಂಗಮೇಶ ಎನ್ ಜವಾದಿ, ಪ್ರಭು ಖಾನಾಪುರ, ಇಸಾ ಬೇಗಂ,
ವಿಜಯಲಕ್ಷ್ಮಿ ಬಸವಕಲ್ಯಾಣ, ಸಿದ್ರಾಮಪ್ಪ ಗೊಂಧಳಿ, ಮೀಸ್ ಮೇರಿ ಮಾರ್ಗರೇಟ್, ಅಂಬಾಬಾಯಿ ಮಾಳಗೆ, ರೇಷ್ಮಾ ಹಂಸರಾಜ್, ಸೋನಮ್ಮ, ಜ್ಞಾನದೇವಿ,ಸಂತೋಷ,ಮಾಸುಲ್ದಾರ್, ಮಾಹಾರುದ್ರಪ್ಪ ಅಣದೂರ, ಬಸವರಾಜ ಮಂಕಲ್, ಚಂದ್ರಶೇಖರ ತಂಗಾ, ಭೀಮಶೆಟ್ಟಿ ವಡ್ಡನಕೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.




