ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೇಶ ಕಟ್ಟುವ ಕಾರ್ಯಕ್ಕೆ ಬೆನ್ನೆಲಬಾಗಿ ನಿಂತು, ನಿರಂತರವಾಗಿ ಶ್ರಮವಹಿಸಿದ ಅವರ ಪತ್ನಿ ಮಾತೆ ರಮಾಬಾಯಿ ಅಂಬೇಡ್ಕರ್ ಅವರ ತ್ಯಾಗಮಯಿ ಜೀವನ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಶಿಕ್ಷಕ ರೋಹಿದಾಸ್ ಡೋಂಗ್ರೆ ಹೇಳಿದರು.
ಕಮಲನಗರ ತಾಲೂಕಿನ ಬೆಳಕುಣಿ (ಭೋ) ಗ್ರಾಮದ ಪಂಚಶೀಲ ಬುದ್ಧ ವಿಹಾರದಲ್ಲಿ ಆಯೋಜಿಸಿದ ಮಾತಾ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ 128ನೇ ಜನ್ಮದಿನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ʼಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು-ಬರಹ-ಹೋರಾಟದ ಬದುಕಿಗೆ ರಮಾಬಾಯಿ ಅವರ ತ್ಯಾಗ ಅನನ್ಯ. ಎಂಥ ಕಠಿಣ ಪರಿಸ್ಥಿತಿಗಳ ನಡುವೆಯೂ ಕುಟುಂಬವನ್ನು ಮುನ್ನಡೆಸಿ, ಶಿಕ್ಷಣ ಮತ್ತು ಸಮಾನತೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಿದ ರಮಾಬಾಯಿ ಅವರ ಜೀವನ ಸ್ಪೂರ್ತಿದಾಯಕʼ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಧಮ್ಮ ವಂದನಾ ಮಂತ್ರಗಳ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಸ್ವರೂಪ ನೀಡಲಾಯಿತು. ಗ್ರಾಮದ ಮುಖಂಡರು, ಮಹಿಳೆಯರು, ಮಕ್ಕಳು ಭಾಗವಹಿಸಿದರು.
ಮಾತಾ ರಮಾಬಾಯಿ ಅಂಬೇಡ್ಕರ್ ಅವರ ಸ್ಮರಣಾರ್ಥವಾಗಿ ಸಿದ್ಧಾಂತ್ ಗಾಯನ ತಂಡದಿಂದ ಭಜನೆ ಹಾಗೂ ಸ್ಮರಣಾರ್ಥ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಭಜನೆಗಳು ಹಾಗೂ ಧಮ್ಮಗೀತೆಗಳ ಮೂಲಕ ಸಮಾರಂಭವು ಭಕ್ತಿಭಾವದಿಂದ ಜರುಗಿತು.
ಇದನ್ನೂ ಓದಿ : ಬೀದರ್ | ಯುಜಿಸಿ ನಿಯಮಾವಳಿ ಶೀಘ್ರ ಜಾರಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ
ಕಾರ್ಯಕ್ರಮದಲ್ಲಿ ತಾನಾಜಿ ಕಂಬ್ಳೆ, ಖಂಡು ಗಾಯಕವಾಡ, ಭೀಮರಾವ್ ರಾಣಡೆ, ಯಾದವ ರಾನಡೆ, ಮಹೇಶ ಡೋಂಗ್ರೆ ವಿಜಯ್ ಡೋಂಗ್ರೆ, ಕೇವಲಬಾಯಿ ಕಾಂಬಳೆ ಸೇರಿದಂತೆ ಅನೇಕರಿದ್ದರು.





