ಔರಾದ್ ಪಟ್ಟಣದ ತಹಸೀಲ್ ಕಚೇರಿ ಮುಂಭಾಗ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಅಲೆಮಾರಿ ಜನಾಂಗ ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ (ಜ.28) 10ನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಅಲೆಮಾರಿಗಳ ಸಮಸ್ಯೆ ಆಲಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ನಿವೇಶನ ಹಾಗೂ ವಸತಿ ಬೇಡಿಕೆಗೆ ಆಗ್ರಹಿಸಿ ಕಳೆದ 10 ಹತ್ತು ದಿನಗಳಿಂದ ಅಲೆಮಾರಿ ಸಮುದಾಯದ ಮಹಿಳೆಯರು, ಮಕ್ಕಳು ವಿಪರೀತ ಚಳಿಯಲ್ಲೂ ಧರಣಿ ಸ್ಥಳದಲ್ಲೇ ರಾತ್ರಿ ವಾಸ್ತವ್ಯ ಮಾಡುತ್ತಿದ್ದಾರೆ. ವಿವಿಧ ಪಕ್ಷಗಳು, ಸಂಘಟನೆಗಳು ಹೋರಾಟಕ್ಕೆ ಬೆಂಬಲಿಸಿವೆ. ಅಲ್ಲದೆ ಮಾಜಿ ಕೇಂದ್ರ ಸಚಿವ ಭಗವಂತಾ ಖೂಬಾ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಪುಂಡಲಿಕರಾವ್, ಅರವಿಂದಕುಮಾರ್ ಅರಳಿ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ʼನಾವು ನಿಮ್ಮೊಂದಿಗೆ ಇದ್ದೇವೆʼ ಎಂದು ಹೇಳಿ ನಿಮ್ಮ ಬೇಡಿಕೆ ಈಡೇರಿಕೆ ಸಂಬಂಧ ಅಧಿಕಾರಿಗಳಿಗೆ ತಿಳಿಸುತ್ತೇವೆʼ ಎಂದು ಭರವಸೆ ನೀಡಿದರು.
ʼಕಳೆದ ಮೂರ್ನಾಲ್ಕು ದಶಕದಿಂದ ಔರಾದ್ ಪಟ್ಟಣದ ಬಿಇಒ ಕಚೇರಿ, ಎಪಿಎಂಸಿ ಆವರಣ ಸೇರಿ ನಾನಾ ಕಡೆ ರಸ್ತೆ ಬದಿಯಲ್ಲಿ ಪುಟ್ಟ ಜೋಪಡಿಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗಕ್ಕೆ ವಸತಿ ಸೇರಿದಂತೆ ಕನಿಷ್ಠ ಮೂಲ ಸೌಕರ್ಯ ಒದಗಿಸುವಲ್ಲಿ ಜಿಲ್ಲಾ, ತಾಲೂಕಾಡಳಿತ ಸಂಪೂರ್ಣ ವಿಫಲವಾಗಿದೆ. ಮಂಜೂರಾದ ನಿವೇಶನ ಹಂಚಿಕೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಅಲೆಮಾರಿಗಳ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಕೂಡಲೇ ಮಂಜೂರಾದ ನಿವೇಶನ ಹಂಚಿಕೆಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆʼ ಎಂದು ಪ್ರತಿಭಟನೆ ನೇತ್ರತ್ವ ವಹಿಸಿರುವ ರಾಹುಲ್ ಖಂದಾರೆ ತಿಳಿಸಿದ್ದಾರೆ.
ಈ ಹಿಂದೆ ಅನೇಕ ಬಾರಿ ಅಧಿಕಾರಿಗಳು ಬರೀ ನಿವೇಶನ ಕೊಡುವ ಭರವಸೆ ನೀಡುತ್ತಿದ್ದಾರೆ. ಈಗ ಭರವಸೆ ಮೇಲೆ ನಮಗೆ ನಂಬಿಕೆ ಇಲ್ಲ. ಅಲೆಮಾರಿ ಜನಾಂಗಕ್ಕಾಗಿಯೇ ಪ್ರತ್ಯೇಕವಾಗಿ ಮಂಜೂರಾದ ಸರ್ವೇ ನಂ-183ರಲ್ಲಿ 2 ಎಕರೆ ಜಾಗ ಹಂಚಿಕೆ ಮಾಡಬೇಕು. ಈ ಹಿಂದೆ ರಾಜಕೀಯ ಒತ್ತಡದಿಂದ ಮಂಜೂರಾದ ಜಾಗ ರದ್ದುಪಡಿಸಬೇಕೆಂದು ಜಿಲ್ಲಾಡಳಿತಕ್ಕೆ ಬರೆದ ಪ್ರಸ್ತಾವನೆ ವರದಿ ವಾಪಸ್ ಪಡೆದು ಪುನಃ ಹಂಚಿಕೆ ಮಾಡಬೇಕೆಂಬುದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ಬೀದರ್ | ಫೆ.3ರಂದು SIR ವಿರೋಧಿಸಿ ಚಿಂತನ-ಮಂಥನ ಸಮಾವೇಶ
ʼತಾಲೂಕು ತಹಸೀಲ್ದಾರ್ ಮಹೇಶ ಪಾಟೀಲ್, ಬೀದರ್ ಸಹಾಯಕ ಆಯುಕ್ತ ಮುಹಮ್ಮದ್ ಶಕೀಲ್ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ನಿವೇಶನ ಹಂಚಿಕೆ ಬಗ್ಗೆ ಭರವಸೆ ಮಾತ್ರ ನೀಡಿದ್ದಾರೆ. ಆದರೆ, ಇಲ್ಲಿಯವರೆಗೆ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭೇಟಿ ನೀಡಿ ಅಲೆಮಾರಿಗಳ ಸಮಸ್ಯೆ ಆಲಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಮ್ಮ ಬೇಡಿಕೆ ಈಡೇರುವ ತನಕ ನಮ್ಮ ಅಹೋರಾತ್ರಿ ಧರಣಿ ಹಿಂಪಡೆಯುವುದಿಲ್ಲʼ ಹೋರಾಟಗಾರರು ಎಚ್ಚರಿಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಸುಭಾಷ ಲಾಧಾ, ಸಂತೋಷ ಸಿಂಧೆ, ನಾಗನಾಥ ವಾಕೋಡೆ, ಪ್ರವೀಣಕುಮಾರ ಕಾರಂಜೆ, ಸಿದ್ದಾರ್ಥ ಭೋಸ್ಲೆ, ಸುಂದರ ಮೇತ್ರೆ, ಸಂತೋಷ ಸೂರ್ಯವಂಶಿ ಸೇರಿದಂತೆ ಅಲೆಮಾರಿ ಸಮುದಾಯದವರು ಮಹಿಳೆಯರು, ಮಕ್ಕಳು ಧರಣಿಯಲ್ಲಿದ್ದಾರೆ.





