ಬೀದರ್ ಹೊರವಲಯದ ನಂದಿ ನಗರದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯನಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ 15ನೇ ಘಟಿಕೋತ್ಸವವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ಚಂದ್ ಗೆಹೋಟ್ ಅವರು ಪದವಿ ಪ್ರದಾನ ಮಾಡಲಿದ್ದಾರೆ. ಪಶು ಸಂಗೋಪನೆ ಸಚಿವರು ಹಾಗೂ ವಿಶ್ವವಿದ್ಯಾಲಯ ಸಹ ಕುಲಾಧಿಪತಿಯಾದ ಕೆ.ವೆಂಕಟೇಶ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿರುವರು. ಇಕ್ರಿಸ್ಯಾಟ್ ಮಹಾ ನಿರ್ದೇಶಕ ಡಾ.ಹಿಮಾಂಶು ಪಾಠಕ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಒಟ್ಟು 576 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ 455 ಸ್ನಾತಕ ಪದವೀಧರರು, 107 ಸ್ನಾತಕೋತ್ತರ ಹಾಗೂ 14 ಡಾಕ್ಟರೇಟ್ ಪದವೀಧರರು ಸೇರಿದ್ದಾರೆ. ಘಟಿಕೋತ್ಸವದ ದಿನದಂದು 94 ಪದವೀಧರರು ಉಪಸ್ಥಿತರಾಗಿ ಪದವಿ ಪಡೆಯಲಿದ್ದಾರೆ.
ಘಟಿಕೋತ್ಸವದಲ್ಲಿ ಒಟ್ಟು 34 ಪ್ರತಿಭಾನ್ವಿತ ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವೀಧರರಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಗುತ್ತದೆ. ಅದರಲ್ಲಿ 21 ವಿಶ್ವವಿದ್ಯಾಲಯದ ಪದಕಗಳು ಹಾಗೂ 60 ಪ್ರಾಯೋಜಿತ ಚಿನ್ನದ ಪದಕಗಳಾಗಿವೆ ಎಂದು ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ಮಾಹಿತಿ ನೀಡಿದರು.
2023-24ನೇ ಸಾಲಿನ ಬಿ.ವಿ.ಎಸ್ಸಿ.ಎ.ಹೆಚ್.ನಲ್ಲಿ ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದ ಖುಷಿ 16 ಚಿನ್ನದ ಪದಕ, ಬೀದರ ಪಶುವೈದ್ಯಕೀಯ ಕಾಲೇಜುದ ದೇವರಾಜ್ 4 ಚಿನ್ನದ ಪದಕ, ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನ ನಯನ ಎನ್. ಹಾಗೂ ಮೇಘನ ಎಸ್. ಅವರು ತಲಾ 3 ಚಿನ್ನದ ಪದಕ, ಇದೇ ಕಾಲೇಜಿನ ಕವಿತಾ ಮಾಲಗುಡಪ್ಪನವರ್ 2 ಚಿನ್ನದ ಪದಕ ಪಡೆಯಲಿದ್ದಾರೆ.
ಬಿ.ಟೆಕ್ (ಹೈನು ತಂತ್ರಜ್ಞಾನ) ವಿಭಾಗದಲ್ಲಿ ಬೆಂಗಳೂರು ಹೈನು ವಿಜ್ಞಾನ ಕಾಲೇಜುದ ಭೂಮಿಕಾ ಕೆ.ಆರ್. 6 ಚಿನ್ನದ ಪದಕಗಳಿಗೆ ಭಾಜನರಾಗಲಿದ್ದಾರೆ. ಬಿ.ಎಫ್.ಎಸ್.ಸಿ. ವಿಭಾಗದಲ್ಲಿ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ವಿಜಯಲಕ್ಷ್ಮೀ ಮೊಗವೀರ 3 ಚಿನ್ನದ ಪದಕ ಹಾಗೂ 2024-25ನೇ ಸಾಲಿನಲ್ಲಿ ಇದೇ ಕಾಲೇಜಿನ ಖುಷಿ ಎನ್. 3 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ.
ಸ್ನಾತಕೋತ್ತರ ಪದವಿ ವಿಭಾಗ (15 ವಿದ್ಯಾರ್ಥಿಗಳು- 30 ಪದಕ)
2023-24ನೇ ಸಾಲಿನ ಎಂ.ವಿ.ಎಸ್ಸಿ.ನಲ್ಲಿ ಬೆಂಗಳೂರು ಪಶುವೈದ್ಯಕೀಯ ಕಾಲೇಜುದ ವಿಜಯಕುಮಾರ ಎಂ.ಸಿ. ಅವರು ಕುಕ್ಕುಟ ಶಾಸ್ತ್ರದಲ್ಲಿ 6 ಚಿನ್ನದ ಪದಕ, ತನ್ಮಯಕುಮಾರ ಆರ್. ಅವರು ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರದಲ್ಲಿ 3 ಚಿನ್ನದ ಪದಕ ಪಡೆಯಲಿದ್ದಾರೆ. ಹಾಸನ ಪಶುವೈದ್ಯಕೀಯ ಕಾಲೇಜುದ ಅಜಯ ಎಚ್.ಎಂ. ಅವರು ಪಶುವೈದ್ಯಕೀಯ ಔಷಧ ಮತ್ತು ವಿಷಶಾಸ್ತ್ರದಲ್ಲಿ 3 ಚಿನ್ನದ ಪದಕ ಗಳಿಸಲಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ನಿರುದ್ಯೋಗ ಸಮಸ್ಯೆ ಸರಳವಲ್ಲ, ಸ್ಪಂದಿಸದಿದ್ದರೆ ಸರ್ಕಾರಕ್ಕೆ ತೊಂದರೆ ತಪ್ಪಿದ್ದಲ್ಲ
ಎಂ.ಬಿ.ಎ (ಆಹಾರ ವ್ಯವಹಾರ) ವಿಭಾಗದಲ್ಲಿ ಬೆಂಗಳೂರು ಹೈನು ವಿಜ್ಞಾನ ಕಾಲೇಜುದ ಸಿದ್ದೇಶ್ವರಿ ತಮಗೊಂಡ 2 ಚಿನ್ನದ ಪದಕ, ಎಂ.ಎಫ್.ಎಸ್ಸಿ. ವಿಭಾಗದಲ್ಲಿ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ದೇವಗುಪ್ತಾಪು ಅಚ್ಚುತ ಲಕ್ಷ್ಮೀ ವಂದನಾ ಅವರು ಜಲಚರ ಪರಿಸರ ನಿರ್ವಹಣೆಯಲ್ಲಿ 2 ಹಾಗೂ ಮಂದರಾ ಸಿ. ಅವರು ಜಲವಾಸಿ ಪ್ರಾಣಿಗಳ ಆರೋಗ್ಯ ನಿರ್ವಹಣೆಯಲ್ಲಿ 2 ಚಿನ್ನದ ಪದಕ ಪಡೆಯಲಿದ್ದಾರೆ.





