ಸಂಕ್ರಾಂತಿ ಹಬ್ಬದ ಪ್ರಯುಕ್ತ ಸ್ನೇಹಿತರೊಂದಿಗೆ ಸೇರಿ ಗಾಳಿಪಟ ಹಾರಿಸಲು ಹೋಗಿದ್ದ ಯುವಕನೊಬ್ಬ ಕಾಲೇಜು ಕಟ್ಟಡ ಮೇಲಿಂದ ಆಕಸ್ಮಿಕವಾಗಿ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಹುಮನಾಬಾದ್ ಪಟ್ಟಣದಲ್ಲಿ ನಡೆದಿದೆ.
ಹುಮನಾಬಾದ್ ಪಟ್ಟಣದ ವಾಂಜರಿ ಬಡಾವಣೆಯ ನಿವಾಸಿಯಾದ ಶಶಿಕುಮಾರ್ (೧೯) ಎಂದು ತಿಳಿದು ಬಂದಿದೆ. ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ತೆರಳಿದ್ದನು. ಆಗಸದಲ್ಲಿ ಹಾರುತ್ತಿದ್ದ ಗಾಳಿಪಟವೊಂದು ದಾರದಿಂದ ಕಡಿದು ಹೋಗುತ್ತಿತ್ತು. ಅದನ್ನು ಹಿಡಿಯಬೇಕೆಂಬ ಅವಸರದಲ್ಲಿ ಶಶಿಕುಮಾರ್ ಓಡುತ್ತಾ ಹೋಗಿ ಆಯಾ ತಪ್ಪಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಕಟ್ಟಡದ ಮೇಲಿಂದ ಕೆಳಗೆ ಬಿದ್ದ ರಭಸಕ್ಕೆ ಶಶಿಕುಮಾರ್ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವ ಸಂಭವಿಸಿದೆ. ಸ್ನೇಹಿತರು ಮತ್ತು ಸ್ಥಳೀಯರು ನೆರವಿಗೆ ಧಾವಿಸುವಷ್ಟರಲ್ಲೇ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯ ಸಂಬಂಧ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೀದರ್ | ಎಟಿಎಂ ದರೋಡೆ ಪ್ರಕರಣ : ಮೃತ ಗಿರಿ ವೆಂಕಟೇಶ ಕುಟುಂಬಕ್ಕೆ ಪರಿಹಾರ, ಉದ್ಯೋಗ ನೀಡಿ





