ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಬೀದರ್ ಜಿಲ್ಲೆಯ ಬಸವಕಲ್ಯಾಣ ನೆಲದಲ್ಲಿ ಸಾರ್ವಜನಿಕ ದತ್ತಿಯ ವತಿಯಿಂದ ವಚನ ವಿಶ್ವವಿದ್ಯಾಲಯ ಸ್ಥಾಪಿಸಲು ನೆರವು ನೀಡುವಂತೆ ರಾಜ್ಯ ಸರಕಾರಕ್ಕೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮನವಿ ಮಾಡಿದೆ.
ಈ ಕುರಿತು ಬೆಂಗಳೂರಿನಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ನಾಡೋಜ ಬಸವಲಿಂಗ
ಪಟ್ಟದ್ದೇವರ ನೇತೃತ್ವದಲ್ಲಿ ಶುಕ್ರವಾರ ನಾನಾ ಮಠಾಧೀಶರು ಸೇರಿ ಸಚಿವರಾದ ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್, ಶಾಸಕ ಬಿ.ಆರ್.ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಯಿತು.
ʼಬಸವಾದಿ ಶರಣರ ವಚನಗಳಲ್ಲಿನ ಆಶಯವನ್ನು ವಿಸ್ತರಿಸುವ ಜಾಗತಿಕ ಮಟ್ಟದ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಬೇಕೆಂಬುದು ಮತ್ತು ಈ ವಿಶ್ವವಿದ್ಯಾನಿಲಯದಲ್ಲಿ ಭವಿಷ್ಯಕ್ಕೆ ಬೇಕಿರುವ ಆಧುನಿಕ ಜ್ಞಾನದ ಸೃಷ್ಟಿ ಮತ್ತು ಪ್ರಸರಣಕ್ಕಾಗಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಾಗೂ ಸಂಶೋಧನಾ ಯೋಜನೆಗಳನ್ನು ನಿರಂತರವಾಗಿ ನಡೆಸುತ್ತಿರಬೇಕೆಂದು ಕಳೆದ 25 ವರ್ಷಗಳ ಕನಸಾಗಿದೆ. ಈ ಬೇಡಿಕೆಯನ್ನು ಕಳೆದ ವರ್ಷ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ತಮ್ಮ
ಮುಂದಿಟ್ಟಿದ್ದೆವು. ತಾವೂ ಸಹಾ ಅದಕ್ಕೆ ಪೂರಕವಾಗಿ ಸ್ಪಂದಿಸಿ ಭರವಸೆ ನೀಡಿದ್ದಿರಿʼ ಎಂದು ತಿಳಿಸಿದರು.
ʼಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಭಾಲ್ಕಿಯ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವಚನ ಗ್ಲೋಬಲ್ ವಿಶ್ವವಿದ್ಯಾಲಯದ ಸ್ಥಾಪನೆಗೆಂದೇ ಪ್ರತ್ಯೇಕ ಸಾರ್ವಜನಿಕ ದತ್ತಿಯನ್ನು ರೂಪಿಸುತ್ತದೆ ಮತ್ತು ಬಸವಾದಿ ಶರಣರ ಆಶಯಗಳಿಗೆ ತಕ್ಕಂತೆ ಅದನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅದು ತೆಗೆದುಕೊಳ್ಳುತ್ತದೆ. ಇದಕ್ಕೆ ಸರಕಾರದ ವತಿಯಿಂದ ಅಗತ್ಯವಿರುವ ಎಲ್ಲಾ ನೆರವನ್ನು ಕೊಡಬೇಕೆಂದು ಕೋರುತ್ತೇವೆ. ಸಾರ್ವಜನಿಕ ದತ್ತಿಯಡಿ ನಿರ್ಮಾಣವಾಗುವ ಈ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಕಲ್ಪಿಸಲು ವಿಧಾನಮಂಡಲದಲ್ಲಿ ಕಾಯ್ದೆಯ ಅಂಗೀಕಾರದ ಅಗತ್ಯವಿದ್ದು, ಅದನ್ನು ಬರುವ ಅಧಿವೇಶನದಲ್ಲೆ ಸಾಧ್ಯವಾಗಿಸಿಕೊಡಬೇಕುʼ ಎಂದು ಕೋರಿದರು.
ʼಇಡೀ ವಿಶ್ವವಿದ್ಯಾಲಯವು ಸಾಕಾರಗೊಳ್ಳಲು ಭಾರೀ ಪ್ರಮಾಣದ ದತ್ತಿಯ ಅಗತ್ಯವಿದ್ದು, ಅದನ್ನು ಜಗತ್ತಿನಾದ್ಯಂತ ಇರುವ ಬಸವಾನುಯಾಯಿಗಳಿಂದ ಮತ್ತು ಶಿಕ್ಷಣಾಸಕ್ತರಿಂದ ಸಂಗ್ರಹಿಸುವ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳುತ್ತೇವೆ. ಆ ಶಕ್ತಿ ಬಸವಾದಿ ಶರಣರ ಆಶಯಕ್ಕೆ ಇದೆ ಎಂಬ ವಿಶ್ವಾಸ ನಮಗಿದೆ. ಸರಕಾರದ ಸಹಭಾಗಿತ್ವವೂ ಇದ್ದಲ್ಲಿ, ನಮ್ಮ ಉತ್ಸಾಹವು ಇಮ್ಮಡಿಗೊಳ್ಳಲಿದೆ.
ಹೀಗಾಗಿ, ವಿಶ್ವವಿದ್ಯಾಲಯದಡಿ ಸ್ಥಾಪಿಸುವ ವಚನ ಸಂಶೋಧನಾ ಕೇಂದ್ರ ಮತ್ತು ಕಾಯಕ ವಿಸ್ತರಣಾ ಕೇಂದ್ರಗಳಿಗೆ ತಲಾ 50 ಕೋಟಿ ಅನುದಾನ ನೀಡುವುದರ ಜತೆಗೆ ವಿಶ್ವವಿದ್ಯಾಲಯಕ್ಕೆ ಕನಿಷ್ಠ 200 ಎಕರೆ ಜಮೀನಿನ ಅಗತ್ಯವಿದೆʼ ಎಂದು ವಿವರಿಸಿದರು.
ʼಬಸವಕಲ್ಯಾಣ ಮತ್ತು ಒಟ್ಟು ಬೀದರ್ ಜಿಲ್ಲೆಯಲ್ಲಿ ನೂರು ಎಕರೆಯಷ್ಟು ಜಮೀನನ್ನು ನಾವು ಹೊಂದಿಸುತ್ತೇವೆ. ಸರಕಾರದ ವತಿಯಿಂದ ಬಸವಕಲ್ಯಾಣದಲ್ಲಿ ನೂರು ಎಕರೆಗಳಷ್ಟು ಭೂಮಿಯನ್ನು ಮಂಜೂರು ಮಾಡಬೇಕು. ಹೆಚ್ಚು ವಿಳಂಬವಿಲ್ಲದೇ ಆದಷ್ಟು ಬೇಗ ಕಾರ್ಯಸಾಧುವಾಗುವಂತೆ ಮಾಡಲು ತಮ್ಮ ಕಡೆಯಿಂದ ಸೂಕ್ತ ನಿರ್ದೇಶನ ನೀಡಬೇಕುʼ ಎಂದು ಸಿಎಂಗೆ ಬರೆದ ಮನವಿ ತಿಳಿಸಲಾಗಿದೆ.
ಇದನ್ನೂ ಓದಿ : ಬೀದರ್ | ಪಶು ವಿವಿ 15ನೇ ಘಟಿಕೋತ್ಸವ : 16 ಚಿನ್ನದ ಪದಕ ಮುಡಿಗೇರಿಸಿಕೊಂಡ ʼಖುಷಿʼ
ಗದಗ-ಡಂಬಳ ಜಗದ್ಗುರು ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಬೆಂಗಳೂರು ಬಸವ ಗಂಗೋತ್ರಿ ಅಧ್ಯಾತ್ಮಿಕ ಕೇಂದ್ರದ ಸದ್ಗುರು ಬಸವಯೋಗಿ ಸ್ವಾಮೀಜಿ, ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಹಂದಿಗುಂದಿಯ ಶಿವಾನಂದ ಸ್ವಾಮೀಜಿ, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಭಾಲ್ಕಿಯ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮತ್ತಿತರರಿದ್ದರು.





