ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಬಿಜೆಪಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಸಮಯ ಸಂದರ್ಭಕ್ಕೆ ತಕ್ಕಂತೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ದ್ವೇಷ ರಾಜಕಾರಣ ಮುಂದುವರೆಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮೇಲೆ ಭಾಲ್ಕಿಯಲ್ಲಿ ಪ್ರಕರಣ ದಾಖಲಿಸಿದ್ದು ಸಹ ಅವರ ದ್ವೇಷ ರಾಜಕಾರಣಕ್ಕೆ ಮತ್ತೊಂದು ಸಾಕ್ಷಿಯಾಗಿದೆ, ಇದನ್ನ ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ ಎಂದು ಸೋಮನಾಥ ಪಾಟೀಲ್ ಪ್ರಕಟಣೆಯಲ್ಲಿ ಬುಧವಾರ ತಿಳಿಸಿದ್ದಾರೆ.
ʼಪಾಪನಾಶ ದೇವಸ್ಥಾನಕ್ಕೆ ನಾವು ನಮ್ಮ ಕಾರ್ಯಕರ್ತರೊಂದಿಗೆ ಶಾಂತಿಯುತವಾಗಿ ಪೂಜೆ ಮಾಡಲು ತೆರಳಿದಾಗ ಈಶ್ವರ ಖಂಡ್ರೆ ಅವರು ಪೊಲೀಸ್ರನ್ನು ಮುಂದೆ ತಂದು ನಮ್ಮನ್ನು ತಡೆದು, ಬಿಸಿಲಿನಲ್ಲಿ ಎರಡ್ಮೂರು ಗಂಟೆಗಳ ಕಾಲ ಕಾಯಿಸಿ, ಕೊನೆಗೆ ಕಾರ್ಯಕರ್ತರಿಗೆ ಪೂಜೆ, ಅಭಿಷೇಕ ಮಾಡಲು ಅವಕಾಶ ನೀಡಲಿಲ್ಲ. ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಈ ಘಟನೆ ಕಂಡು ಆವೇಶದಲ್ಲಿ ಭಗವಂತ ಖೂಬಾ ಅವರು ಖಂಡ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರುʼ ಎಂದಿದ್ದಾರೆ.
ʼಇದರ ಬಗ್ಗೆ ಈಗಾಗಲೇ ನಾನು ತಿಳಿಸಿರುವೆ. ಇಷ್ಟಾದರೂ ಈಶ್ವರ ಖಂಡ್ರೆಯವರು ಅವರ ಪಕ್ಷದ ಕಾರ್ಯಕರ್ತನ ಕೈಯಿಂದ ಖಾಸಗಿ ದೂರು ಕೊಡಿಸಿ, ನ್ಯಾಯಾಲಯದಿಂದ ಆದೇಶ ಮಾಡಿಸಿ, ಪ್ರಕರಣ ದಾಖಲಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ನಾಲ್ಕು ಬಾರಿ ಶಾಸಕರಾಗಿ, ರಾಜ್ಯದಲ್ಲಿ ಮಂತ್ರಿಯಾಗಿರುವ ಖಂಡ್ರೆಗೆ ಇದು ಶೋಭೆ ತರುವುದಿಲ್ಲʼ ಎಂದು ಸೊಮನಾಥ ಪಾಟೀಲ್ ಕೀಡಿಕಾರಿದ್ದಾರೆ.
ʼಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಖಂಡ್ರೆ ಅವರ ಕಾರ್ಯಕರ್ತ ತುಕರಾಮ ಎಂಬಾತ ವಿಡಿಯೋ ಮಾಡಿ, ಜೀವ
ಬೆದರಿಕೆ ಹಾಕಿ, ನಿಂದನೆ ಮಾಡಿದ್ದಾನೆ. ಆತನ ಮೇಲೆ ಪೊಲೀಸರು ಇಲ್ಲಿಯವರೆಗೆ ಸುಮೋಟೊ ಕೇಸ್ ದಾಖಲಿಸಿಲ್ಲ. ಒಬ್ಬ
ಜನಪ್ರತಿನಿಧಿ ಬಗ್ಗೆ ಪೊಲೀಸ್ ಇಲಾಖೆ ಇಷ್ಟೊಂದು ನಿಷ್ಕಾಳಜಿ ತೊರಿಸಿದರೆ ಇನ್ನು ಸಾಮಾನ್ಯರ ಗತಿಯೇನುʼ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಸಚಿವ ಖಂಡ್ರೆಗೆ ನಿಂದನೆ : ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ದೂರು ದಾಖಲು
ಕೂಡಲೇ ಭಗವಂತ ಖೂಬಾ ಅವರ ಮೇಲೆ ಹಾಕಿರುವ ಪ್ರಕರಣ ಕೈ ಬಿಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸೊಮನಾಥ ಪಾಟೀಲ್
ಆಗ್ರಹಿಸಿದ್ದಾರೆ.





