ವಿಧಾನಸಭೆ ಚುನಾವಣೆ ವೇಳೆ ಪಡೆದಿದ್ದ ₹99 ಲಕ್ಷ ಸಾಲವನ್ನು ಮರಳಿ ನೀಡಲಿಲ್ಲವೆಂಬ ಆರೋಪದಡಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬಸವಕಲ್ಯಾಣ ನಗರದ ಜೈ ಶಂಕರ್ ಕಾಲೋನಿಯ ನಿವಾಸಿ ಸಂಜುಕುಮಾರ್ ಸುಗುರೆ ಎಂಬವರು ದೂರು ನೀಡಿದ್ದು, ಬೆಂಗಳೂರಿನ ಎಸಿಜೆಎಂ ನ್ಯಾಯಾಲಯ ಆದೇಶದ ಮೇರೆಗೆ ಶನಿವಾರ ಬಸವಕಲ್ಯಾಣದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ಶಾಸಕ ಶರಣು ಸಲಗರ್ ಅವರು 2023ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಚುನಾವಣೆಯ ತಯಾರಿಯಲ್ಲಿದ್ದಾಗ ಜನವರಿ 2023ರಿಂದ ಫೆಬ್ರವರಿ 2023ರ ಎರಡನೇ ವಾರದವರೆಗೆ ಸಲಗರ್ ಅವರಿಗೆ ಒಟ್ಟು 99 ಲಕ್ಷ ರೂಪಾಯಿ ಮುಂಗಡವಾಗಿ ಸಾಲ ನೀಡಲಾಗಿತ್ತು. ಶರಣು ಸಲಗರ್ ಅವರು ಈ ಸಾಲವನ್ನು 6 ತಿಂಗಳಲ್ಲಿ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಸಾವಲವನ್ನು ಮರುಪಾವತಿ ಮಾಡಲಿಲ್ಲ” ಎಂದು ಸಂಜುಕುಮಾರ್ ಸುಗುರೆ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
“ಈ ಹಿಂದೆಯೂ ನನ್ನ ಬಳಿ ಹಲವಾರು ಬಾರಿ ಹಣ ಪಡೆದಿದ್ದರು. ಆ ಹಣವನ್ನು ವಾಪಸ್ ಮರಳಿಸಿದ್ದರು. ಅದೇ ನಂಬಿಕೆಯ ಮೇಲೆ ಈ ಸಾಲವನ್ನು ನೀಡಲಾಗಿತ್ತು. ಅಲ್ಲದೆ ಆತ ನಮ್ಮ ದೂರದ ಸಂಬಂಧಿ, ಇದೇ ನಂಬಿಕೆಯ ಮೇಲೆ ಹಣದ ಸಹಾಯ ಮಾಡಲಾಗಿತ್ತು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
“ಆದರೆ, ಹಲವು ದಿನಗಳು ಕಳೆದರೂ ವಾಪಸ್ ಹಣ ನೀಡದೇ ಸತಾಯಿಸಲಾಗಿತ್ತು. ಬಳಿಕ ಸೆ. 14ರಂದು ಹಿರಿಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶರಣು ಸಲಗರ್ ಹಣ ನೀಡಲು ಒಪ್ಪಿಕೊಂಡು ಚೆಕ್ ನೀಡಿದ್ದಾರೆ. ಆದರೆ, ಚೆಕ್ ಬ್ಯಾಂಕ್ಗೆ ಹಾಕಿದಾಗ ಖಾತೆ ಮುಚ್ಚಿರುವ ಸಂಗತಿ ಬೆಳಕಿಗೆ ಬಂದಿದ್ದು, ಚೆಕ್ ಬೌನ್ಸ್ ಆಗಿದೆ” ಎಂದು ದೂರಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪಿಎಸ್ಐ ಹಗರಣ; ಜೈಲಲ್ಲಿ ಆರ್ ಡಿ ಪಾಟೀಲ ಮತ್ತೆ ಕಿರಿಕ್
“ಕೊಟ್ಟ ಹಣವನ್ನು ವಾಪಸ್ ಕೊಡುವಂತೆ ಕೇಳಲು ಶರಣು ಸಲಗರ್ ಅವರ ಮನೆಗೆ ಹೋದ ನನ್ನ ಪತ್ನಿ ಹಾಗೂ ಪುತ್ರನಿಗೆ ಹಣ ನೀಡದೇ ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಜೀವ ಬೇದರಿಕೆ ಹಾಕಿದ್ದಾರೆ. ಆರೋಪಿ ಸ್ಥಾನದಲ್ಲಿ ಇರುವ ಶಾಸಕ ಶರಣು ಸಲಗರ್, ಮೋಸ ಮಾಡುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ 74, 109, 314(4), 318, 351 ಮತ್ತು 352 ಬಿಎನ್ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.





