ಭಗವಂತ ಖುಬಾ ಅವರು ಎರಡು ಸಲ ಸಂಸದರಾಗಿ ಆಯ್ಕೆಯಾಗಿದ್ದಾರೆ. ನಾನು ಕ್ಷೇತ್ರದ ಅನೇಕ ಗ್ರಾಮ ಪಂಚಾಯತ್ಗಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ ವೇಳೆ ಖುಬಾ ಅವರನ್ನು ಖುದ್ದಾಗಿ ಎಷ್ಟು ಸಲ ನೋಡಿದ್ದೀರಾ ಎಂದು ಪ್ರಶ್ನಿಸಿದಾಗ, ಅವರು ನಮ್ಮೂರಿಗೆ ಬಂದಿಲ್ಲ, ಅವರನ್ನು ನೋಡಿಲ್ಲ ಎಂದು ಹೇಳಿದ್ದಾರೆ. ನಿಜವಾಗಿಯೂ ನಾನು ಯಾವತ್ತೂ ಖೂಬಾ ಅವರನ್ನು ಖುದ್ದಾಗಿ ನೋಡಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಹೇಳಿದರು.
ಬೀದರ್ನಲ್ಲಿ ಬುಧವಾರ ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ ಬಳಿಕ ನಗರದ ಗಣೇಶ ಮೈದಾನದಲ್ಲಿ ನಡೆಸ ಬೃಹತ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿ, “ಎರಡು ಸಲ ಬೇರೆಯವರ ಹೆಸರಿನಲ್ಲಿ ಗೆದ್ದು ಬಂದಿದ್ದೇನೆ. ಈ ಬಾರಿಯೂ ಅದೇ ನಾಮಬಲದಿಂದ ಗೆದ್ದು ಬರುವೆ, ಜನರಿಗೆ ಭೇಟಿಯಾಗುವ ಅವಶ್ಯಕತೆಯಿಲ್ಲ. ಕೆಲಸ ಮಾಡುವ ಅವಶ್ಯಕತೆಯಿಲ್ಲ ಎಂದು ಖೂಬಾ ಭಾವಿಸಿದ್ದಾರೆ” ಎಂದರು.
“ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿ ಜಿಲ್ಲೆಯ ರೈತರು 15 ಕೋಟಿ ರೂ. ಪ್ರೀಮಿಯಂ ಹಣ ಕಟ್ಟಿದ್ದಾರೆ. ಆದರೆ ಬೆಳೆ ಹಾನಿಯಾದ ರೈತರಿಗೆ 80 ಲಕ್ಷ ಹಣ ಮಾತ್ರ ಬಂದಿದೆ. ಇನ್ನುಳಿದ ಹಣ ಎಲ್ಲಿ ಹೋಗಿದೆ? ನನ್ನ ಪ್ರಶ್ನೆಗೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಉತ್ತರಿಸಲಿ” ಎಂದು ಒತ್ತಾಯಿಸಿದರು.

“ಜಿಲ್ಲೆಯ ಯುವಕರಿಗೆ ಉದ್ಯೋಗವಿಲ್ಲ. ಈ ಬಾರಿ ನನ್ನನ್ನು ಸಂಸದನ್ನಾಗಿ ಆಯ್ಕೆ ಮಾಡಿದರೆ ಜಿಲ್ಲೆಗೆ ಐಟಿ ಕಂಪನಿ, ಕಾರ್ಖಾನೆ ಸ್ಥಾಪಿಸಿ ನಿರುದ್ಯೋಗ ಯುವಕರಿಗೆ ಕೆಲಸ ಕೊಡಿಸುವೆ. ರೈತರ ಅನುಕೂಲಕ್ಕಾಗಿ ನಿರಂತರ ವಿದ್ಯುತ್ ಪೂರೈಕೆ ಸೋಲಾರ್ ಪಾರ್ಕ್ ನಿರ್ಮಿಸುವೆ. ದಿನದ 24 ಗಂಟೆಯೂ ಜನರ ಸೇವೆಗಾಗಿ ಸಿದ್ಧನಿದ್ದೇನೆ. ಬಹುಶಃ ನಾನು ಗೆದ್ದರೆ ದೇಶದ ಅತ್ಯಂತ ಕಿರಿಯ ಸಂಸದ ಎಂಬ ಖ್ಯಾತಿ ಪಾತ್ರನಾಗುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ನಕಲಿ ಸುದ್ದಿ ಹರಡಲು ಬಿಜೆಪಿ ಐಟಿ ಸೆಲ್ ಉದ್ಯೋಗಿಗಳಿಗೆ ಮಾಸಿಕ 50 ಸಾವಿರ ರೂ. ವೇತನ!
“ನನಗೆ ಚಿಕ್ಕ ವಯಸ್ಸು, ಅನುಭವ ಕಡಿಮೆ ಇದೆ ಎಂದು ವಿರೋಧಿಗಳು ಹೇಳುತಿದ್ದಾರೆ. ಆದರೆ ಜನ ಸೇವೆಗೆ ಅನುಭವಕ್ಕಿಂತ ಇಚ್ಚಾಶಕ್ತಿ ಮುಖ್ಯ ಎಂಬುದು ನನ್ನ ಅಭಿಪ್ರಾಯ, ಅನುಭವ ಎಷ್ಟೇ ಇದ್ದರೂ ಇಚ್ಚಾಶಕ್ತಿ ಇಲ್ಲದಿದ್ದರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಖೂಬಾ ಅವರನ್ನು ಚರ್ಚೆಗೆ ಆಹ್ವಾನಿಸಿದ್ದೆ, ಅವರು ನನ್ನ ಚಾಲೆಂಜ್ ಸ್ವೀಕರಿಸಲಿಲ್ಲ. ಚುನಾವಣೆ ಮುಗಿಯುವವರೆಗೆ ಖೂಬಾ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳುವೆ, ಅವುಗಳಿಗೆ ಉತ್ತರಿಸಬೇಕು” ಎಂದು ಸವಾಲು ಹಾಕಿದರು.





