ಮತದಾರರ ಸಮಗ್ರ ಪರಿಷ್ಕರಣೆ(SIR) ಕುರಿತ ಚಿಂತನ-ಮಂಥನ ಸಮಾವೇಶವನ್ನು ನಾಳೆ (ಫೆ.3) ರಂದು ಬೀದರ್ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಐಆರ್ ವಿರೋಧಿ ಜನಾಂದೋಲನ ಸಮಿತಿಯ ಪ್ರಮುಖರಾದ ಶ್ರೀಕಾಂತ ಸ್ವಾಮಿ ತಿಳಿಸಿದರು
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ʼನಾಳೆ ಬೆಳಿಗ್ಗೆ ಫೇ.೩ ರಂದು ಬೆಳಿಗ್ಗೆ 10:30 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಆರ್ಥಿಕ ತಜ್ಞ, ಪ್ರಗತಿಪರ ಚಿಂತಕ ಪರಕಾಲ ಪ್ರಭಾಕರ್ ಹಾಗೂ ಖ್ಯಾತ ಅಂಕಣಕಾರ, ಚಿಂತಕ ಶಿವಸುಂದರ ಮತ್ತು ನಾಗರಿಕ ಹಕ್ಕುಗಳ ಪ್ರತಿಪಾದಕಿ ತಾರಾ ರಾವ್ ಅವರು ಎಸ್ಐಆರ್ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ʼದೇಶದಲ್ಲಿ ಈ ಹಿಂದೆ ಮತದಾರ ಪಟ್ಟಿಯ ಪರಿಷ್ಕರಣೆ ನಡೆಯುತ್ತಿತ್ತು. ಆದರೆ, ಈಗ ಇದು ಸಾಮಾನ್ಯವಾದ ಪರಿಷ್ಕರಣೆ ನಡೆಯುತ್ತಿಲ್ಲ. ಬದಲಾಗಿ ವಿಶೇಷ ಪರಿಷ್ಕರಣೆ ಎಂದು ಮಾಡುತ್ತಿದ್ದಾರೆ. ಬಿಹಾರ, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ನಡೆಸಿ, ಏಳು ಕೋಟಿಗಿಂತ ಹೆಚ್ಚು ಮತದಾರರನ್ನು ಮತಪಟ್ಟಿಯಿಂದ ಕೈ ಬಿಡಲಾಗಿದೆ. ಉತ್ತರ ಪ್ರದೇಶ ಒಂದರಲ್ಲಿಯೇ 1.5ಕೋಟಿ ಮತದಾರರನ್ನು ಕೈ ಬಿಡಲಾಗಿದೆ. ಈ ಎಲ್ಲ ವಿಷಯಗಳ ಬಗ್ಗೆ ಅಂದಿನ ಕಾರ್ಯಕ್ರಮದಲ್ಲಿ ಚಿಂತನ ಮಂಥನ ನಡೆಯಲಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕುʼ ಎಂದು ಮನವಿ ಮಾಡಿದರು.
ಸಮಿತಿಯ ಮುಖಂಡ ಅಬ್ದುಲ್ ಮನ್ನಾನ್ ಸೇಠ್ ಅವರು ಮಾತನಾಡಿ, ʼಮತಪಟ್ಟಿ ಪರಿಷ್ಕರಣೆಯು ನಡೆಯುತ್ತಿರುತ್ತದೆ. ನಾವು ಎಸ್ಐಆರ್ ವಿರೋಧವಿಲ್ಲ. ಆದರೆ ಮತಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಹೆಸರು ತೆಗೆಯಲಾಗುತ್ತಿದೆ. ನಾವು ಅದನ್ನು ವಿರೋಧಿಸುತ್ತಿದ್ದೇವೆʼ ಎಂದರು.
ಪ್ರಗತಿಪರ ಚಿಂತಕ ವಿಠಲದಾಸ್ ಪ್ಯಾಗೆ ಅವರು ಮಾತನಾಡಿ, ʼಭಾರತ ದೇಶ ಒಂದು ಪ್ರಜಾಸತ್ತಾತ್ಮಕ ದೇಶವಾಗಿದೆ. ಪ್ರಜಾ ಪ್ರಭುತ್ವದಲ್ಲಿ ಮತದಾನದ ಹಕ್ಕು ಅತ್ಯಂತ ಪ್ರಮುಖವಾಗಿದೆ. ಮತ ಪರಿಷ್ಕರಣೆಯಾಬೇಕು. ಆದರೆ, ಪರಿಷ್ಕರಣೆ ಹೆಸರಲ್ಲಿ ನಿಜವಾದ ಮತದಾರರನ್ನು ಜಾತಿ, ಧರ್ಮದ ಹೆಸರಿನ ಮೇಲೆ, ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡುತ್ತಿರುವುದು ಸಂವಿಧಾನ ವಿರೋಧಿ ಕೆಲಸವಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆʼ ಎಂದರು.
ಇದನ್ನೂ ಓದಿ : SIR | ಮತದಾರರ ಪಟ್ಟಿ ಪರಿಷ್ಕರಣೆ ನಡೆಸುವ ಇಸಿಐ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ
ಎಸ್ಐಆರ್ ವಿರೋಧಿ ಜನಾಂದೋಲನ ಸಮಿತಿಯ ಪ್ರಮುಖರಾದ ಓಂಪ್ರಕಾಶ ರೊಟ್ಟೆ, ಮಹಮ್ಮದ್ ನಿಜಾಮುದ್ದಿನ್, ಜಗದೀಶ್ವರ ಬಿರಾದಾರ್, ಮಹೇಶ ಗೋರನಾಳಕರ್ ಮತ್ತಿತರರಿದ್ದರು.
ಎಸ್ಐಆರ್ ಚಿಂತನ ಮಂಥನ ಸಮಾವೇಶ : ಕರಪತ್ರ ಬಿಡುಗಡೆ
ನಾಳೆ ಬೀದರ್ನಲ್ಲಿ ನಡೆಯಲಿರುವ ಮತದಾರರ ಸಮಗ್ರ ಪರಿಷ್ಕರಣೆ(ಎಸ್ಐಆರ್) ಕುರಿತ ಚಿಂತನ-ಮಂಥನ ಸಮಾವೇಶದಲ್ಲಿ ತಾಲೂಕು ಸೇರಿ ಜಿಲ್ಲಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಸಂವಿಧಾನ ವಿರೋಧಿಯಾದ ಎಸ್ಐಆರ್ ಕುರಿತು ತಿಳಿದುಕೊಳ್ಳಬೇಕಿದೆ ಎಂದು ಎಸ್ಐಆರ್ ವಿರೋಧಿ ಜನಾಂದೋಲನ ಸಮಿತಿಯ ಸಂದೀಪ ಮುಕಿಂದೆ ಮನವಿ ಮಾಡಿದರು.
ಬಸವಕಲ್ಯಾಣ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಎಸ್ಐಆರ್ ಚಿಂತನ-ಮಂಥನ ಸಮಾವೇಶದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಇಕ್ರಾಮೊದ್ದಿನ್ ಖಾದಿವಾಲಾ, ಆಕಾಶ ಖಂಡಾಳೆ, ಸುರೇಶ ಮೋರೆ ಸೇರಿದಂತೆ ಅನೇಕರಿದ್ದರು.





