ಬಸವಕಲ್ಯಾಣ ನಗರದ ಯಾತ್ರಿ ನಿವಾಸ ಕಡೆಸಂಜೆ ವಾಕಿಂಗ್ಗೆ ತೆರಳಿದ್ದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಇಬ್ಬರು ಮುಸ್ಲಿಂರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ ಆರೋಪದಡಿ ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.3ರಂದು ಇಬ್ಬರು ಮೇಲೆ 6-7 ಜನರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹಲ್ಲೆಗೊಳಗಾದ ಮುಹಮ್ಮದ್ ಆರೀಫ್ ಹಾಗೂ ಸೈಯದ್ ಇಮ್ರಾನ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಈ ಪ್ರಕರಣ ಸಂಬಂಧ ಮುಸ್ಲಿಂ ಸಮುದಾಯದವರು ಅದೇ ದಿನ ರಾತ್ರಿ ಪೊಲೀಸ್ ಠಾಣೆ ಎದುರು ಜಮಾಯಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಹೈಡ್ರಾಮಾ ನಡೆಸಿದ್ದಾರೆ.
ಠಾಣೆ ಎದುರಿನಿಂದ ತೆರಳುವಂತೆ ಪೊಲೀಸರು ಹೇಳಿದರೂ ಕೇಳದ ಜನರು ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಈ ವೇಳೆ ಎಎಸ್ಐ ಮುಕ್ತಾರ್ ಪಟೇಲ್ ಅವರಿಗೆ ಗಾಯಗಳಾಗಿದ್ದು, ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಕ್ರಮ ಕೂಟ ರಚಿಸಿಕೊಂಡು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ಠಾಣೆಯ ಸಿಬ್ಬಂದಿ ನೀಡಿದ ದೂರಿನಂತೆ 49 ಜನ ಮುಸ್ಲಿಂ ಸಮುದಾಯದವರ ಮೇಲೆ ಪ್ರಕರಣ ದಾಖಲಾಗಿದೆ.
ನಿನ್ನೆ ತಡರಾತ್ರಿಯಿಂದ ಬಸವಕಲ್ಯಾಣ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಡಿಐಜಿಪಿ ಮತ್ತು ಎಸ್ಪಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೀದರ್ | ಚಂದ್ರ ಗ್ರಹಣ : ʼಮೌಢ್ಯತೆ ತೊಲಗಲಿʼ ಜಾಗೃತಿ ಕಾರ್ಯಕ್ರಮ





