ಸಮಾಜದ ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಕಾಶಕರ ಪಾತ್ರ ಮಹತ್ವದ್ದು, ಸಾಹಿತ್ಯ, ಸಾಂಸ್ಕೃತಿಯ ಮೌಲ್ಯಗಳನ್ನು ಬಿತ್ತಿದವರು ಲೇಖಕರು ಎಂದು ಬಹುಭಾಷಾ ಸಾಹಿತಿ ಡಾ.ರಾಜಶೇಖರ ಮಠಪತಿ (ರಾಗಂ) ಹೇಳಿದರು.
ಹುಲಸೂರ ತಾಲೂಕಿನ ಬೇಲೂರ ಗ್ರಾಮದಲ್ಲಿ ಉರಿಲಿಂಗಪೆದ್ದಿ ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ ಉರಿಲಿಂಗಪೆದ್ದಿ ಮತ್ತು ಕಾಳವ್ವೆ ಉತ್ಸವ, ಲಿಂ. ಶಿವಲಿಂಗೇಶ್ವರ ಶಿವಯೋಗಿಗಳ 57ನೇ ಪುಣ್ಯಸ್ಮರಣೆ ಹಾಗೂ ಪ್ರಥಮ ಪ್ರಕಾಶಕರ ಸಮ್ಮೇಳನದ ಎರಡನೇ ದಿನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ʼಲೇಖಕನಿಗೆ ಸಾಮಾಜಿಕ ಕಳಕಳಿ, ಬದ್ಧತೆ ಇರಬೇಕು. ಲೋಕದ ಚಿಂತೆ ಮರೆಯಾಗದಂತೆ ಮಾನವೀಯ ಮೌಲ್ಯಗಳ ಬರಹಗಳನ್ನು ಹಂಚುವ ಕಾರ್ಯ ಪ್ರಕಾಶಕರು ಮಾಡಿದ್ದಾರೆ. ಇಂದಿನ ಯುವ ಜನಾಂಗ ಓದುವ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ. ಎಲ್ಲರೂ ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿ ಬಿತ್ತುವ ಮುಖಾಂತರ ಲೇಖಕ-ಪ್ರಕಾಶಕರಿಗೆ ಪ್ರೋತ್ಸಾಹಿಸಬೇಕುʼ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಮಾತನಾಡಿ, ʼಮನುಷ್ಯನೊಳಗಿನ ಕ್ರೌರ್ಯ, ಅಸಹನೆ, ದ್ವೇಷ ಇವೆಲ್ಲವನ್ನು ನಿವಾರಣೆ ಮಾಡುವ ಶಕ್ತಿ ಸಾಹಿತ್ಯಕ್ಕಿದೆ. ಎಲ್ಲರ ಆಶಯ, ಇಚ್ಛ, ಆಕಾಂಕ್ಷೆಗಳನ್ನು ಕಾಪಾಡುವ ಕೆಲಸವೂ ಸಾಹಿತ್ಯದಿಂದಲೇ ಸಾಧ್ಯ. ಹಿಂದೆ ಪುಸ್ತಕ ಓದುವುದೇ ಮುಖ್ಯವಾಗಿತ್ತು. ಇಂದು ಕಾಲ ಬದಲಾಗಿದೆ. ಕಥೆಗಳು ದೃಶ್ಯರೂಪದಲ್ಲಿ ಬರುತ್ತಿವೆ, ಕೇಳುವ ಮಾಧ್ಯಮಗಳೂ ಹೆಚ್ಚಾಗಿವೆʼ ಎಂದರು.
ʼನಮ್ಮ ಮಕ್ಕಳು ಬೆಳಿಗ್ಗೆಯಿಂದ ಸಂಜೆವರೆಗೆ ಸ್ಮಾರ್ಟ್ಫೋನ್ಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ರೀಲ್ಸ್, ಇಂಟರ್ನೆಟ್ ಮೂಲಕ ಜಗತ್ತಿನ ಎಲ್ಲ ವಿಷಯಗಳು ಅವರಿಗೆ ಲಭ್ಯವಾಗುತ್ತಿವೆ. ಅದರಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಇಂತಹ ಸಂದರ್ಭದಲ್ಲಿ ಉತ್ತಮ ಚಿಂತನೆ, ಮೌಲ್ಯ ಮತ್ತು ಮಾನವೀಯತೆಯನ್ನು ಮಕ್ಕಳಿಗೂ ಸಮಾಜಕ್ಕೂ ತಲುಪಿಸಬೇಕಾದ ಹೊಣೆ ನಮ್ಮ ಮೇಲಿದೆ. ಆ ಹೊಣೆಯನ್ನು ಹೊರುವ ಶಕ್ತಿ ಸಾಹಿತ್ಯಕ್ಕೆ ಮಾತ್ರ ಇದೆʼ ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ʼಓದು-ಬರಹ ಸಂಸ್ಕೃತಿ ಉಳಿಯಬೇಕಾದರೆ ಲೇಖಕರು, ಪ್ರಕಾಶಕರು ಹಾಗೂ ಓದುಗರ ನಡುವೆ ಸಮನ್ವಯ ಅಗತ್ಯವಿದೆ. ಮಾನವೀಯ ಸಮಾಜ ನಿರ್ಮಾಣ ಮಾಡುವಲ್ಲಿ ಸಾಹಿತ್ಯ ಪ್ರಮುಖ ಪಾತ್ರವಹಿಸುತ್ತದೆʼ ಎಂದು ಹೇಳಿದರು.

ಉರಿಲಿಂಗಪೆದ್ದಿ, ಕಾಳವ್ವೆ ಪ್ರಶಸ್ತಿ :
ಧಾರವಾಡದ ಸಾಹಿತಿಗಳಾದ ಡಾ.ವೈ.ಎಂ.ಭಜಂತ್ರಿ ಅವರಿಗೆ ಉರಿಲಿಂಗಪೆದ್ದಿ ಪ್ರಶಸ್ತಿ ಹಾಗೂ ಬೆಂಗಳೂರಿನ ಸಾಮಾಜಿಕ ಚಿಂತಕರಾದ ಪದ್ಮಶ್ರೀ ರಾಗಂ ಅವರಿಗೆ ಕಾಳವ್ವೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಕಾಶಕರಿಗೆ ಪ್ರಕಾಶಕ ಪ್ರಶಸ್ತಿ :
ಗದಗ ವಿದ್ಯಾನಿಧಿ ಪ್ರಕಾಶನದ ಜಯದೇವ ಮೆಣಸಗಿ, ಬೆಂಗಳೂರಿನ ಅಭಿನವ ಪ್ರಕಾಶನದ ಎನ್.ರವಿಕುಮಾರ್, ಶಾರದಾ ಬುಕ್ ಡೀಪೋ ಬೀದರ್ ಶಿವಲಿಂಗಪ್ಪ ಜಲಾದೆ, ಗದಗ ನಿರಂತರ ಪ್ರಕಾಶನ ಎ.ಎಸ್.ಮಕಾನದರ, ಬೀದರ್ ಪೂಜಾ ಪ್ರಕಾಶನದ ದೇವೆಂದ್ರಕುಮಾರ ವಲ್ಲೆಪುರೆ ಅವರಿಗೆ ಪ್ರಕಾಶಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ʼಎರಡು ದಿನಗಳ ಸಮ್ಮೇಳನವು ಪ್ರಕಾಶನ ಕ್ಷೇತ್ರದ ಸವಾಲುಗಳು ಹಾಗೂ ಭವಿಷ್ಯದ ಸಾಧ್ಯತೆಗಳ ಜೊತೆಗೆ ಶರಣ ಚಿಂತನೆಯ ಅರ್ಥಪೂರ್ಣ ಚರ್ಚೆಗೆ ವೇದಿಕೆಯಾಗಿದ್ದು, ಸಾಹಿತ್ಯಾಸಕ್ತರಲ್ಲಿ ಹೊಸ ಚಿಂತನೆಗೆ ಸ್ಪೂರ್ತಿ ನೀಡಿದೆʼ ಎಂದು ಹೇಳಿದರು.
ಕಾರ್ಯಕ್ರಮ ಆಯೋಜಕ ಡಾ.ಗವಿಸಿದ್ದಪ್ಪ ಪಾಟೀಲ ಮಾತನಾಡಿ, ʼಸಮ್ಮೇಳನವು ಸಾಹಿತ್ಯ ಮತ್ತು ಪ್ರಕಾಶನ ಕ್ಷೇತ್ರಕ್ಕೆ ಹೊಸ ದಿಕ್ಕು ಹಾಗೂ ಉತ್ಸಾಹ ನೀಡಿದೆʼ ಎಂದರು.

ಮೊದಲ ದಿನ ಸಂಜೆ ನಡೆದ ಚಿಂತನಾ ಗೋಷ್ಠಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ರಾಮ ಹೊನ್ಕಲ್ ಆಶಯ ನುಡಿ ಹೇಳಿದರು. ʼಉರಿಲಿಂಗ ಪೆದ್ದಿ ಮತ್ತು ಕಾಳವ್ವೆʼ ಕುರಿತು ಹಿರಿಯ ಸಾಹಿತಿ ಕಾವ್ಯ ಮಹಾಗಾಂವಕರ, ʼಸಮ್ಮೇಳನಾಧ್ಯಕ್ಷರ ಜೀವನ ಹಾಗೂ ಸಾಧನೆʼ ಕುರಿತು ಹಿರಿಯ ವಿಮರ್ಶಕ ಶ್ರೀಶೈಲ ನಾಗರಾಳ , ʼಮಾತೋಶ್ರೀ ರಮಾಬಾಯಿ ಅಂಬೇಡ್ಕರ್ʼ ಅವರ ಕುರಿತು ಸಾಹಿತಿ ಸಾರಿಕಾದೇವಿ ಕಾಳಗಿ ಅವರು ಮಾತನಾಡಿದರು.
ಎರಡನೇ ದಿನ ಬೆಳಿಗ್ಗೆ ನಡೆದ ʼಲೇಖಕ-ಪ್ರಕಾಶಕ-ಓದುಗ: ಟಿಪ್ಪಣಿ ಮಂಡನೆʼ ಗೋಷ್ಠಿಗೆ ಪ್ರಕಾಶಕ ಎನ್.ರವಿಕುಮಾರ ಚಾಲನೆ ನೀಡಿದರು. ಲೇಖಕರಾದ ಚಿ.ಸಿ.ನಿಂಗಣ್ಣ, ಡಾ.ಭೀಮಾಶಂಕರ ಬಿರಾದಾರ, ಡಾ.ಮಕ್ತುಂಬಿ ಹಾಗೂ ಪ್ರಕಾಶಕರಾದ ಡಾ.ಶರಣಬಸಪ್ಪ ವಡ್ಡನಕೆರೆ, ವಜ್ರಾ ಪಾಟೀಲ್ ಮತ್ತು ಓದುಗರಾಗಿ ದೇವೇಂದ್ರ ಕಟ್ಟಿಮನಿ, ಗೀತಾರಾಣಿ ಐನೊಳ್ಳಿ, ಡಾ.ಶಿವಾಜಿ ಮೇತ್ರೆ ಅವರು ಲೇಖಕ- ಪ್ರಕಾಶಕ -ಓದುಗ ಕುರಿತು ಟಿಪ್ಪಣಿ ಮಂಡಿಸಿ ಲೇಖಕ-ಓದುಗ ಹಾಗೂ ಪ್ರಕಾಶಕರ ಅವಿನಾಭಾವ ಸಂಬಂಧ ಜೊತೆಗೆ ಅರಿವಿನ ಜಗತ್ತು ಕಟ್ಟುವ ಕೆಲಸಕ್ಕೆ ಈ ಮೂವರ ಪಾತ್ರದ ಅಗತ್ಯತೆ ಕುರಿತು ಸಂವಾದ ನಡೆಸಿದರು.
ಪುಸ್ತಕ ಬಿಡುಗಡೆ ಹಾಗೂ ಸಂಜೆ ಹಳ್ಳಿಗಾಡಿನ ಆಟೋಟಗಳ ಸ್ಪರ್ಧೆ :
ಉರಿಲಿಂಗ ಪೆದ್ದಿ ಸಾಂಸ್ಕೃತಿಕ ಸಾಹಿತ್ಯಿಕ ವೇದಿಕೆಯಿಂದ ಶರಣ ಉರಿಲಿಂಗಪೆದ್ದಿ ಮತ್ತು ಕಾಳವ್ವೆ ಉತ್ಸವ, ಲಿಂ. ಶಿವಲಿಂಗೇಶ್ವರ ಶಿವಯೋಗಿಗಳ 57ನೇ ಸ್ಮರಣೋತ್ಸವ, ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಶನಿವಾರ ಅಧ್ಯಕ್ಷ ಡಾ.ಬಸವರಾಜ ಕೊನೇಕ ಅವರು ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ ಅವರ ʼಬೆವರ ಫಸಲುʼ ಹಾಗೂ ಸಾಹಿತಿ ಡಾ.ಶರಣಬಸಪ್ಪ ವಡ್ಡನಕೆರೆ ಅವರ ಜನಪ್ರಿಯ ಮಾಲಿಕೆ ʼಕಾಯಕ ಶರಣರುʼ ಪುಸ್ತಕ ಬಿಡುಗಡೆಗೊಳಿಸಿದರು.

ಮೊದಲ ದಿನ ಸಂಜೆ ಸಮ್ಮೇಳನ ಪ್ರಯುಕ್ತ ದಂಪತಿಗಳೊಂದಿಗೆ ಹಳ್ಳಿಗಾಡಿನ ಆಟೊಟಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಜಯ ಸಾಧಿಸಿದ ದಂಪತಿಗಳಿಗೆ ಸನ್ಮಾನ ಜರುಗಿತು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ʼಧರಿಸಿರಿʼ ʼಕರುನಾಡ ಸಿರಿʼ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ : ಬೀದರ್ | ಚಂದಾ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ : ನಾಲ್ವರ ಬಂಧನ
ಕಾರ್ಯಕ್ರಮದಲ್ಲಿ ಸಮೇಳನಾಧ್ಯಕ್ಷರಾದ ಡಾ.ಬಸವರಾಜ ಕೊನೇಕ, ಡಾ.ಎಸ್.ಪಿ.ಸುಳ್ಳದ್, ಡಾ.ಜಯದೇವಿ ಗಾಯಕವಾಡ, ಡಾ.ಬಿ.ಬಿ.ನಿರಗುಡಿ, ಗೋರಟಾ ಪ್ರಭುದೇವ ಸ್ವಾಮೀಜಿ, ಉದ್ಯಮಿ ಬಸವರಾಜ ಧನ್ನೂರ, ನಿವೃತ್ತ ಅಧಿಕಾರಿ ಮಲ್ಲಿಕಾರ್ಜುನ್ ಗುಂಗೆ, ತಹಸೀಲ್ದಾರ್ ಶಿವಾನಂದ ಮೇತ್ರೆ, ಕಾರ್ಯಕ್ರಮ ಪ್ರಚಾರ ಸಮಿತಿ ಅಧ್ಯಕ್ಷ ಪ್ರಶಾಂತ ಕೊಟಗೀರಾ, ಮುಜಾಯಿದ ಪಾಶಾ, ಸುರೇಶ್ ಕಾನೇಕರ್, ಶಿಶು ಯೋಜನೆ ಅಭಿವೃದ್ಧಿ ಅಧಿಕಾರಿ ಗೌತಮ ಶಿಂಧೆ, ಜಯದೇವ ಮೆಣಸಗಿ, ಶಿವಲಿಂಗಪ್ಪಾ ಜಲಾದೆ, ಶಶಿಕಲಾ ಪಾಟೀಲ, ಸಿಪಿಐ ಅಲಿಸಾಬ್, ಲತಾ ಹಾರಕೂಡೆ, ರಾಜಕುಮಾರ ಮಾಳಗೆ, ಸಂದೀಪ ಕಾಂಟೆ, ಮಹಾಲಿಂಗ ದೇವರು ಸೇರಿದಂತೆ ಸಾಹಿತಿಗಳು, ಸಾಮಾಜಿಕ ಚಿಂತಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಎರಡು ದಿನಗಳ ನೇರಪ್ರಸಾರ ವೀಕ್ಷಿಸಿ :





