ಅಡುಗೆ ಅನಿಲ ಸಂಪರ್ಕ (ಎಲ್ಪಿಜಿ ಕನೆಕ್ಷನ್) ಹೊಂದಿದವರು ಡಿಸೆಂಬರ್ 31 ರೊಳಗೆ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಮತ್ತು ಸಿಲಿಂಡರ್ ಸರಬರಾಜು ಮಾಡಲಾಗುತ್ತದೆ, ಇ-ಕೆವೈಸಿ ಕಾರ್ಯಕ್ಕೆ ಹಣ ನೀಡಬೇಕು ಮತ್ತು ಇ-ಕೆವೈಸಿ ಮಾಡಿಸಿದರೆ 500 ರೂ.ಗೆ ಸಿಲಿಂಡರ್ ನೀಡುತ್ತಾರೆ ಎಂಬುದು ಕೇವಲ ವದಂತಿ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿಷಯ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಇದು ಕೇವಲ ವದಂತಿಯಾಗಿದ್ದು, ಅಡುಗೆ ಅನಿಲ ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಇ-ಕೆವೈಸಿ ನೀಡಬಹುದಾಗಿದೆ. ಅದೂ ಸಹ ಉಚಿತ ಕಾರ್ಯವಾಗಿರುತ್ತದೆ. ಆದರೆ ಅದಕ್ಕೆ ಕೇಂದ್ರ ಸರ್ಕಾರವು ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ ಎಂದು ಹೇಳಿದ್ದಾರೆ.
“ಮೊದಲ ಆದ್ಯತೆಯಾಗಿ ಉಜ್ವಲ ಯೋಜನೆಯ ಗ್ಯಾಸ್ ಸಂಪರ್ಕ ಪಡೆದವರು ಇ-ಕೆವೈಸಿ ನೀಡಬೇಕಾಗಿದೆ. ಉಳಿದಂತೆ ಗ್ಯಾಸ್ ಸಂಪರ್ಕ ಹೊಂದಿದವರು ಆಧಾರ ಸಂಖ್ಯೆ ದಾಖಲೆಯೊಂದಿಗೆ ತಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಇ-ಕೆವೈಸಿ ನೀಡಬಹುದಾಗಿದೆ, ಎಚ್ಪಿಸಿ, ಐಓಸಿ ಮತ್ತು ಬಿಪಿಸಿ ಕಂಪನಿಯ ಪೋರ್ಟಲ್ಗಳಲ್ಲಿ ಮತ್ತು ಆ್ಯಪ್ ಗಳಲ್ಲಿಯೂ ಸಹ ಇ-ಕೆವೈಸಿಯನ್ನು ಗ್ರಾಹಕರು ಸ್ವತಃ ಮಾಡಿಸಿಕೊಳ್ಳಬಹುದಾಗಿದೆ. ಸದರಿ ಇ-ಕೆವೈಸಿ ಕಾರ್ಯಕ್ಕೆ ಯಾವುದೇ ನಿರ್ದಿಷ್ಟ ಗಡುವು ಇರುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಸಲು ಬಲವಾದ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ : ಲಕ್ಷ್ಮಣ ದಸ್ತಿ
ಸಾರ್ವಜನಿಕರು ಸದರಿ ಇ-ಕೆವೈಸಿ ಕಾರ್ಯಕ್ಕೆ ಯಾವುದೇ ಸರದಿ ಸಾಲುಗಳಲ್ಲಿ ನಿಂತುಕೊಂಡು ಆತಂಕಗೊಳಗಾಗದೇ ತಮ್ಮ ಅನುಕೂಲಕರ ಸಮಯದಲ್ಲಿ ಹೋಗಿ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.




