16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಬೇಕೆಂದು ಶೇ 80ರಷ್ಟು ಪೋಷಕರು ಬೇಡಿಕೆ ಮಂಡಿಸಿರುವ ಬಗ್ಗೆ ಬೀದರ್ ನಗರದಲ್ಲಿ ಪದವಿ ವಿದ್ಯಾರ್ಥಿಗಳು ನಡೆಸಿದ ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ.
ಬೀದರ್ ನಗರದ ಶಾಹೀನ್ ಪದವಿ ಕಾಲೇಜು ವಿದ್ಯಾರ್ಥಿಗಳು ಬೀದರ್ ನಗರದ ಒಲ್ಡ್ ಸಿಟಿ, ಫೈಜಪುರ, ಶಹಾಪುರ ಗೇಟ್, ರಾಜಗೊಂಡ ಕಾಲೊನಿ ಹಾಗೂ ಗುಂಪಾ ಪ್ರದೇಶದ ಒಟ್ಟು 825 ಮನೆಗಳಿಗೆ ಭೇಟಿ ಕೊಟ್ಟು ಪಾಲಕರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಅಫ್ರಾನಾಜ್ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ʼಮೂರು ವಿಷಯಗಳ ಕುರಿತು ಜನವರಿ 10 ರಿಂದ ಫೆಬ್ರುವರಿ 5 ರ ವರೆಗೆ ನಡೆದ ಸಮೀಕ್ಷೆಯಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ ಹಾಗೂ ಬಿ.ಸಿ.ಎ. ಓದುತ್ತಿರುವ 200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮೀಕ್ಷೆ ವೇಳೆ ಮೂರು ವಿಷಯಗಳ ತಲಾ 20 ಪ್ರಶ್ನೆಗಳನ್ನು ಕೇಳಿ, ಅವರ ಅಭಿಪ್ರಾಯ ದಾಖಲಿಸಿಕೊಂಡಿದ್ದರು. ಯಾರೊಬ್ಬರ ವೈಯಕ್ತಿಕ ಮಾಹಿತಿ ಅಥವಾ ಮೊಬೈಲ್ ಸಂಖ್ಯೆ ಪಡೆದಿಲ್ಲʼ ಎಂದು ಹೇಳಿದರು.
ʼಅತಿಯಾದ ಮೊಬೈಲ್ ವೀಕ್ಷಣೆಯಿಂದ ಮಕ್ಕಳ ಮನಸ್ಸಿನ ಮೇಲೆ ಆಗುತ್ತಿರುವ ಪರಿಣಾಮ, ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನು ಹಾಗೂ ಸ್ವಚ್ಛ ಭಾರತ ಅಭಿಯಾನ ಕುರಿತು ವಿದ್ಯಾರ್ಥಿಗಳು ಸಮೀಕ್ಷೆ ನಡೆಸಿದರು. ಈಗಾಗಲೇ ಆಸ್ಟ್ರೇಲಿಯಾದಲ್ಲಿ 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಲಾಗಿದೆ. ಅಂತಹುದೇ ಕಾನೂನನ್ನು ದೇಶದಲ್ಲೂ ಜಾರಿಗೆ ತರಬೇಕು ಎಂಬುದು ಸಮೀಕ್ಷೆಯಲ್ಲಿ ಪೋಷಕರಿಂದ ಅಭಿಪ್ರಾಯ ವ್ಯಕ್ತವಾಗಿದೆʼ ಎಂದರು.

ಮಕ್ಕಳ ಆರೋಗ್ಯದ ಮೇಲೆ ಮೊಬೈಲ್ ಪರಿಣಾಮ :
ʼಸಮೀಕ್ಷೆಯಲ್ಲಿ ಶೇ.65 ರಷ್ಟು ಪಾಲಕರು 16 ವರ್ಷದ ಒಳಗಿನ ಮಕ್ಕಳು ಮೊಬೈಲ್ ಶಿಕ್ಷಣೇತರ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಗೇಮ್, ಯುಟ್ಯೂಬ್, ರೀಲ್ಸ್ ಹಾಗೂ ಫೇಸ್ಬುಕ್ ವೀಕ್ಷಿಸಲು ಉಪಯೋಗಿಸುತ್ತಿದ್ದಾರೆ. ಶೇ 48ರಷ್ಟು ಪಾಲಕರು ಮೊಬೈಲ್ ಬಳಕೆಯ ಕಾರಣಕ್ಕಾಗಿ ಮಕ್ಕಳು ದೈಹಿಕ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ, ಕಣ್ಣು ನೋವು, ತಲೆ ನೋವು, ನಿದ್ರಾ ಹೀನತೆ ಸೇರಿದಂತೆ ಮಕ್ಕಳ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಶೇ 42ರಷ್ಟು ಮಂದಿ ಹೇಳಿದ್ದಾರೆ. ಇನ್ನು ಶೇ 33ರಷ್ಟು ಪಾಲಕರು ಮಕ್ಕಳು ಪಾಲಕರೊಂದಿಗೆ ಮುಕ್ತವಾಗಿ ಬೆರೆತು ಮಾತನಾಡುತ್ತಿಲ್ಲ ಎಂದು ಪೋಷಕರು ವಿಷಾದಿಸಿದ್ದಾರೆʼ ಎಂದು ಅವರು ಹೇಳಿದರು.
ಸ್ವಚ್ಛ ಭಾರತ – ಮಹಿಳೆಯರ ಸುರಕ್ಷತೆ ಬಗ್ಗೆ ಜನರ ಅಭಿಪ್ರಾಯ :
ʼಶೇ 95 ರಷ್ಟು ಜನರು ಸ್ವಚ್ಛ ಭಾರತ ಅಭಿಯಾನದ ಕುರಿತು ಮಾಹಿತಿ ಗೊತ್ತಿದೆ ಎಂದಿದ್ದಾರೆ. ಸ್ವಚ್ಛತೆ ಎಂಬುದು ತಮ್ಮ ವೈಯಕ್ತಿಕ ಜವಾಬ್ದಾರಿ ಎನ್ನುವುದು ತಿಳಿದಿದೆ ಎಂದು ಶೇ 90 ರಷ್ಟು ಜನ ಹೇಳಿದ್ದಾರೆ. ಸ್ವಚ್ಛ ಭಾರತ ಮೊಬೈಲ್ ಆ್ಯಪ್ ಬಗ್ಗೆ, ಶೇ 60 ರಷ್ಟು ಮಂದಿಗೆ ಗೊತ್ತಿದ್ದರೂ, ಶೇ 10 ರಷ್ಟು ಮಂದಿಯಷ್ಟೇ ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡಿರುವುದು ಹಾಗೂ ಡೌನ್ಲೋಡ್ ಮಾಡಿಕೊಂಡವರಲ್ಲಿ ಶೇ 20ರಷ್ಟು ಮಂದಿ ಮಾತ್ರ ಸಂತೃಪ್ತರಾಗಿದ್ದಾರೆʼ ಎಂಬುದು ತಿಳಿದು ಬಂದಿರುವ ಬಗ್ಗೆ ವಿವರಿಸಿದರು.
ʼಒಣ ಕಸ, ಹಸಿ ಕಸ ವಿಂಗಡಿಸಿ ಕೊಡುತ್ತಿಲ್ಲ ಎಂಬುದು ಶೇ 35 ರಷ್ಟು ಜನರ ಅಭಿಪ್ರಾಯ. ಶೇ 22ರಷ್ಟು ಜನ ನಗರಸಭೆ ಅವರು ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ, ಶೇ 58ರಷ್ಟು ಮಂದಿ ಕೆಲವೊಮ್ಮೆ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನು ಕುರಿತ ಸಮೀಕ್ಷೆಯಲ್ಲಿ ಶೇ 20.90 ರಷ್ಟು ಮಹಿಳೆಯರು ಸೋಷಿಯಲ್ ಮೀಡಿಯಾ ಟ್ರೋಲ್ಗೆ ಒಳಗಾಗಿದ್ದಾರೆ ಎಂಬ ಅತಂಕ ಮಂಡಿಸಿದ್ದಾರೆ. ಶೇ 68.40 ರಷ್ಟು ಮಂದಿ ಕಾನೂನು ತಿಳಿವಳಿಕೆ ಇದೆ. ಇನ್ನಷ್ಟು ತಿಳಿದುಕೊಳ್ಳುವ ಆಸಕ್ತಿಯೂ ಇದೆ. ಆದರೆ, ಕಾನೂನು ಅರಿವು ಸಿಗುತ್ತಿಲ್ಲʼ ಎಂಬ ಅಭಿಪ್ರಾಯ ವ್ಯಕ್ತವಾಗಿದೆʼ ಎಂದರು.
ಜನರ ಅಭಿಪ್ರಾಯ ಸಂಗ್ರಹಿಸುವುದು ಹಾಗೂ ಅದನ್ನು ಆಡಳಿತದ ಮುಂದಿಡುವುದು ವಿದ್ಯಾರ್ಥಿಗಳ ಸಮೀಕ್ಷೆಯ ಉದ್ದೇಶವಾಗಿತ್ತು. ಸಮೀಕ್ಷೆಯ ಆಧಾರದ ಮೇಲೆ ಆಡಳಿತ ಕ್ರಮ ಕೈಗೊಳ್ಳಬೇಕು ಎನ್ನುವುದೇ ವಿದ್ಯಾರ್ಥಿಗಳ ಆಶಯವಾಗಿದೆʼ ಎಂದು ಶಾಹೀನ್ ಪ್ರಾಚಾರ್ಯೆ ಅಫ್ರಾನಾಜ್ ಹೇಳಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ನ್ಯಾಯಾಧೀಶರು ಲಿಂಗ ಸಂವೇದನೆ ಕಲಿಯಬೇಕಾದ ತುರ್ತು!
ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಅಭಿಲಾಸ ಪೋಲದಾಸ್, ಡಾ.ಸಿರಾಜುಲ್ ಹಸನ್, ಪ್ರೊ.ಮಹಮ್ಮದ್ ಇಕ್ಲಾಕ್, ಪ್ರೊ.ಬಿಲಾಲ್ ಅಹಮ್ಮದ್, ಪ್ರೊ.ಅಶ್ವಿನಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.





