ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಭಾಲ್ಕಿಯ ವಕೀಲ್, ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಬಿರಾದಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಭಾಲ್ಕಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಆದೇಶದಂತೆ ಫೆ.16ರಂದು ಪ್ರಕರಣ ದಾಖಲಿಸಲಾಗಿದೆ.
ಫೆ.7ರಂದು ವಾಟ್ಸಪ್ನಲ್ಲಿ ಹರಿದಾಡಿದ ವಿಡಿಯೋದಲ್ಲಿ ಭಗವಂತ್ ಖೂಬಾ ಅವರು ಈಶ್ವರ್ ಖಂಡ್ರೆ ಅವರನ್ನು ಏಕವಚನದಲ್ಲಿ ಅವಾಚ್ಯವಾಗಿ ಬೈದಿದ್ದಾರೆ. ಸಚಿವ ಈಶ್ವರ್ ಖಂಡ್ರೆ ಅವರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವುದರಿಂದ ಅನುಯಾಯಿಗಳಿಗೆ ನೋವಾಗಿದೆ. ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಅವುಗಳಿಂದ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಭಗವಂತ್ ಖೂಬಾ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ಸಂಘರ್ಷಕ್ಕೆ ದಾರಿ ಮಾಡಿಕೊಡಬಹುದು ಎಂದು ದೂರಿನಲ್ಲಿ ಎಚ್ಚರಿಸಲಾಗಿದೆ. ಈ ಸಂಬಂಧ ಭಾಲ್ಕಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಬೆದರಿಕೆಗೆ ಹೆದರುವ ಮಗ ನಾನಲ್ಲಾ :
ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯವರಿಗೆ ಅಭಿವೃದ್ಧಿ ಬಗ್ಗೆ, ಅವರ ಪಾಪದ ಕೆಲಸಗಳ ಬಗ್ಗೆ ಪ್ರಶ್ನಿಸಿದರೆ ಎಂಥ ಘನಂದಾರಿ ಕೆಲಸ ಮಾಡ್ತಿದ್ದಾರೆ ನೋಡಿ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಕಿಡಿಕಾರಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಫೆಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ʼಮೊದಲು ಕಾರ್ಯಕರ್ತನಿಂದ ನನಗೆ ಕೊಲೆ ಬೆದರಿಕೆ ಹಾಕಿಸ್ತಾರೆ, ಕೈ ಕಾಲು, ನಾಲಿಗೆ ಕಡಿಯುವುದಾಗಿ ಧಮಕಿ ಹಾಕಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನನ್ನ ಮಾನ ಹರಣ ಮಾಡಿಸುತ್ತಾರೆ, ಆದರೂ ಅವನ ಮೇಲೆ ಪೊಲೀಸರು ಕ್ರಮ ಕೈಗೊಳ್ಳಲ್ಲಾʼ ಎಂದಿದ್ದಾರೆ.
ʼಖಂಡ್ರೆ ಅವರು ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರನ್ನು ಬಿಟ್ಟು ಪಾಪನಾಶ ದೇವರಿಗೆ ಪೂಜೆ ಮಾಡಲು ಬಿಡದೆ, ಘೋರ ಪಾಪ ಮಾಡಿರುವ ಬಗ್ಗೆ ಪ್ರಶ್ನಿಸಿದರೆ, ನನ್ನ ಮೇಲೆ ಭಾಲ್ಕಿಯಲ್ಲಿ FIR ಮಾಡಿಸಿದ್ದಾರೆ. ಇದೆ ಇವರ ಘನಕಾರ್ಯವಾಗಿದೆ. ಖಂಡ್ರೆ ಅವರು, ಬೇರೊಬ್ಬರ ಮೇಲೆ ಅನ್ಯಾಯ, ಅತ್ಯಾಚಾರ ಮಾಡುವುದೇ ಅವರ ಸಾಧನೆ ಎಂದು ಭಾವಿಸಿದ್ದಾರೆ. ಆದ್ದರಿಂದ ಇಂಥ ಕೆಲಸ ಕಳೆದ ಮೂರ್ನಾಲ್ಕು ದಶಕಗಳಿಂದ ಮಾಡಿಕೊಂಡು ಬರ್ತಿದ್ದಾರೆʼ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಸಿದ್ದಾಪುರ | ಪಿಗ್ಮಿ ಕಲೆಕ್ಟರ್ ವೃದ್ಧೆಯ ಕೊಲೆ ಪ್ರಕರಣ; ಕೇವಲ 6 ತಿಂಗಳಲ್ಲೇ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ʼನಾನು ಸತ್ಯದ ಪರವಾಗಿ ನಿಂತಿದ್ದೇನೆ, ಖಂಡ್ರೆಯವರ ಇಂಥ ಗೊಡ್ಡು ಬೆದರಿಕೆಗೆ ಹೆದರುವ ಮಗ ನಾನಲ್ಲಾ, ಕಾನೂನು ಹೋರಾಟ ಮಾಡ್ತೀನಿ ಎನ್ನುವ ವಿಷಯ ಎಲ್ಲರಿಗೂ ತಿಳಿಸುತ್ತೇನೆʼ ಎಂದು ಸವಾಲು ಹಾಕಿದ್ದಾರೆ.





