ಸ್ವಚ್ಛತೆ ಹಾಗೂ ಶೌಚಾಲಯ ನಿರ್ಮಾಣ–ನಿರ್ವಹಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲೂ ಮಹಿಳೆಯರಿಗಾಗಿ ಹೈಟೆಕ್ ಶೌಚಾಲಯ ನಿರ್ಮಿಸುವ ಮಹತ್ವಕಾಂಕ್ಷಿ ಯೋಜನೆ ರೂಪಿಸಿ ಕೋಟ್ಯಾಂತರ ಅನುದಾನ ಸುರಿದರೂ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಂಡಿಲ್ಲ.
ರಾಜ್ಯ ಸರ್ಕಾರ ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ 2023-24ನೇ ಸಾಲಿನ ಸರ್ಕಾರದ ಬಜೆಟ್ನಲ್ಲಿ ಘೋಷಣೆ ಅನ್ವಯ ಕಲ್ಯಾಣ ಕರ್ನಾಟಕ ಭಾಗದ ಬೀದರ್ ಜಿಲ್ಲೆಗೆ ಒಟ್ಟು 60 ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕಗಳು ಮಂಜೂರಾಗಿವೆ. ಪ್ರತಿ ಹೈಟೆಕ್ ಶೌಚಾಲಯಕ್ಕೆ ₹25 ಲಕ್ಷದಂತೆ ಒಟ್ಟು ₹15 ಕೋಟಿ ಮಂಜೂರಾಗಿದೆ.
ಈ ಯೋಜನೆಯ ಮಾರ್ಗಸೂಚಿಯನ್ವಯ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕೆ ಸ್ಥಳದ ಅಭಾವವಿರುವ ಕುಟುಂಬಗಳಿಗೆ ಹಾಗೂ ಸಂತೆ, ಬಸ್ ನಿಲ್ದಾಣ, ಧಾರ್ಮಿಕ ಕ್ಷೇತ್ರ ಹಾಗೂ ಇತರ ಕಾರಣಗಳಿಂದ ಉಂಟಾಗುವ ಜನಸಂದಣಿ ಇರುವ ಪ್ರದೇಶಗಳಲ್ಲಿ ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕಗಳನ್ನು ನಿರ್ಮಿಸಿ ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸುಸ್ಥಿರತೆ ಕಾಯ್ದುಕೊಳ್ಳಲು ಸಮುದಾಯ ಶೌಚಾಲಯ ನಿರ್ಮಿಸುತ್ತಿದೆ.
ರಾಜ್ಯದಲ್ಲಿ ಪ್ರತಿ ಮನೆಗೂ ಶೌಚಾಲಯ ನಿರ್ಮಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿತ್ತು. ಕರ್ನಾಟಕವನ್ನು ʼಬಯಲು ಬಹಿರ್ದೆಸೆ ಮುಕ್ತ ರಾಜ್ಯʼ ಎಂದೂ ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ, ರಾಜ್ಯದ ಗ್ರಾಮೀಣ ಪ್ರದೇಶದ ಬಹುತೇಕ ಕಡೆಗಳಲ್ಲಿ ಜನರು ಶೌಚಾಲಯಗಳನ್ನು ಬಳಸುತ್ತಿಲ್ಲ. ಅವರು ಈಗಲೂ ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದಾರೆ. ಸರ್ಕಾರ ಮಹಿಳೆಯರಿಗಾಗಿ ಪ್ರತ್ಯೇಕ ಸಮುದಾಯ ಶೌಚಾಲಯ ನಿರ್ಮಿಸಿ ನೈರ್ಮಲ್ಯ, ಶುಚಿತ್ವ ಕಾಪಾಡುವ ಗುರಿ ಇದ್ದರೂ ಅಧಿಕಾರಿಗಳ ಇಚ್ಚಾಶಕ್ತಿ, ನಿರ್ವಹಣೆ ಸೇರಿ ಜನರ ಸಹಭಾಗಿತ್ವ ಕೊರತೆಯಿಂದ ಯೋಜನೆಗಳು ನಿರೀಕ್ಷಿತ ಯಶಸ್ವಿ ಕಾಣುತ್ತಿಲ್ಲ ಎಂಬುದು ನಾಗರಿಕರ ಅಭಿಪ್ರಾಯ.

ಮಹಿಳೆಯರಿಗೆ ಅತ್ಯಾಧುನಿಕ ಹಾಗೂ ವೈಜ್ಞಾನಿಕ ಮಾದರಿಯ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಸರ್ಕಾರ ಕೋಟಿಗಟ್ಟಲೆ ಅನುದಾನ ಒದಗಿಸಿದೆ. ಅನುದಾನ ಬಂದು ಒಂದು ವರ್ಷ ಕಳೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸದೆ ಇರುವುದು, ಅರೆ-ಬರೆ ಖರ್ಚು ಮಾಡಿ ಶೌಚಾಲಯಗಳನ್ನೂ ನಿರ್ಮಿಸದಿರುವುದು, ಕೆಲವೆಡೆ ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಳಿಸಿರುವುದು ಹಾಗೂ ಪೂರ್ಣಗೊಂಡ ಶೌಚಾಲಯ ಸಮರ್ಪಕ ಸದ್ಬಳಕೆ ಆಗದಿರುವ ಬಗ್ಗೆ ʼಈದಿನʼ ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಬೆಳಕಿಗೆ ಬಂದಿದೆ.
ಯಾವ ತಾಲೂಕಿಗೆ ಎಷ್ಟು ಶೌಚಾಲಯ :
ಬೀದರ್ ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಮ ವ್ಯಾಪ್ತಿಯ ಆಯ್ದ ಗ್ರಾಮಗಳಲ್ಲಿ ಮಹಿಳಾ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲು ಮಂಜೂರು ಮಾಡಲಾಗಿದೆ. ಅದರಲ್ಲಿ ಬೀದರ್ (10), ಭಾಲ್ಕಿ (16), ಹುಮನಾಬಾದ್ (6) ಬಸವಕಲ್ಯಾಣ (13) ಚಿಟಗುಪ್ಪ (4) ಕಮಲನಗರ (7) ಹುಲಸೂರ (2) ಹಾಗೂ ಔರಾದ್ (2) ಸೇರಿ ಒಟ್ಟು 60 ಶೌಚಾಲಯ ನಿರ್ಮಿಸುವ ಗುರಿಯಿದೆ.
ಜಿಲ್ಲೆಗೆ ಮಂಜೂರಾದ ಒಟ್ಟು 60 ಶೌಚಾಲಯಗಳಲ್ಲಿ ಇಲ್ಲಿಯವರೆಗೆ 12 ಕಾಮಗಾರಿ ಮಾತ್ರ ಪೂರ್ಣಗೊಂಡಿವೆ. 24 ಕಾಮಗಾರಿ ಮುಗಿಯುವ ಹಂತದಲ್ಲಿವೆ, ಬೇಸ್ಮೆಂಟ್ ಹಂತದಲ್ಲಿ 6, ಶುರುಮಾಡಬೇಕಾದ ಕಾಮಗಾರಿ 6 ಇವೆ. 12 ಪ್ರಗತಿಯಲ್ಲಿರುವ ಕಾಮಗಾರಿ ಎಂದು ಬೀದರ್ ಜಿಲ್ಲಾ ಕೆಆರ್ಐಡಿಎಲ್ ಇಲಾಖೆ ಅಧಿಕಾರಿಗಳು 2025ರ ನ.14ರಂದು ನೀಡಿದ ಅಧಿಕೃತ ಪ್ರಗತಿ ವರದಿ ಮಾಹಿತಿ ʼಈದಿನʼಕ್ಕೆ ಲಭ್ಯವಾಗಿದೆ.

ಸಮುದಾಯ ಶೌಚಾಲಯ ಮಂಜೂರಾದ ಒಟ್ಟು 60 ಗ್ರಾಮಗಳಲ್ಲಿ ಬೀದರ್ ತಾಲೂಕಿನ ಯರನಳ್ಳಿ, ಚಟನಳ್ಳಿ, ಶ್ರೀಮಂಡಲ, ಖಾಜಾಪುರ, ಭಾಲ್ಕಿ ತಾಲೂಕಿನ ಭಾತಂಬ್ರಾ, ಬಸವಕಲ್ಯಾಣ ತಾಲೂಕಿನ ಘೋಟಾಳ, ಹಾರಕೂಡ, ಚಿಟಗುಪ್ಪದ ಉಡಬಾಳ, ಹುಮನಾಬಾದ್ ತಾಲೂಕಿನ ಜಲಸಂಗಿ, ಧುಮ್ಮನಸೂರ, ಹುಡುಗಿ, ಕನಕಟ್ಟಾ ಗ್ರಾಮಗಳಲ್ಲಿ ಶೌಚಾಲಯ ಕಾಮಗಾರಿ ಪೂರ್ಣಗೊಂಡಿದೆ. ಹುಲಸೂರ, ಔರಾದ್ ಹಾಗೂ ಕಮಲನಗರ ತಾಲೂಕಿನಲ್ಲಿ ಒಂದೂ ಶೌಚಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ.
ಕಾಮಗಾರಿ ಮುಗಿಸಲು ಇನ್ನೆಷ್ಟು ವರ್ಷ ಬೇಕು?
ಬೀದರ್ ಜಿಲ್ಲೆಯಲ್ಲಿ ನಡೆಯುತ್ತಿರುವ ಸಮುದಾಯ ಹೈಟೆಕ್ ಮಹಿಳಾ ಶೌಚಾಲಯ ಕಾಮಗಾರಿಗಳನ್ನು ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಷರ್ ಡೆವಲಪಮೆಂಟ್ (ಕೆಆರ್ಐಡಿಎಲ್) ವತಿಯಿಂದ ನಡೆಸಲಾಗುತ್ತಿದೆ. ಒಂದೊಂದು ಗ್ರಾಮದಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಎಷ್ಟು ತಿಂಗಳು ಬೇಕಾಗುತ್ತದೆ? ಒಂದು ವರ್ಷ ಕಳೆಯುತ್ತಿದರೂ ಶೌಚಾಲಯಗಳು ಪೂರ್ಣಗೊಂಡಿಲ್ಲ. ಕೆಲಕಡೆ ಕಾಮಗಾರಿ ಶುರು ಮಾಡದೇ ಸರ್ಕಾರ ಒದಗಿಸಿದ ಅನುದಾನವನ್ನು ಹಾಗೆಯೇ ಉಳಿಸಲಾಗಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೈಗೊಂಡಿರುವ ಕಾಮಗಾರಿಗಳಿಗೆ ₹8.73 ಕೋಟಿ ಖರ್ಚಾಗಿದೆ. ಕಾಮಗಾರಿ ಪೂರ್ಣವಾದರೆ ಅನುದಾನ ಖರ್ಚಾಗುತ್ತದೆ. ಆದರೆ, ಕಾಮಗಾರಿಯನ್ನೇ ಶೀಘ್ರದಲ್ಲಿ ಪೂರ್ಣಗೊಳಿಸುತ್ತಿಲ್ಲ. ಶೌಚಾಲಯ ನಿರ್ಮಾಣ ಕಾಮಗಾರಿ ತ್ವರಿತ ಪೂರ್ಣಗೊಳಿಸದೇ ಇರುವುದಕ್ಕೆ ನಿಖರ ಕಾರಣಗಳೇನು ಎಂಬುದು ತಿಳಿದು ಬರುತ್ತಿಲ್ಲ. ಈ ಬಗ್ಗೆ ಕೆಆರ್ಐಡಿಎಲ್ ಬೀದರ್ ಉಪವಿಭಾಗದ ಎಇ ಅಭಿಷೇಕ ಪೋಲಾ ಅವರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸಲಿಲ್ಲ. ಕಚೇರಿಗೆ ತೆರಳಿದರೆ ಅಲ್ಲಿಯೂ ಲಭ್ಯವಿರಲಿಲ್ಲ.
ಯೋಜನೆಯ ಪ್ರಮುಖ ಉದ್ದೇಶವೇನು?
ಗ್ರಾಮೀಣ ಪ್ರದೇಶದಲ್ಲಿ ರೂಢಿಯಲ್ಲಿರುವ ಬಯಲು ಬಹಿರ್ದೆಸೆ ಪದ್ಧತಿಯನ್ನು ಸಂಪೂರ್ಣವಾಗಿ ತೊಲಗಿಸಿ, ಗ್ರಾಮಗಳನ್ನು ಸ್ವಚ್ಛ ಹಾಗೂ ಸುಂದರವನ್ನಾಗಿಸುವ ಮೂಲಕ ಗ್ರಾಮೀಣ ಜನರ ಆರೋಗ್ಯವನ್ನು ಕಾಪಾಡುವುದು, ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕಗಳ ನಿರ್ಮಾಣವು ಯೋಜನೆಯ ಪ್ರಮುಖ ಘಟಕಾಂಶವಾಗಿದೆ.

ಸಮುದಾಯ ನೈರ್ಮಲ್ಯ ಸಂಕೀರ್ಣ ನಿರ್ಮಾಣಕ ನಿಗದಿಪಡಿಸಲಾದ ₹3 ಲಕ್ಷಗಳಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ₹2.10 ಲಕ್ಷ ಮತ್ತು 15ನೇ ಹಣಕಾಸು ₹0.90 ಲಕ್ಷ ವಿನಿಯೋಗಿಸಿಕೊಂಡು ಅನುಷ್ಠಾನಗೊಳಿಸಲು ಅವಕಾಶವಿದ್ದು, ಜಿಲ್ಲಾ ಪಂಚಾಯತಿಯಿಂದ ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕಗಳ ನಿರ್ಮಾಣಕ್ಕೆ, ಸ್ವೀಕೃತವಾಗುವ ಪ್ರಸ್ತಾವನೆಗಳಿಗೆ ಮಂಜೂರಾತಿ ನೀಡಲಾಗುತ್ತಿದೆ.
ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕಗಳಿಗಿಂತ ನೈರ್ಮಲ್ಯ ಸಂಕೀರ್ಣಗಳನ್ನು ಅನುಷ್ಠಾನಗೊಳಿಸುವ ಮೂಲಕ ಅವುಗಳನ್ನು, ಸುಸ್ಥಿರ ನಿರ್ವಹಣೆಗೆ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲ್ಪಟ್ಟ ಹಾಗೂ ಏಕರೂಪ ವಿನ್ಯಾಸವುಳ್ಳ ಸುಸಜ್ಜಿತವಾದ ಸಮುದಾಯ ನೈರ್ಮಲ್ಯ ಸಂಕೀರ್ಣಗಳನ್ನು ಅನುಷ್ಠಾನಗೊಳಿಸುವ ಮೂಲಕ ಅವುಗಳನ್ನು ಸುಸ್ಥಿರ ನಿರ್ವಹಣೆಗೆ ಒಳಪಡಿಸುವ ಉದ್ದೇಶದಿಂದ 2023-24ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ʼಕಲ್ಯಾಣ ಕರ್ನಾಟಕʼ ಪ್ರದೇಶದಲ್ಲಿ ಒಟ್ಟು 400 ಸಮುದಾಯ ನೈರ್ಮಲ್ಯ ಸಂಕೀರ್ಣಗಳನ್ನು ತಲಾ ₹25 ಲಕ್ಷ ಘಟಕ ವೆಚ್ಚದಲ್ಲಿ ನಿರ್ಮಿಸಿ, ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ₹100 ಕೋಟಿ ಒದಗಿಸಲಾಗುವುದುʼ ಎಂದು ಸರ್ಕಾರದ ಆದೇಶದಲ್ಲಿ ಘೋಷಿಸಲಾಗಿದೆ.
ಶೌಚಾಲಯ ವಿನ್ಯಾಸ ಹೀಗಿದೆ :
ಸುಮಾರು 600 ಚದರ ಅಡಿಯಲ್ಲಿ ಆಕರ್ಷಣೆಯಾಗಿ ನಿರ್ಮಾಣಗೊಳ್ಳುವ ಮಹಿಳಾ ಹೈಟೆಕ್ ಶೌಚಗ್ರಹದಲ್ಲಿ ನೀರಿನ ಸಂಪರ್ಕ, ವಿದ್ಯುತ್ ದೀಪಗಳನ್ನು ಅಳವಡಿಸುವುದು. ಇನ್ವರ್ಟರ್ ವ್ಯವಸ್ಥೆ ಮಾಡಲಾಗಿದ್ದು ರಾತ್ರಿಯೂ ಶೌಚಾಲಯ ಬಳಸಬಹುದು. ಶೌಚಾಲಯ ಒಳಗಡೆ ಒಟ್ಟು 11 ಶೌಚ ಕೋಣೆ. ಈ ಪೈಕಿ 10 ಇಂಡಿಯನ್, ಒಂದು ವೆಸ್ಟರ್ನ್, ಅಂಗವಿಕಲಿರಿಗೂ ಮೀಸಲಿಡಲಾಗಿದೆ. ಕೈತೊಳೆದುಕೊಳ್ಳಲು ವಾಸ್ ಬೇಸಿನ್ ವ್ಯವಸ್ಥೆ ಇರಲಿದೆ. ಇನ್ನು ಶೌಚಾಲಯ ಎದುರುಗಡೆ ಬಟ್ಟೆ ತೊಳೆಯಲು ಎರಡು ಕಟ್ಟೆಗಳನ್ನು ಸಹ ನಿರ್ಮಿಸಲಾಗಿದೆ.

ಅನುದಾನ ದುರ್ಬಳಕೆ ಆರೋಪ :
ʼಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ 60 ಸಮುದಾಯ ಮಹಿಳಾ ಶೌಚಾಲಯ ಕಾಮಗಾರಿ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಯೋಜನೆಯ ಉದ್ದೇಶಕ್ಕೆ ತೊಂದರೆಯಾಗುತ್ತಿದೆ. ಬೀದರ ತಾಲ್ಲೂಕಿನ ಶ್ರೀಮಂಡಲ ಮತ್ತು ಖಾಜಾಪುರ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಕೆಆರ್ಐಡಿಎಲ್ ಅಧಿಕಾರಿಗಳು ಸುಳ್ಳು ಪ್ರಗತಿ ವರದಿ ಸಲ್ಲಿಸಿರುವುದು ಆಡಳಿತಾತ್ಮಕ ಲೋಪವಾಗಿದೆ. ಈ ಯೋಜನೆಯ ಅನುದಾನ ದುರ್ಬಳಕೆ ಮತ್ತು ಭ್ರಷ್ಟಾಚಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆʼ ಎಂದು ರಾಹುಲ್ ಗಾಂಧಿ ವಿಚಾರ ಮಂಚ್ ಬೀದರ್ ಜಿಲ್ಲಾಧ್ಯಕ್ಷ ಪ್ರೇಮನಾಥ ಗಾಂವಕಾರ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ವಿಬಿ-ಜಿ ರಾಮ್ ಜಿ ಕಾಯ್ದೆ: ಮನರೇಗಾ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಫಲರಾದ ಕೆಆರ್ಐಡಿಎಲ್ ಬೀದರ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಅಭಿಷೇಕ್ ಪೋಲಾ ಅವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಿ, ಸಮಗ್ರ ತನಿಖೆ ನಡೆಸಿ ದೋಷಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ಜ.2ರಂದು ಮನವಿ ಸಲ್ಲಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




