ಕಲ್ಯಾಣ ಕರ್ನಾಟಕದ ಭಾಗದ ಏಳು ಜಿಲ್ಲೆಗಳಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಶನ್ (ಎಸ್ಐಓ) ವತಿಯಿಂದ
ʼಕಲಿಕೆಯೇ ಕಲ್ಯಾಣʼ ಎನ್ನುವ ಮಹತ್ವದ ಅಭಿಯಾನವನ್ನು ಫೆಬ್ರುವರಿ 15ರವರೆಗೆ ಆಯೋಜಿಸಲಾಗಿದೆ ಎಂದು ಎಸ್ಐಓ ರಾಜ್ಯ ಕಾರ್ಯದರ್ಶಿ ಆಸಿಫ್ ಡಿಕೆ ತಿಳಿಸಿದರು.
ಬೀದರ್ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ʼ2025ರ ಡಿ.15ರಿಂದ ಈ ಅಭಿಯಾನ ಆರಂಭಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮೊಹಲ್ಲಾಗಳಲ್ಲಿ ಸಭೆ ನಡೆಸುವುದು, ಓಣಿಗಳಲ್ಲಿ ಪಾಲಕರೊಂದಿಗೆ ಫಲಿತಾಂಶ ಸುಧಾರಣೆ ಕುರಿತು ಸಾಧಕ-ಬಾಧಕಗಳನ್ನು ಚರ್ಚಿಸುವ ಪ್ರಯತ್ನ ಮಾಡಲಾಗುತ್ತಿದೆʼ ಎಂದರು.
ʼಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಾರ್ಷಿಕ ಫಲಿತಾಂಶ ಸುಧಾರಣೆಯೇ ನಮ್ಮ ಮೂಲ ಉದ್ದೇಶವಾಗಿದೆ. ಕಲ್ಯಾಣ ಕರ್ನಾಟಕವು ಭೌಗೋಳಿಕವಾಗಿ ಅತ್ಯಂತ ಶ್ರೀಮಂತವಾಗಿದ್ದರೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸುವ ಅವಶ್ಯಕತೆ ಇದೆʼ ಎಂದು ತಿಳಿಸಿದರು.
ಎಸ್ಐಓ ಬೀದರ ಜಿಲ್ಲಾಧ್ಯಕ್ಷ ಎಂಡಿ ಸೈಫೋದ್ದಿನ್ ಮಾತನಾಡಿ, ʼಶಿಕ್ಷಣ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯದ ಏಳಿಗೆಗೆ ಹೇಗೆ ಕಾರಣವಾಗಬಲ್ಲದು ಎನ್ನುವ ಕುರಿತು ಜಾಗೃತಿ ಮೂಡಿಸುವುದು ಕಲಿಕೆಯೇ ಕಲ್ಯಾಣ ಅಭಿಯಾನದ ಮೂಲ ಉದ್ದೇಶ. ಸಮುದಾಯದ ಬೆಂಬಲ ಮತ್ತು ಸಹಕಾರದಿಂದ ಈ ಭಾಗದದಲ್ಲಿ ಫಲಿತಾಂಶ ಹೆಚ್ಚಳಕ್ಕೆ ಪ್ರಯತ್ನ ನಡೆಯುತ್ತಿದೆ. ಮಾಧ್ಯಮ, ರಾಜಕೀಯ ಹಾಗೂ ಶಿಕ್ಷಣ ತಜ್ಞರು, ಅಧಿಕಾರಿಗಳೊಂದಿಗೆ ಚರ್ಚಿಸಿ ಶೈಕ್ಷಣಿಕ ಹಿಂದುಳಿಯುವಿಕೆಗೆ ಕಾರಣಗಳನ್ನು ಗುರುತಿಸಿ, ಪರಿಹಾರ ಕಂಡುಕೊಳ್ಳುವುದು ಅಭಿಯಾನದ ಉದ್ದೇಶವಾಗಿದೆʼ ಎಂದರು.
ಎಸ್ಐಓ ಬೀದರ್ ಘಟಕ ಅಧ್ಯಕ್ಷ ಇಝಾಮ್ ಅಹ್ಮದ್ ಮಾತನಾಡಿ, ʼಕಲ್ಯಾಣ ಕರ್ನಾಟಕ ಭಾಗವು ಶೈಕ್ಷಣಿಕವಾಗಿ
ಹಿಂದುಳಿಯಲು ಶಾಲೆಗಳಲ್ಲಿ ಮೂಲಭೂತ ಸೌಕರ್ಯ, ಶಿಕ್ಷಕರ ಕೊರತೆಯಿದೆ. ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗೆ ಶಿಕ್ಷಣವೇ ಮೂಲ ತಾಯಿಬೇರಾಗಿದ್ದು, ಅದನ್ನು ಸುಧಾರಿಸದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಿದ್ದೇವೆʼ ಎಂದು ಹೇಳಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?
ಇದೇ ವೇಳೆ ಬೀದರ ಘಟಕದ ಪ್ರಧಾನ ಕಾರ್ಯದರ್ಶಿ ಎಂಎ ಮುಕ್ತಾದೀರ್, ಉಪಾಧ್ಯಕ್ಷ ಎಂಡಿ ಆರಿಫೂದ್ದಿಮ್ ಸೇರಿದಂತೆ ಹಲವರು
ಉಪಸ್ಥಿತರಿದ್ದರು.





