ಬೀದರ್-ಕಮಲನಗರ ರಾಷ್ಟ್ರೀಯ ಹೆದ್ದಾರಿ-50ರ ಸಾವಳಿ ಗ್ರಾಮ ಸಮೀಪ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕಮಲನಗರ ತಾಲೂಕಿನ ಬಸವನಾಳ ಗ್ರಾಮದ ಭಾನುದಾಸ ಮನ್ಮಥಪ್ಪಾ ಕಾರಬಾರಿ (68) ಮೃತರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಜ.24ರಂದು ಸಂಜೆ 7ಗಂಟೆ ಸುಮಾರಿಗೆ ಬಸವನಾಳ ಗ್ರಾಮದ ರಾಜಕುಮಾರ ಸಂಗಶೆಟ್ಟಿ ಎಂಬುವವರ ದ್ವಿಚಕ್ರ ವಾಹನ ಮೇಲೆ ಹಿಂದುಗಡೆ ಕುಳಿತು ಹೊಳಸಮುದ್ರ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಭಾನುದಾಸ ಅವರನ್ನು ಭಾಲ್ಕಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಬ್ರಿಮ್ಸ್ಗೆ ದಾಖಲಿಸಲಾಗಿತ್ತು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಜ.27ರಂದು ಸಂಜೆ ಮೃತಪಟ್ಟಿದ್ದಾರೆ.
ಕಮಲನಗರ-ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಸಾವಳಿ ಗ್ರಾಮದ ಸಮೀಪದ ರಸ್ತೆ ಮೇಲೆ ಬ್ಯಾರಿಕೇಡ್ಗಳಿಲ್ಲ. ಸವಾರರು ಬೇಕಾಬಿಟ್ಟಿಯಾಗಿ ಅತೀ ವೇಗದಿಂದ ವಾಹನ ಚಲಾಯಿಸುತ್ತಿದ್ದಾರೆ. ಕೂಡಲೇ ಸಾವಳಿ ಗ್ರಾಮದ ಬಳಿ ಬ್ಯಾರಿಕೇಡ್ ಅಳವಡಿಸಬೇಕೆಂದು ಬಸನಾಳ ಗ್ರಾಮಸ್ಥ ಸದಾನಂದ ಪಾಟೀಲ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಅಜಿತ್ ಪವಾರ್: ಮೋದಿ ಸರ್ಕಾರದ ಒತ್ತಡಕ್ಕೆ ಮಣಿದು ಎನ್ಸಿಪಿ ಇಬ್ಭಾಗಿಸಿದ್ದ ‘ಮಹಾ’ ನಾಯಕ





