ಬಹುತ್ವ ಹಾಗೂ ಬಹುಸಂಸ್ಕೃತಿಯ ನಮ್ಮ ದೇಶದ ನಾಡಿಮಿಡಿತಗಳು. ಸಾಮಾಜಿಕ ಸೌಹಾರ್ದತೆ ಹಾಗೂ ಧಾರ್ಮಿಕ ಸಹಿಷ್ಣುತೆ ಇಡೀ ಲೋಕದ ಚಾಲಕ ಶಕ್ತಿಗಳಾವೆ ಎಂದು ಹುಲಸೂರ ತಹಸೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.
ಹುಲಸೂರ ತಾಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ ಧೂಳಪ್ಪ ಭರಮಶೆಟ್ಟೆ ಅವರ ತೋಟದಲ್ಲಿ ಎಳ್ಳ ಅಮಾವಾಸ್ಯೆ ಪ್ರಯುಕ್ತ ಬಸವಕಲ್ಯಾಣದ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ರಂಗಭೂಮಿ, ಸಮಾಜ ಮತ್ತು ರಾಜಕಾರಣ’ ಕುರಿತ ಪ್ರತಿಷ್ಠಾನದ 95ನೇ ಉಪನ್ಯಾಸ ಸಮಾರಂಭವನ್ನು ಸಾಹಿತ್ಯ ಕೃತಿಗಳು ಓದುಗರಿಗೆ ನೀಡಿ, ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಮಾನವೀಯತೆ ಎಲ್ಲವನ್ನೂ ಮೀರಿದ ತತ್ವವಾಗಿದೆ ಮತ್ತು ಸತ್ವವೂ ಆಗಿದೆʼ ಎಂದರು.
ಪತ್ರಕರ್ತ ಮಾಣಿಕ ಭುರೆ ಮಾತನಾಡಿ, ಪ್ರತಿಯೊಂದು ಪ್ರಭುತ್ವಗಳು ಸೈದ್ಧಾಂತಿಕ ವಿಚಾರಗಳಿಗೆ ಬದ್ಧವಾಗಿರುತ್ತವೆ. ಜನಪರ ಚಿಂತನೆ ಮತ್ತು ಪ್ರಗತಿಪರತೆಯ ವಿವೇಚನೆಗಳು ಮನುಷ್ಯ ಲೋಕವನ್ನು ಹೆಚ್ಚು ಎಚ್ಚರದಿಂದ ಇಟ್ಟಿವೆ. ಭಾವನಾತ್ಮಕ ಸಂಗತಿಗಳಿಗಿಂತ ಬೌದ್ಧಿಕ ಮತ್ತು ಭೌತಿಕ ಬೆಳವಣಿಗೆಗೆ ಅಧಿಕಾರ ಕೇಂದ್ರಗಳು ಆದ್ಯತೆ ಕೊಡಬೇಕು. ಆ ಮುಖಾಂತರ ಸಾಮಾಜಿಕ ಏಳಿಗೆ ಸಾಧ್ಯʼ ಎಂದರು.
ಕಲಬುರಗಿಯ ರಂಗಕರ್ಮಿ ಉಮೇಶ ಪಾಟೀಲ ಮಾತನಾಡಿ, ʼಸಮಾಜದ ಸಂಕೀರ್ಣತೆಗಳು, ಸಮಕಾಲೀನ ಸಂದಿಗ್ಧತೆಗಳು, ಮನುಷ್ಯನ ಆತಂಕಗಳು ರಂಗಭೂಮಿ ತನ್ನ ಪ್ರದರ್ಶನದ ಸ್ವರೂಪದಲ್ಲಿ ಅನಾವರಣ ಮಾಡುತ್ತ ಬಂದಿದೆ. ಎಲ್ಲ ಕಾಲಕ್ಕೂ ಕಾಡಿದ ಕಾಮ, ಸಂಪತ್ತು ಮತ್ತು ಅಧಿಕಾರದ ದಾಹ, ಅಧಿಕಾರದ ಬೆನ್ನಟ್ಟಿ ನಡೆಸಿದ ಹಿಂಸೆ, ಕ್ರೌರ್ಯ, ಮಹಿಳೆಯರ ಮತ್ತು ದುರ್ಬಲರ ಅಸಹಾಯಕತೆ ಇಂಥ ಹಲವು ಸಂಗತಿಗಳ ಬಗೆಗೆ ರಂಗಭೂಮಿ ನಿರಂತರ ಮಾತನಾಡುತ್ತ ಬಂದಿದೆʼ ಎಂದರು.
ಬಸವಕಲ್ಯಾಣದ ಐಡಿಯಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುಜಾಹಿದ್ ಪಾಶಾ ಖುರೇಷಿ ಮಾತನಾಡಿ, ʼನಾಟಕ ಮತ್ತು ರಂಗಭೂಮಿ ಸಮಾಜವನ್ನು ಜಾಗ್ರತವಾಗಿಡುವ ಕಲಾ ಮಾಧ್ಯಮವಾಗಿವೆ. ಎದೆಯಿಂದ ಎದೆಗೆ ಮಾನವೀಯತೆಯ ಸೇತುವೆ ಕಟ್ಟುವ ಕಲೆ ಎಲ್ಲಾ ಕಾಲಕ್ಕೂ ಜೀವಂತವಾಗಿರುತ್ತದೆʼ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಮಾತನಾಡಿ, ʼಈ ಕಾಲಕ್ಕೆ ರಾಜಕಾರಣದ ಪರಿಭಾಷೆ ಬದಲಾಗಿದೆ. ತತ್ವ ಸಿದ್ಧಾಂತಗಳ ಬದ್ಧತೆಗಿಂತ ಅಧಿಕಾರದ ಆಮಿಷ ಹೆಚ್ಚಾಗಿದೆ. ಭಾವನಾತ್ಮಕ ಸಂಗತಿಗಳೇ ಆಗಲಿ, ಸಂವೇದನೆ ರಹಿತ ಸಂಗತಿಗಳೇ, ಜಾತಿ, ಧರ್ಮದಂಥ ಸಂಗತಿಗಳೇ ಆಗಲಿ ರಾಜಕೀಯ ಅಧಿಕಾರದ ಪರಿಕರಗಳಾಗಿ ಬಳಕೆಯಾಗುತ್ತಿವೆʼ ಎಂದರು.
ಬಸವಕಲ್ಯಾಣ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಮನುಷ್ಯನ ಬಿಕ್ಕಟ್ಟಿನ ಸಂದರ್ಭದಲ್ಲಿ ಸೃಜನಶೀಲತೆ ಸದಾ ಹೊಸ ದಾರಿ ತೋರುತ್ತ ಬಂದಿದೆ. ಸಾಹಿತ್ಯ, ನಾಟಕ, ರಂಗಭೂಮಿ , ಸಿನಿಮಾಗಳು ಪ್ರಭುತ್ವ, ಲೋಕವನ್ನು ನಿರಂತರ ವಿಮರ್ಶಿಸುತ್ತ ಬಂದಿವೆ. ಗ್ರೀಕ್ ನಾಟಕಗಳಿಂದ ಕನ್ನಡದ ರಂಗಭೂಮಿಯವರೆಗೆ ಎಲ್ಲಾ ಕಾಲದಲ್ಲಿಯೂ ನಾಟಕ ಮತ್ತು ರಂಗಭೂಮಿ ಪ್ರಜ್ಞೆಯಾಗಿ ಮನುಷ್ಯನೊಟ್ಟಿಗೆ ಇದೆʼ ಎಂದರು.
ಮುಖಂಡ ವಿಜಯಕುಮಾರ ಪಾಟೀಲ ಶಿವಪುರ, ಪತ್ರಕರ್ತ ಬಸವಕುಮಾರ ಕವಟೆ ಮಾತನಾಡಿದರು. ರಂಗಕರ್ಮಿ ಉಮೇಶ ಪಾಟೀಲ ಅವರು ತಾವು ಬರೆದ ‘ಟ್ಯಾಬ್ಲೆಟ್’ ನಾಟಕದ ವಾಚಸಿ, ಏಕಪಾತ್ರಾಭಿನಯಲ್ಲಿ ಅಭಿನಯಿಸಿದ್ದು ಗಮನ ಸೆಳೆಯಿತು.
ಇದನ್ನೂ ಓದಿ : ಬೀದರ್ | ದ್ವಿಚಕ್ರ ವಾಹನಕ್ಕೆ ಕೆಕೆಆರ್ಟಿಸಿ ಬಸ್ ಡಿಕ್ಕಿ : ಸವಾರ ಸ್ಥಳದಲ್ಲೇ ಸಾವು
ಪತ್ರಕರ್ತ ನಾಗಪ್ಪ ನಿಣ್ಣೆ, ಶಿಕ್ಷಕ ಎಂಡಿ. ಅಲ್ತಾಫ್, ಧೂಳಪ್ಪ ಭರಮಶೆಟ್ಟೆ, ದತ್ತಾತ್ರಿ ರಾಘೋ, ಕಂಟೆಪ್ಪ ಮೇತ್ರೆ, ಸತೀಶ್ ಹಿರೇಮಠ, ಬಸವರಾಜ ಬಿರಾದಾರ ಖಂಡಾಳ, ಪ್ರಭಾಕರ ನೌಗಿರೆ, ಡಾ. ಪ್ರವೀಣ ದಸ್ತಾಪುರೆ, ಅಂಬರೀಶ್ ಮಹಾಲಿಂಗ, ಕಾಶಿನಾಥ ಬಿರಾದಾರ, ಜಗನ್ನಾಥ ಭೋಪಳೆ, ಸಿದ್ರಾಮ ಕಾವಳೆ, ನಾಗಪ್ಪ ನಿಣ್ಣೆ, ದಯಾನಂದ ಭರಮಶೆಟ್ಟೆ, ಸಿದ್ದರಾಮ ಖ್ಯಾಡೆ ಮೊದಲಾದವರಿದ್ದರು. ಪ್ರತಿಷ್ಠಾನದ ನಿರ್ದೇಶಕ ಡಾ.ಶಿವಾಜಿ ಮೇತ್ರೆ ಸ್ವಾಗತಿಸಿದರು. ಗಂಗಾಧರ ಸಾಲಿಮಠ ನಿರೂಪಿಸಿ, ವಂದಿಸಿದರು.





