ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಅಧೀನ ಇಲಾಖೆಗಳಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಡಿ ಸಾರ್ವಜನಿಕರ ಹಿತದೃಷ್ಟಿಯಿಂದ ಉದ್ಯೋಗ ಮೇಳ, ಸಿರಿಧಾನ್ಯ, ಫಲಪುಷ್ಪ ಹಾಗೂ ಮತ್ಸ್ಯ ಮೇಳಗಳನ್ನು ನಾಳೆ (ಫೆ.22) ರಂದು ಬೀದರ ನಗರ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಗಿರೀಶ ಬದೋಲೆ ತಿಳಿಸಿದ್ದಾರೆ.
ನಾಳೆ ಬೆಳಿಗ್ಗೆ 10 ಗಂಟೆಗೆ ನಗರದಲ್ಲಿ ಸಿರಿಧಾನ್ಯ ನಡಿಗೆ ನಡೆಯಲಿದೆ. ಬಳಿಕ 11 ಗಂಟೆಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಮೇಳ ಮಳಿಗೆಗಳಿಗೆ ಚಾಲನೆ ನೀಡುವರು.
ಉದ್ಯೋಗ ಮೇಳ: ಉದ್ಯೋಗ ಮೇಳದಲ್ಲಿ, ವಿವಿಧ ಕಂಪನಿಗಳು ಕೌಶಲ್ಯಯುತ ಹಾಗೂ ಉತ್ತಮ ಉದ್ಯೋಗಿಗಳನ್ನು ಆಯ್ಕೆ ಮಾಡಲು ಭಾಗವಹಿಸುತ್ತಿದ್ದು, ಮೇಳದಲ್ಲಿ 32 ವಿವಿಧ ಕಂಪನಿಗಳು ಭಾಗವಹಿಸುತ್ತಿವೆ. ವೇದಿಕೆಯ ಮುಂಭಾಗದ ಎರಡೂ ಬದಿಯಲ್ಲಿ 49 ಮಳಿಗೆಗಳು ನಿರ್ಮಿಸಲಾಗಿದೆ.

ಮೇಳದಲ್ಲಿ ಹೆಚ್ಚಿನ ಸಂಖ್ಯೆಯ ಕಂಪನಿಗಳು ಭಾಗವಹಿಸಲು, ಉದ್ಯೋಗಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲು ಎನ್ಆರ್ಎಲ್ಎಂ ಯೋಜನೆಯಿಂದ ಜಿಪಿಎಲ್ಎಫ್ ಗಳ ಮೂಲಕ ಗ್ರಾಮಗಳಲ್ಲಿ ಪ್ರಚಾರ ನಡೆಸಿ ನೋಂದಣಿಗಾಗಿ ಆನ್ಲೈನ್ ಲಿಂಕ್ನಲ್ಲಿ ನೋಂದಣಿ ಮಾಡಲಾಗುತ್ತಿದೆ. ಜಿಲ್ಲೆಯ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಉದ್ಯೋಗ ಮೇಳದ ಕರಪತ್ರ ನೀಡಿ ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿಕೊಳ್ಳುವಂತೆ ಪ್ರಚಾರ ಮಾಡಲಾಗಿದೆ. ಈಗಾಗಲೇ 7,170 ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾವಣೆ ಮಾಡಿಕೊಂಡು ಉದ್ಯೋಗ ಮೇಳದ ಸದುಪಯೋಗ ಪಡೆಯಬೇಕು ಎಂದಿದ್ದಾರೆ.
ಸಿರಿಧಾನ್ಯ ಮೇಳ : ಸಿರಿಧಾನ್ಯ ಮೇಳವನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾಗಿದ್ದು, ರೈತರಿಗೆ ಹಾಗೂ ನಗರ ವಾಸಿಗಳಿಗೆ ಸಿರಿಧಾನ್ಯದ ಮಹತ್ವವನ್ನು ತಿಳಿಸಲು ಹಾಗೂ ಜನರ ಆರೋಗ್ಯದ ಗುಣಮಟ್ಟವನ್ನು ಉನ್ನತೀಕರಿಸಲು ಸದರಿ ಮೇಳವನ್ನು ಆಯೋಜಿಸಲಾಗುತ್ತಿದೆ. ರೈತರಿಂದ ಸಿಗುವಂತಹ ಸಜ್ಜೆ, ನವಣಿ, ಜೋಳ, ಬರಗು, ರಾಗಿ, ಅರ್ಕಾ, ಕೊರಲೆ, ಉದಲು ಸಿರಿಧಾನ್ಯಗಳು ಈ ಮೇಳದಲ್ಲಿ ಸಾರ್ವಜನಿಕರಿಗೆ ತಲುಪಲು ವಿವಿಧ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ.

ಫಲಪುಷ್ಪ ಮೇಳ: ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳಡಿ ಫಲಪುಷ್ಪ ಮೇಳವನ್ನು ಆಯೋಜಿಸಲಾಗಿರುತ್ತದೆ. ಇದರಲ್ಲಿ ಹೊಚ್ಚಹೊಸತನ ರೂಪದಲ್ಲಿ ʼಗ್ರಾಮೀಣ ಜೀವನ ಶೈಲಿʼ ಎಂಬ ಘೋಷವಾಕ್ಯದಡಿ ರೈತ ದಂಪತಿ ತಮ್ಮ ತೋಟದಲ್ಲಿ ಕೆಲಸ ಮುಗಿಸಿಕೊಂಡು ತಾವು ಬೆಳೆದ ಬೆಳೆಗಳನ್ನು ಟ್ರ್ಯಾಕ್ಟರ್ನಲ್ಲಿ ತುಂಬಿಸಿಕೊಂಡು ಬರುತ್ತಿರುವ ಆಕರ್ಷಕ ಚಿತ್ರಣವನ್ನು ಬಗೆಬಗೆಯ ಹೂವುಗಳಲ್ಲಿ ಪ್ರಚುರಪಡಿಸಲಾಗುತ್ತಿದೆ.

ʼಮಾಡರ್ನ್ ಲೇಡಿʼ ಎಂಬ ತರಕಾರಿ ಹಾಗೂ ಹೂವುಗಳಲ್ಲಿ ಪ್ರತ್ಯೇಕವಾಗಿ ತಯ್ಯಾರಿಸಿ ಪ್ರದರ್ಶಿಸಲಾಗುತ್ತಿದ್ದು, ಜೊತೆಗೆ ನವಿಲು ತನ್ನ ರೆಕ್ಕೆಯನ್ನು ತೆರೆಯುವ ಚಿತ್ರವನ್ನು ಹೂವಿನ ಆಕೃತಿಯಲ್ಲಿ ಅಲಂಕರಿಸಿ ಪ್ರದರ್ಶಿಸಲಾಗುತ್ತದೆ. ಇದರೊಂದಿಗೆ ಆಕಳು ಮತ್ತು ಅದರ ಕರುವನ್ನು ಹೂವಿನಲ್ಲಿ ನವನೂತನ ರೀತಿಯಲ್ಲಿ ಅಲಂಕರಿಸಿ ಪ್ರದರ್ಶಿಸಲಾಗುತ್ತಿದ್ದು, ಹಣ್ಣು ಮತ್ತು ತರಕಾರಿಯಲ್ಲಿ ವಿವಿಧ ಬಗೆಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಮತ್ಸ್ಯಮೇಳ: ಮಿನುಗಾರಿಕೆ ಇಲಾಖೆಯಿಂದ ಮತ್ಸ್ಯಮೇಳವನ್ನು ಆಯೋಜಿಸಲಾಗಿದ್ದು ಸದರಿ ಮೇಳದಲ್ಲಿ ವಿವಿಧ ತಳಿಯ (ಒಳನಾಡ ಮತ್ತು ಕರಾವಳಿ) ಮಿನುಗಳು ಪ್ರದರ್ಶಿಸಲಾಗುವುದು. ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ, ಮೀನುಗಾರರಿಗೆ ಮಾಹಿತಿ ಒದಗಿಸಲಾಗುವುದು. ಮೀನು ಕೃಷಿಕೋಳ ಮಾದರಿ, ಮತ್ಸ್ಯಕನ್ಯೆ ಮಾದರಿ ಮತ್ತು ಮೀನುಗಾರರ ಸೌಲಭ್ಯಕ್ಕಾಗಿ ಒದಗಿಸುವ ಮೀನು ಹಿಡಿಯುವ ಬಲೆ, ಬೋಟ್, ಲೈಫ್ ಜಾಕೇಟ್ ಮಾದರಿಗಳನ್ನು ಈ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ.

ಇದನ್ನೂ ಓದಿ : ಸಮೀಕ್ಷೆ ವರದಿ | 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿರ್ಬಂಧಿಸಿ : ಪೋಷಕರ ಬೇಡಿಕೆ
ಬೀದರ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಇಷ್ಟು ದೊಡ್ಡಮಟ್ಟ ವಿವಿಧ ಇಲಾಖೆಗಳ ಜೋಡಣೆಯೊಂದಿಗೆ ಮೇಳಗಳನ್ನು ಆಯೋಜನೆ ಮಾಡಲಾಗಿದ್ದು, ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮೇಳದಲ್ಲಿ ಭಾಗವಹಿಸಿ ಸದುಪಯೋಗಪಡೆಯಬೇಕೆಂದು ಜಿಲ್ಲಾ ಪಂಚಾಯತ ಸಿಇಒ ಡಾ.ಗಿರೀಶ ಬದೋಲೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.





