ಸಂಯುಕ್ತ ಕಿಸಾನ ಮೋರ್ಚಾ (ಕರ್ನಾಟಕ ರಾಜ್ಯ ರೈತ ಸಂಘ, ಅಖಿಲ ಭಾರತ ಕಿಸಾನ ಸಭಾ, ದಲಿತ ಸಂಘರ್ಷ ಸಮಿತಿ) ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಬೀದರ್ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ರೈತರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಿದರು.
ಬಳಿಕ ರಾಷ್ಟ್ರಪತಿ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಬೀದರ್ ಉಪವಿಭಾಗಾಧಿಕಾರಿ ಮುಹಮ್ಮದ್ ಶಕೀಲ್ ಅವರಿಗೆ ಸಲ್ಲಿಸಿದರು.
‘ರಾಷ್ಟ್ರಮಟ್ಟದಲ್ಲಿ ರೈತ, ಕಾರ್ಮಿಕರ ಬೇಡಿಕೆಗಳನ್ನು ಒತ್ತಾಯಿಸಿ ನಡೆದ ಮುಷ್ಕರದ ನಂತರವೂ ಸರ್ಕಾರಗಳು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಕೇಂದ್ರ ಸರ್ಕಾರ ಪಾಲಿಸಿಲ್ಲ’ ಎಂದು ದೂರಿದರು.

ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಕಾನೂನು ಮಾನ್ಯತೆ ನೀಡುವುದು, ರೈತರ ಎಲ್ಲಾ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡುವುದು, ಕೃಷಿ ವಲಯಕ್ಕೆ ಹಾನಿಕಾರಕವಾಗುವ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
‘ವಿದೇಶಿ ಕಂಪನಿಗಳಿಗೆ ಅನುಕೂಲವಾಗುವ ಕಾರ್ಪೊರೇಟ್ ಪರ ನೀತಿಗಳನ್ನು ತಕ್ಷಣ ಕೈಬಿಡಬೇಕು. ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು (ಲೇಬರ್ ಕೋಡ್ಗಳು) ಹಿಂಪಡೆಯಬೇಕು, ಮನರೇಗಾ ಯೋಜನೆಯನ್ನು ಮುಂದುವರಿಸಬೇಕು, ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಮಿಕರನ್ನು ಸರ್ಕಾರಿ ನೌಕರರಂತೆ ಪರಿಗಣಿಸಿ ಕನಿಷ್ಠ ರೂ. 25,000 ಮಾಸಿಕ ವೇತನ ಹಾಗೂ ನಿವೃತ್ತಿ ಭದ್ರತೆ ನೀಡಬೇಕು’ ಎಂದು ಒತ್ತಾಯಿಸಿದರು.
ಜನಪ್ರತಿನಿಧಿಗಳ ಹೆಚ್ಚುತ್ತಿರುವ ಭತ್ಯೆ ಹಾಗೂ ಪಿಂಚಣಿಯನ್ನು ಪ್ರಶ್ನಿಸಿದ ಪ್ರತಿಭಟನಾಕಾರರು, ರೈತರು ಮತ್ತು ಕಾರ್ಮಿಕರಿಗೆ ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಭದ್ರತೆ ಒದಗಿಸಬೇಕು. ಸರ್ಕಾರಗಳು ಈ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಬೀದರ್ | ಸಾಹಿತ್ಯದಿಂದ ವೈಚಾರಿಕತೆ ಬೋಧಿಸಿದ ದಾಸರು
ಪ್ರತಿಭಟನೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖರಾದ ಬಾಬುರಾವ ಹೊನ್ನಾ, ಮಲ್ಲಿಕಾರ್ಜುನ ಸ್ವಾಮಿ, ನಜೀರ್ ಅಹ್ಮದ್, ಎಂ.ಡಿ.ಖಮರ್ ಪಟೇಲ್, ಶೇಖ್ ನವಾಜ್, ಎಂ.ಡಿ.ಶಫಾಯತ್ ಅಲಿ, ಜೈಶೀಲಕುಮಾರ, ವೀರಶೆಟ್ಟಿ ವಟಂಬೆ, ಪ್ರಭು ತಗಣಿಕರ್, ಬಸವರಾಜ ಅಷ್ಪೂರೆ, ಸೇರಿದಂತೆ ಹಲವು ರೈತ, ಕಾರ್ಮಿಕ, ಎಐಟಿಯುಸಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.





