ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಇದೇ ಫೆ.4ರಂದು ಔರಾದ್ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮದಿಂದ ಜರುಗಲಿದೆ. ಈ ಬಾರಿಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಹಿರಿಯ ಸಾಹಿತಿ ಡಾ.ಮನ್ಮಥ ಡೋಳೆ ಅವರಿಗೆ ನೀಡಲಾಗಿದೆ. ಸಾಹಿತ್ಯ ಕೃಷಿ ಜೊತೆಗೆ ಉಪಾಧ್ಯಾಯ ವೃತ್ತಿ ಒಟ್ಟಿಗೆ ಹೆಗಲೇರಿಸಿಕೊಂಡ ಅವರ ಅನುಭವ ದೊಡ್ಡದು. ʼಈದಿನ ಡಾಟ್ ಕಾಮ್ʼಗೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರ : ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಸಿಕ್ಕಿದ್ದಕ್ಕೆ ಏನು ಹೇಳುತ್ತೀರಿ?
ಉ : ನಾನು ಕಾಲೇಜು ದಿನಗಳಿಂದಲೂ ಸಾಹಿತ್ಯ ಕೃಷಿ ಮಾಡುತ್ತಿರುವೆ. ಅದು ನನ್ನ ಹವ್ಯಾಸ. ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ? ಎಂಬಂತೆ ನಾನು ಯಾವುದೇ ಫಲಾಫೇಕ್ಷೆ ಇಲ್ಲದೆ ಎಲೆ ಮರೆ ಕಾಯಿಯಂತೆ ಕನ್ನಡ ನಾಡು-ನುಡಿ ಸೇವೆ ಮಾಡುತ್ತಿರುವೆ. ಜನರ ಪ್ರೀತಿ ಹಾಗೂ ಗೌರವದಿಂದ ಸಮ್ಮೇಳನ ಗೌರವ ಸಾಧ್ಯವಾಗಿದೆ. ಈ ಗೌರವ ನನ್ನ ಬದುಕಿನ ಅತ್ಯಂತ ಅವಿಸ್ಮರಣೀಯವಾಗಿದೆ.
ಪ್ರ : ಸಾಹಿತ್ಯದ ಬಗ್ಗೆ ತಮಗೆ ಆಸಕ್ತಿ ಬೆಳೆದಿದ್ದು ಹೇಗೆ?
ಉ : ನನ್ನೂರಿನಲ್ಲಿ ಪ್ರತಿನಿತ್ಯ ಬೆಳಿಗ್ಗೆ ಶಿವಶರಣದ ಭಜನಾ ತಂಡದವರ ಸ್ವರವಚನ ಗಾಯನ ನಾನು ಆಲಿಸುತ್ತಿದ್ದೆ. ಅಲ್ಲಿಂದಲೇ ನನಗೆ ಸಾಹಿತ್ಯದ ಒಲವು ಮೂಡಿದ್ದು, ವೈಚಾರಿಕ, ಮಾನವೀಯ ಮೌಲ್ಯಗಳ ಅನುಭಾವ ನನ್ನನ್ನು ಆಕರ್ಷಿಸಿತು. ಈ ನೆಲದಲ್ಲಿಯೇ ರಚಿತವಾದ ʼವಚನ ಸಾಹಿತ್ಯʼ ಪ್ರಭಾವ ನನ್ನನ್ನು ಆಳವಾಗಿ ಚಿಂತನೆಗೆ ಹಚ್ಚಿತು. ಇದು ನನ್ನ ಬರವಣಿಗೆಗೆ ಪೂರಕವಾಯಿತು.
ಪ್ರ : ತಮ್ಮ ಚೊಚ್ಚಿಲ ಕವನ ಸಂಕಲನ ಯಾವಾಗ ಪ್ರಕಟವಾಯ್ತು?
ಉ : ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಔರಾದ್ ಪಟ್ಟಣದ ನಾಲಂದಾ ಶಾಲೆಯಲ್ಲಿ ಪೂರೈಸಿದೆ. ಬಳಿಕ ಕಾಲೇಜು ಓದಿಗಾಗಿ ಬೀದರ್ಗೆ ಹೋಗಬೇಕಾಯ್ತು. ಅಲ್ಲಿ ದೊರೆತ ನನ್ನ ಸಹಪಾಠಿ ಬಳಗ ನನ್ನ ಓದು-ಬರಹ ಅಭಿರುಚಿಗೆ ಮತ್ತಷ್ಟು ಇಂಬು ನೀಡಿತು. 1992ರ ವೇಳೆ ಪ್ರಥಮ ಪಿಯುಸಿ ಓದುವಾಗ ಕವಿತೆ ಬರೆಯಲು ಶುರು ಮಾಡಿದ್ದೇನೆ. ಆಗ ʼಜನದನಿʼ ಪತ್ರಿಕೆಯಲ್ಲಿ ಪ್ರತಿ ಭಾನುವಾರ ನನ್ನ ಚುಟುಕು ಪ್ರಕಟವಾಗುತ್ತಿದ್ದವು. ಅದರಿಂದ ಸಾಹಿತ್ಯಾಸಕ್ತಿಗೆ ಪ್ರೋತ್ಸಾಹ ದೊರಕಿತು. ಬಳಿಕ 2013ರಲ್ಲಿ ʼಮಿಡಿಮಾವುʼ ಎಂಬ ನನ್ನ ಪ್ರಥಮ ಕವನ ಸಂಕಲನ ಪ್ರಕಟವಾಗಿತು.
ಪ್ರ : ಮರಾಠಿ-ತೆಲುಗು ಭಾಷೆ ಪ್ರಭಾವದಲ್ಲೂ ಔರಾದ್ ತಾಲೂಕಿನಲ್ಲಿ ಕನ್ನಡ ಬೆಳವಣಿಗೆಗೆ ಏನು ಮಾಡಬೇಕು?
ಉ : ನಮ್ಮ ತಾಲೂಕು ಮಹಾರಾಷ್ಟ್ರ-ತೆಲಂಗಾಣ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಮೊದಲಿನಿಂದಲೂ ಇಲ್ಲಿ ಮರಾಠಿ-ತೆಲುಗು ಪ್ರಭಾವ ಸಹಜವಾಗಿದೆ. 10ನೇ ಶತಮಾನ ಪೂರ್ವದಿಂದಲೂ ನಮ್ಮ ಭಾಗ ಉರ್ದು, ಪರ್ಷಿಯನ್ ಸೇರಿ ಮರಾಠಿ, ತೆಲುಗು ಭಾಷೆ ನಮ್ಮ ಬದುಕಿನ ಭಾಷೆಯೊಂದಿಗೆ ಮಿಶ್ರಿತವಾಗಿದೆ. ಆದರೆ, ಇಂದಿಗೂ ತಾಲೂಕಿನಲ್ಲಿ ಶೇ 75ರಷ್ಟು ಕನ್ನಡ ಭಾಷಿಕರಿದ್ದಾರೆ. ಅನ್ಯ ಭಾಷೆಗಳ ಪ್ರಭಾವದಲ್ಲಿಯೂ ಕನ್ನಡ ಭಾಷಾ ಕಲೆ, ಸಾಹಿತ್ಯ, ಸಂಸ್ಕೃತಿ ಅಭಿಮಾನ ಎಳಷ್ಟೂ ಕಮ್ಮಿಯಾಗಿಲ್ಲ. ಇಲ್ಲಿನ ಜನ ಕನ್ನಡ ಅಸ್ಮಿತೆಗೆ ಧಕ್ಕೆಯಾಗಲು ಎಂದಿಗೂ ಬಿಡುವುದಿಲ್ಲ. ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದಾಗಿ ಈಚೆಗೆ ಕನ್ನಡ ಬೆಳವಣಿಗೆಗೆ ಅಡ್ಡಿಯಾಗಿದೆ. ನಮ್ಮ ಮನೆಯಿಂದಲೇ ಕನ್ನಡ ಭಾಷೆ ಬೆಳೆಸುವ ಕೆಲಸ ಆರಂಭವಾಗಬೇಕು. ಮಕ್ಕಳಿಗೆ ಕನ್ನಡ ಭಾಷೆ ಶಿಕ್ಷಣದ ಹಾಗೂ ಕನ್ನಡ ಅನ್ನದ ಭಾಷೆಯೂ ಹೌದು ಎಂಬುದು ಮನವರಿಕೆ ಮಾಡಿಕೊಡಬೇಕಾಗಿದೆ.
ಪ್ರ : ಗಡಿಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಉಳಿವು ಹೇಗೆ?
ಉ : ಔರಾದ್ ತಾಲೂಕು ಮರಾಠಿ-ತೆಲುಗು ಪ್ರಭಾವಕ್ಕೆ ಒಳಗಾಗಿದೆ. ಇಲ್ಲಿನ ಕೆಲ ಗ್ರಾಮಗಳಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಲ್ಲ. ಮರಾಠಿ ಮಾಧ್ಯಮ ಶಾಲೆಗಳಿರುವ ಕಡೆಗೆ ಕನ್ನಡ ಶಿಕ್ಷಕರ ಕೊರತೆ ಇದೆ. ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕನ್ನಡ ಭಾಷಾ ಬೋಧಕರ ಕೊರತೆಯಿಂದ ಕನ್ನಡ ಭಾಷಾ ಬೆಳವಣಿಗೆ ಕುಂಠಿತವಾಗುತ್ತಿರುವುದು ಸತ್ಯವೇ ಇದೆ. ಇದು ಫಲಿತಾಂಶ ಕುಸಿತಕ್ಕೆ ಕಾರಣವೂ ಹೌದು. ಕನ್ನಡ ಭಾಷೆ ಬೆಳೆಯಬೇಕೆಂದರೆ ಶಿಕ್ಷಣವೇ ಮಾಧ್ಯಮ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕನ್ನಡ ಶಿಕ್ಷಕರ ಭರ್ತಿಗೆ ಕ್ರಮಗೊಳ್ಳಬೇಕು. ಸರ್ಕಾರ-ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸರ್ಕಾರ ಮಾನದಂಡಗಳು ಸರಳೀಕರಣಗೊಳಿಸಬೇಕು.
ಪ್ರ : ಕಡ್ಡಾಯ ಕನ್ನಡ ಮಾಧ್ಯಮ ಶಾಲೆ ಬಗ್ಗೆ ತಮ್ಮ ಅಭಿಪ್ರಾಯವೇನು?
ಉ : ಕನ್ನಡ ಏದುಸಿರು ಬಿಡುತ್ತಿರುವ ಈ ಹೊತ್ತಿನಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಸರಕಾರವೇ ಆರಂಭಿಸಿರುವುದು ಮತ್ತಷ್ಟು ಕನ್ನಡ ಬೆಳವಣಿಗೆಗೆ ಹಿನ್ನಡೆಯಾಗುತ್ತದೆ. ಇಂಗ್ಲಿಷ್ ವ್ಯಾಮೋಹಕ್ಕೆ ಒಳಪಟ್ಟ ಮಕ್ಕಳಿಂದ ಕನ್ನಡ ಸಂಪೂರ್ಣ ದೂರವಾಗುತ್ತದೆ. ಭಾಷೆ ದೂರವಾದರೆ ಕನ್ನಡ ಸಂಸ್ಕೃತಿಯೂ ದೂರವಾಗುತ್ತದೆ. ಸರ್ಕಾರ ಪ್ರಾಥಮಿಕ ಅಥವಾ ಪ್ರೌಢ ಶಾಲಾ ಶಿಕ್ಷಣ ಕಡ್ಡಾಯ ಕನ್ನಡ ಮಾಧ್ಯಮ ಮಾಡುವುದಾದರೆ ಅತ್ಯಂತ ಸ್ವಾಗತಾರ್ಹ. ನಮ್ಮತನ ಉಳಿಯಬೇಕಾದರೆ ಕನ್ನಡ ಶಾಲೆಗಳಿಂದ ಮಾತ್ರ ಸಾಧ್ಯ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
ಪ್ರ : ಔರಾದ್ ತಾಲೂಕು ಹಿಂದುಳಿದಿರುವಿಕೆಗೆ ಕಾರಣಗಳೇನು? ಅಭಿವೃದ್ಧಿ ಹೇಗೆ ಸಾಧ್ಯ?
ಉ : ನಂಜುಂಡಪ್ಪ ವರದಿ ಪ್ರಕಾರ ಔರಾದ್ ತಾಲೂಕು ಅತ್ಯಂತ ಹಿಂದುಳಿದ ತಾಲೂಕು ಪಟ್ಟಿಯಲ್ಲಿದೆ. ಗುಡ್ಡಗಾಡು ಪ್ರದೇಶ ಹೆಚ್ಚು ಹೊಂದಿರುವ ಇಲ್ಲಿನ ರೈತರು ಮಳೆಯಾಶ್ರಿತ ಬೇಸಾಯವನ್ನೆ ನಂಬಿದ್ದಾರೆ. ಜಿಲ್ಲೆಯ ಬೇರೆ ತಾಲೂಕಿಗಳಿಗೆ ಹೋಲಿಸಿದರೆ ಔರಾದ್ ಅತಿ ಕಡಿಮೆ ನೀರಾವರಿ ಪ್ರದೇಶ ಹೊಂದಿದೆ. ದುಡಿಯುವ ಕೈಗಳಿಗೆ ಕೆಲಸ ಕೊಡುವ ಯಾವುದೇ ಕೈಗಾರಿಕೆಗಳಿಲ್ಲ. ಕಾರ್ಮಿಕರು, ರೈತರು ಸೇರಿ ವಿದ್ಯಾವಂತರು ಸಹ ಕೆಲಸ ಅರಸಿ ನೆರೆಯ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಗೆ ವಲಸೆ ಹೋಗಬೇಕಾಗಿರುವುದು ಅನಿವಾರ್ಯ ಎಂಬಂತಿದೆ. ಇನ್ನು ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಚುನಾಯಿತ ಜನಪ್ರತಿನಿಧಿಗಳು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ನೀರಾವರಿ ಹಾಗೂ ಇತರೆ ವಲಯಗ ಪ್ರಗತಿಗೆ ವಿಶೇಷ ಯೋಜನೆಗಳು ಜಾರಿಗೊಳಿಸುವುದು ಅವಶ್ಯವಾಗಿದೆ.
ಪ್ರ : ಸಮ್ಮೇಳನಗಳಲ್ಲಿ ಮಂಡನೆಯಾಗುವ ನಿರ್ಣಯಗಳು ಅನುಷ್ಠಾನ ಆಗುತ್ತಿಲ್ಲ ಯಾಕೆ?
ಉ : ಕಲೆ, ಸಾಹಿತ್ಯ, ಸಂಸ್ಕೃತಿ, ಕೃಷಿ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳ ಕೈಗೊಳ್ಳಬೇಕಾದ ನಿರ್ಣಯಗಳು ಈ ಹಿಂದೆ ನಡೆದ ಆರು ಸಾಹಿತ್ಯ ಸಮ್ಮೇಳನಗಳಲ್ಲಿ ಮಂಡನೆಯಾಗಿವೆ. ಸಮ್ಮೇಳನಗಳಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಜನಪ್ರತಿನಿಧಿಗಳು, ಸಂಘಟನೆಗಳು ಸರ್ಕಾರಗಳ ಮೇಲೆ ಒತ್ತಡ ಹೇರಿ ಜಾರಿಗೊಳಿಸಲು ನಿರಂತರ ಪ್ರಯತ್ನ ಅಗತ್ಯ. ಕನ್ನಡ ಸಾಹಿತ್ಯ ಸಮ್ಮೇಳನ ಬರೀ ನುಡಿ ಜಾತ್ರೆ ಆಗದೆ ಕನ್ನಡ ಭಾಷೆ, ನೆಲ, ಜಲ ಉಳಿವಿಗಾಗಿ ಚಿಂತನೆ ನಡೆಯಬೇಕು. ಅದಕ್ಕಾಗಿ ರಾಜಕೀಯ ಗಣ್ಯರ ಪ್ರೋತ್ಸಾಹ, ಸಹಕಾರ ಬೇಕೇ ಬೇಕು.
ಪ್ರ : ಇಲ್ಲಿನ ಸಾಹಿತಿಗಳಿಗೆ ಪ್ರೋತ್ಸಾಹದ ಕೊರತೆಯಿದೆಯೇ?
ಉ : ಸಾಹಿತ್ಯ ನಿಂತ ನೀರಲ್ಲ. ಬದಲಾವಣೆ ಜಗದ ನಿಯಮ. ಸಾಹಿತ್ಯದಲ್ಲೂ ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಬೇಕು. ಲೇಖಕನಿಗೆ ಸಾಮಾಜಿಕ ಕಳಕಳಿ, ಬದ್ಧತೆ ಮುಖ್ಯ. ಸಾಹಿತ್ಯ ಕೇವಲ ಸಾಹಿತಿ ತಲೆಯಲ್ಲಿ ಉಳಿದರೆ ಸಾಲದು, ಗಟ್ಟಿ ಸಾಹಿತ್ಯ ಅಕ್ಷರ ರೂಪದಲ್ಲಿ ಹೊರಬರಬೇಕು. ಅದಕ್ಕೆ ಸಾಕಷ್ಟು ಆರ್ಥಿಕ ವ್ಯವಸ್ಥೆ ಬೇಕು. ಸರ್ಕಾರ, ಸಂಘ-ಸಂಸ್ಥೆ ಹಾಗೂ ದಾನಿಗಳು ನೆರವು ನೀಡಲು ಮುಂದೆ ಬರಬೇಕು. ಸಾಹಿತಿಗಳ ರಕ್ಷಣೆ ಸಮಾಜದ ಆದ್ಯ ಕರ್ತವ್ಯ. ಸಾಹಿತಿ ಬರೆದ ಪುಸ್ತಕವನ್ನು ಕೊಂಡು ಓದುವ ರೂಢಿ ಬೆಳೆಸಿಕೊಂಡು ಸಾಹಿತಿಗಳಿಗೆ ಪ್ರೋತ್ಸಾಹ ನೀಡಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಸರ್ಕಾರದ ಅಕಾಡೆಮಿ, ಪ್ರಾಧಿಕಾರಗಳು ಇಲ್ಲಿನ ಸಾಹಿತ್ಯ-ಬರಹಗಾರರನ್ನು ಗುರುತಿಸುವ ಕೆಲಸ ಆಗಬೇಕು.

ಪ್ರ : ಹೊಸ ತಲೆಮಾರಿನ ಲೇಖಕರಿಗೆ ಸಾಹಿತ್ಯಾಭಿರುಚಿ ಬಗ್ಗೆ ತಾವೇನು ಹೇಳಲು ಬಯಸುತ್ತೀರಿ ?
ಉ : ಯುವ ಬರಹಗಾರರಿಗೆ ಕೇವಲ ಲಾಭ-ನಷ್ಟದ ಚಿಂತನೆ ಇರಬಾರದು. ಸಾಮಾಜಿಕ ಚಿಂತನೆ ದೃಷ್ಟಿಕೋನವಿರಬೇಕು. ಸಮಾಜ ತಿದ್ದುವ ಕೆಲಸ ನಡೆಯಬೇಕು. ಮೌಢ್ಯ, ಕಂದಾಚಾರ, ಭ್ರಷ್ಟಾಚಾರ, ಶೋಷಣೆ, ಅನ್ಯಾಯದ ವಿರುದ್ಧ ತಿವಿದು ಹೇಳುವ ಎದೆಗಾರಿಕೆ ಇರಬೇಕು. ಇಂದಿನ ಆಧುನಿಕ ತಂತ್ರಜ್ಞಾನ ಕಲಿಕೆಯೊಂದಿಗೆ ಹೆಚ್ಚಿನ ಅಧ್ಯಯನವೂ ಅಗತ್ಯವಿದೆ. ಯುವ ಸಮೂಹ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಇದು ನಿಲ್ಲಬೇಕು. ಆಧುನಿಕತೆ ನೆಪದಲ್ಲಿ ಜೀವನ ಬರಡು ಮಾಡಿಕೊಳ್ಳುವುದನ್ನು ಬಿಟ್ಟು ಮಾನವೀಯ ಮೌಲ್ಯ ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.
ಪ್ರ : ತಾಲೂಕಿನ ಜೀವ ವೈವಿಧ್ಯ, ನೈಸರ್ಗಿಕ ಸಂಪತ್ತಿನ ಬಗ್ಗೆ ಏನೂ ಹೇಳ್ತೀರಾ?
ಉ : ಔರಾದ್ ತಾಲೂಕು ಹೆಚ್ಚು ಗುಡ್ಡಗಾಡು, ಶುಷ್ಕ ಪ್ರದೇಶ. ಇಲ್ಲಿ ಹುಲುಸಾಗಿ ಬೆಳೆಯುವ ಸೀತಾಫಲ, ಕ್ಯಾರೇಹಣ್ಣು, ಮಳ್ಳೇಕಾಯಿ ಅತ್ಯಂತ ವಿಶಿಷ್ಟವಾಗಿದೆ. ಇದಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ವಾಣಿಜ್ಯ ಬೆಳೆಗಳಾಗಿ ಪರಿವರ್ತಿಸಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಜಿಂಕೆ, ಕೃಷ್ಣಮೃಗ, ನವೀಲು ಹೆಚ್ಚಿನ ಸಂಖ್ಯೆಯಲ್ಲಿದ್ದು, ʼಜಿಂಕೆ ವನʼ ಹಾಗೂ ʼನವೀಲು ಧಾಮʼ ಸ್ಥಾಪಿಸಿ ವನ್ಯಜೀವಿ ಸಂರಕ್ಷಣೆಗೆ ಮುಂದಾಗಬೇಕು. ಇದು ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿ ಆಗಬಲ್ಲದು.
ಪ್ರ : ನಿಮ್ಮ ಒಂದೆರಡು ಚುಟುಕು ಕವಿತೆಗಳು ಹೇಳುವೀರಾ?
ಉ : ʼತಿರುವುತ್ತಿದ್ದೆ ಒಂದು ನಟ್ಟು, ಅದು ಸರಿಯಾಗಿ ಕುಳಿತಿಲ್ಲ ಫಿಟ್ಟು, ಆಮೇಲೆ ಕೊಟ್ಟೆ ಒಂದು ಪೆಟ್ಟು, ಅದೀಗ ಮಸ್ತ್ ಆಗಿದೆ ಸಟ್ಟುʼ, ʼಬುದ್ದನಾಗಲು ಅದೆಷ್ಟೊ ಬಾರಿ ಎದ್ದು ನಡೆದೆ, ಸದ್ಯಕ್ಕೆ ಅದು ಸಾಧ್ಯವಿಲ್ಲವೆಂದು ಬಂದು ಮಲಗಿದ್ದೆ, ನಿದ್ದೆ ಬರಲಾರದೆ ತೊಳಲಾಡಿದೆʼ, ʼತೀರಾ ಯೌವ್ವನದ ಗಲ್ಲ, ನೋಡಿದರೆ ಮೈಯಲ್ಲ ಝಲ್ಲ, ಹಂಗೆ ಬಿಡಕ್ಕೆ ಆಗಲ್ಲʼ, ʼತಂದೆ-ತಾಯಿಯ ಮನೆಯಲ್ಲಿ ಹುಟ್ಟಿದ ಹೆಣ್ಣು, ಕೊಟ್ಟ ಮನೆಯಲ್ಲಿ ಆದಳು ಹಣ್ಣು, ಕೊಟ್ಟ ಮತ್ತು ಹುಟ್ಟ ಎರಡು ಬಿಟ್ಟು ಕೊನೆಗೆ ಸೇರಿದಳು ಮಣ್ಣುʼ, ʼಬುದ್ದರ ಬುದ್ದಿವಾದ, ಬಸವಣ್ಣನವರ ಸುದ್ದಿವಾದ ಅಂಬೇಡ್ಕರವರ ಸಿದ್ಧಿವಾದ, ಈ ಮೂರು ತಿಳಿದವನಿಗೆ ಕಣ್ತುಂಬ ನಿದ್ದಿ ಆದʼ
ಸರ್ವಾಧ್ಯಕ್ಷರ ಕಿರುಪರಿಚಯ :
ಡಾ.ಮನ್ಮಥ ಡೋಳೆ ಅವರು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ 1ನೇ ಜೂನ್ 1970ರಲ್ಲಿ ಜನಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಔರಾದ್ನ ನಾಲಂದಾ ಶಾಲೆಯಲ್ಲಿ ಪೂರೈಸಿದ್ದಾರೆ. ಮುಂದೆ ಎಂಎ, ಎಂಫಿಲ್, ಪಿಎಚ್ಡಿ ಪೂರೈಸಿದ್ದು, ಕಳೆದ 2 ದಶಕದಿಂದ ಔರಾದ್ ಪಟ್ಟಣದ ನಾಲಂದಾ ಪದವಿ ಪೂರ್ವ ಕಾಲೇಜಿನ (ಅನುದಾನಿತ) ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2013ರಲ್ಲಿ ʼಮಿಡಿ ಮಾವುʼ ಚುಟುಕು ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ಅವರು, ಅನಂತರ ʼಬೀದರ್ ಜಿಲ್ಲಾ ದಲಿತ ಸಿರಿʼ, ʼಬಿಡಿ ಬರಹಗಳ ಪ್ರಬಂಧ ಮಾಲೆʼ ಪ್ರಕಟಿತ ಕೃತಿಗಳು. ʼಬಸವೇಶ್ವರ ಮತ್ತು ಅಂಬೇಡ್ಕರ್ ಅವರ ಚಿಂತನೆಯ ನೆಲೆ ಮತ್ತು ನಿಲುವುಗಳುʼ ಅವರ ಸಂಶೋಧನಾ ಗ್ರಂಥವಾಗಿದೆ.
ಇದನ್ನೂ ಓದಿ : ವ್ಯಕ್ತಿಚಿತ್ರ | ಅನಾಥರ ಪಾಲಿನ ʼಸುಮಂಗಲಿʼ ಸುಶೀಲಮ್ಮಗೆ ಒಲಿದ ಪದ್ಮಶ್ರೀ
ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಜತೆಗೆ ಸಾಹಿತ್ಯಿಕ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮನ್ಮಥ ಡೋಳೆ ಅವರು ಕನ್ನಡ, ಹಿಂದಿ, ಮರಾಠಿ ಭಾಷೆ ಪರಿಣಿತರು. ಬಡತನದ ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದು ಅನೇಕ ನೋವು, ಅವಮಾನ ಎದುರಾದರೂ ಶಿಕ್ಷಣ ಎಂಬ ಅಸ್ತ್ರದಿಂದಲೇ ಎಲ್ಲವೂ ಮೆಟ್ಟಿ ನಿಂತವರು. ಮನೆ ಮಾತು ಮರಾಠಿಯಾದರೂ, ಇವರ ಕನ್ನಡ ಭಾಷಾಭಿಮಾನ ಅನನ್ಯ. ಕನ್ನಡ ಸಾಹಿತ್ಯ ಕೃಷಿಯೊಂದಿಗೆ ಮರಾಠಿ ಕೃತಿಗಳು ಕನ್ನಡಕ್ಕೆ ತರ್ಜುಮೆ ಮಾಡಿರುವ ಶ್ರೇಯಸ್ಸು ಇವರದ್ದು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




