ಬೀದರ್ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇಂದಿಗೂ ಮೌಢ್ಯ, ಅಂಧಶ್ರದ್ಧೆ ತಾಂಡವಾಡುತ್ತಿದ್ದು, ಕೂಡಲೇ ಜಿಲ್ಲಾಡಳಿತ ಅದನ್ನು ಸಂಪೂರ್ಣವಾಗಿ ನಿರ್ಮೂಲನೆಗೆ ಮುಂದಾಗಬೇಕೆಂದು ದಲಿತ ಯುನಿಟಿ ಮೂವ್ಮೆಂಟ್ ಸಂಘಟನೆ ಸಂಸ್ಥಾಪಕ ವಿನೋದ ರತ್ನಾಕರ ಆಗ್ರಹಿಸಿದರು.
ʼಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಂಧಶ್ರದ್ಧೆ, ಜಾನಿ ಪೊತ್ರಾಜ್ ಅಂತಹ ಅನಿಷ್ಠ ಪದ್ಧತಿಯು ಮಾನವ ಘನತೆಗೆ ವಿರುದ್ಧವಾದ ಅಮಾನವೀಯ ಆಚರಣೆಗಳಾಗಿವೆ. ಆದರೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜನಪ್ರತಿನಿಧಿಗಳು ಮೌನ ವಹಿಸಿರುವುದು ಖಂಡನೀಯʼ ಎಂದು ಗುರುವಾರ ಬೀದರ್ ನಗರದ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ʼರಾಜ್ಯದಲ್ಲಿ ಅಂಧಶ್ರದ್ಧೆ ನಿರ್ಮೂಲನಾ ಕಾಯ್ದೆ ಜಾರಿಯಲ್ಲಿದ್ದರೂ ಅದನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಇದು ಕೇವಲ ನಿರ್ಲಕ್ಷ್ಯವಲ್ಲ, ಇದು ಅಂಧಶ್ರದ್ಧೆಗೆ ಮೌನವಹಿಸಿ ಬೆಂಬಲ ನೀಡುವುದು ವ್ಯವಸ್ಥಾತ್ಮಕ ಅಪರಾಧವಾಗಿದೆ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಮೌನ ಅಂಧಶ್ರದ್ಧೆಗೆ ಬೆಂಬಲಿಸಿದಂತಾಗಿದೆʼ ಎಂದು ಆರೋಪಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಪ್ರಕಾಶ್ ರಾವಣ ಮಾತನಾಡಿ, ʼ ಅನಿಷ್ಠ ಆಚರಣೆ, ಅಂಧಶ್ರದ್ಧೆ ಇಂದಿಗೂ ಜೀವಂತವಾಗಿರಲು ರಾಜಕಾರಣಿಗಳು ಮತ್ತು ಆಡಳಿತ ವ್ಯವಸ್ಥೆಯೇ ನೇರ ಕಾರಣ. ಮತಬ್ಯಾಂಕ್ ರಾಜಕೀಯಕ್ಕಾಗಿ ಅಂಧಶ್ರದ್ಧೆ ಪೋಷಿಸಲಾಗುತ್ತಿದೆ. ಇದು ಸಂವಿಧಾನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರರ ಚಿಂತನೆಗೆ ಮಾಡುವ ಅವಮಾನವಾಗಿದೆʼ ಎಂದು ಹೇಳಿದರು.
ಸಂಘಟನೆ ಕಾರ್ಯದರ್ಶಿ ಮುಖಂಡ ಗೌತಮ್ ದೊಡ್ಡಿ ಡಾಕುಳಗಿ ಮಾತನಾಡಿ, ʼಜಾನಿ ಪೊತ್ರಾಜ್ ಅನಿಷ್ಠ ಪದ್ಧತಿಯು ಮಹಿಳಾ ಶೋಷಣೆ, ಮಾನಸಿಕ, ಸಾಮಾಜಿಕ ಹಿಂಸೆ ಹಾಗೂ ಮಾನವ ಘನತೆಯ ನಾಶಕ್ಕೆ ಕಾರಣವಾಗಿದೆ. ಕಾನೂನು ಉಲ್ಲಂಘಿಸಿ ನಡೆಸುವ ಈ ಆಚರಣೆ ಮಾನವೀಯತೆಯ ಮೇಲಿನ ಅಪರಾಧʼ ಎಂದು ತಿಳಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ವಿನೀತ್ ಗಿರಿ ಮಾತನಾಡಿ, ʼಜಿಲ್ಲೆಯ ಅನೇಕ ಗ್ರಾಮಗಳಲ್ಲಿ ನಡೆಯುತ್ತಿರುವ ಮೌಢ್ಯ, ಅಂಧಶ್ರದ್ಧೆ ತಕ್ಷಣ ನಿಲ್ಲಿಸದಿದ್ದರೆ ಸಂಬಂಧಪಟ್ಟ ಶಾಸಕರ ಮನೆ ಮುಂದೆ ಸಂವಿಧಾನಾತ್ಮಕವಾಗಿ ಹೋರಾಟ ನಡೆಸುತ್ತೇವೆʼ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | ಗಡಿ ತಾಲೂಕಿನಲ್ಲಿ ಸಂಭ್ರಮದ ʼನುಡಿ ಜಾತ್ರೆʼ ನಡೆಸಲು ತೀರ್ಮಾನ: ಹೇಗಿದೆ ತಯ್ಯಾರಿ?
ಉತ್ತಮ ಕೆಂಪೆ ಮಾತನಾಡಿ, ʼಕರ್ನಾಟಕ ಅಂಧಶ್ರದ್ಧಾ ನಿರ್ಮೂಲನಾ ಕಾಯ್ದೆಯ ಅಡಿಯಲ್ಲಿ ಈ ಕೃತ್ಯಗಳು ಸ್ಪಷ್ಟವಾಗಿ ಅಪರಾಧವಾಗಿವೆ. ಕೆಲವು ಪ್ರಕರಣಗಳು ಜಾಮೀನು ರಹಿತವಾಗಿವೆ. ಆದರೂ, ಪೊಲೀಸರು ಪ್ರಕರಣ ದಾಖಲಿಸದೆ, ಆರೋಪಿಗಳನ್ನು ರಕ್ಷಿಸುವ ಧೋರಣೆ ತಾಳುತ್ತಿದ್ದಾರೆʼ ಎಂದು ದೂರಿದರು.





