ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷ, ಶತಾಯುಷಿ ಭೀಮಣ್ಣ ಖಂಡ್ರೆ (102) ಅವರ ಅಂತ್ಯಕ್ರಿಯೆ ಭಾಲ್ಕಿಯ ಚಿಕಲಚಂದಾ ಗ್ರಾಮದ ರಸ್ತೆಯಲ್ಲಿರುವ ಶಾಂತಿಧಾಮ ಆವರಣದಲ್ಲಿ ಶನಿವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಇದರೊಂದಿಗೆ ನಾಡಿನ ಹಿರಿಯ ರಾಜಕಾರಣಿ, ವೀರಶೈವ-ಲಿಂಗಾಯತ ಸಮಾಜ ಕಟ್ಟಿ ಬೆಳೆಸಿದ ಧೀಮಂತ, ಲೋಕನಾಯಕ ಎಂದೇ ಖ್ಯಾತನಾಮರಾಗಿದ್ದ ರಾಜ್ಯ ರಾಜಕಾರಣದಲ್ಲಿ ಛಾಪು ಮೂಡಿಸಿದ್ದ ಅಧ್ಯಾಯವೊಂದು ಕೊನೆಗೊಂಡಂತಾಯಿತು.
ಪತ್ನಿ ಲಕ್ಷ್ಮಿಬಾಯಿ ಅವರ ಸಮಾಧಿಯ ಪಕ್ಕದಲ್ಲೇ ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆಯನ್ನು ವೀರಶೈವ-ಲಿಂಗಾಯತ ಸಂಪ್ರದಾಯದ ಪ್ರಕಾರ ನೆರವೇರಿಸಲಾಯಿತು. ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಅಂತಿಮ ಕೈಂಕರ್ಯಗಳು ಸಂಜೆ 6ಕ್ಕೆ ಪೂರ್ಣಗೊಂಡವು. ಬಂಧುಬಳಗ, ಅಭಿಮಾನಿಗಳು ಹಾಗೂ ಜಿಲ್ಲೆಯ ಅಪಾರ ಸಂಖ್ಯೆಯ ಬೆಂಬಲಿಗರ ಅಶ್ರುತರ್ಪಣದ ನಡುವೆ ಭೀಮಣ್ಣ ಅವರು ಭೂಮಿಯ ಒಡಲು ಸೇರಿದರು.

ಶುಕ್ರವಾರ(ಜ.16) ರಂದು ರಾತ್ರಿ ಭಾಲ್ಕಿ ತಮ್ಮ ನಿವಾಸದಲ್ಲಿಯೇ ನಿಧನರಾಗಿದ್ದ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರವನ್ನು ತಮ್ಮ ಮನೆಯ ಪಕ್ಕದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ಕೆಕೆಆರ್ಡಿಬಿ ಅಧ್ಯಕ್ಷ ಅಜಯ ಸಿಂಗ್, ಸೇರಿದಂತೆ ಶಾಸಕರು, ಮಾಜಿ ಸಚಿವರು, ಶಾಸಕರು, ವಿವಿಧ ಮಠಾಧೀಶರು, ಗಣ್ಯರು ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರದ ಪೂಜಾ ಕೈಂಕರ್ಯ ಮುಗಿಸಿ 3.20 ಗಂಟೆ ಅಲಂಕೃತ ವಾಹನದಲ್ಲಿ ಪ್ರಾರ್ಥಿವ ಶರೀರದ ಮೆರವಣಿಗೆ ಹೊರಟಿತು.
ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದ ಮನೆಯ ಪಕ್ಕದಲ್ಲಿ ಪಾರ್ಥಿವ ಶರೀರ ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದರು. ಮಧ್ಯಾಹ್ನ 12 ಗಂಟೆ ನಂತರ ಅಸಂಖ್ಯೆ ಜನರು ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆದರು. ಮನೆಯಿಂದ ಆರಂಭವಾದ ಅಂತಿಮಯಾತ್ರೆಯು ಚನ್ನಬಸವಾಶ್ರಮ, ಬಸವೇಶ್ವರ ವೃತ್ತ, ಗಾಂಧೀಜಿ ವೃತ್ತ, ಅಂಬೇಡ್ಕರ್ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಬಿಕೆಐಟಿ ಕಾಲೇಜು ಮಾರ್ಗವಾಗಿ ಚಿಕಲಚಂದ ರಸ್ತೆಯಲ್ಲಿರುವ ಶಾಂತಿಧಾಮಕ್ಕೆ ಅಂತಿಮ ಯಾತ್ರೆ ತೆರಳಿತು. ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಜನರು ದಾರಿಯೂದ್ದಕ್ಕೂ ಪುಷ್ಪನಮನ ಸಲ್ಲಿಸಿ ಭೀಮಣ್ಣ ಖಂಡ್ರೆ ಅವರಿಗೆ ಜೈಕಾರಗಳು ಮೊಳಗಿದವು. ಅಪಾರ ಸಂಖ್ಯೆಯಲ್ಲಿ ಸೇರಿದ ಜನಸ್ತೋಮ ಭೀಮಣ್ಣ ಖಂಡ್ರೆ ಅವರನ್ನು ಬೀಳ್ಕೊಟ್ಟರು.

ಅಂತಿಮಯಾತ್ರೆ ಶಾಂತಿಧಾಮ ತಲುಪುವ ಮುನ್ನವೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಲಕ್ಷ್ಮಿ ಹೆಬ್ಬಾಳಕರ್, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್, ರಹೀಂ ಖಾನ್, ಎಸ್.ಎಸ್.ಮಲ್ಲಿಕಾರ್ಜುನ ಸೇರಿದಂತೆ ಶಾಸಕರು, ಮಾಜಿ ಸಚಿವರು, ಗಣ್ಯರು ಆಗಮಿಸಿದ್ದರು. ಬಳಿಕ ಎಲ್ಲರೂ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು. ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸಿದಾಗ 10 ಜನರ ಪೊಲೀಸ್ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಈಶ್ವರ ಖಂಡ್ರೆ ಹಾಗೂ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಕೈವಲ್ಯದಿಂದ ಪಾರ್ಥಿವ ಶರೀರವನ್ನು ಕೆಳಗಿಳಿಸಿದ ಬಳಿಕ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ವಚನ ಪಠಿಸಿ, ಲಿಂಗಾಯತ ವಿಧಿವಿಧಾನ ಆರಂಭಿಸಿದರು. ಪುಷ್ಪ, ಬಿಲ್ವಪತ್ರೆಗಳನ್ನು ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ವಿಭೂತಿಯನ್ನು ಕೈಯಲ್ಲಿ ಹಿಡಿದಿದ್ದ ಕುಟುಂಬದ ಸದಸ್ಯರ ಕಣ್ಣಾಲಿಗಳಲ್ಲಿ ನೀರು ಜಿನುಗುತ್ತಿತ್ತು.
ಪುತ್ರರಾದ ಈಶ್ವರ ಖಂಡ್ರೆ, ಅಮರಕುಮಾರ ಖಂಡ್ರೆ ಹಾಗೂ ಸೊಸೆ ಗೀತಾ ಈಶ್ವರ ಖಂಡ್ರೆ ಮೊಮ್ಮಕ್ಕಳಾದ ಸಾಗರ ಖಂಡ್ರೆ, ಗುರುಪ್ರಸಾದ ಖಂಡ್ರೆ ಸೇರಿದಂತೆ ಪುತ್ರಿಯರು, ಕುಟುಂಬದವರು ವಿಧಿವಿಧಾನ ಪೂರೈಸಿದರು.

ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಇಳಕಲ್ಲ ಗುರುಮಹಾಂತ ಸ್ವಾಮೀಜಿ, ಚಿತ್ರದುರ್ಗದ ಮುರುಘಾ ಶ್ರೀ, ಬಸವಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಬಸವಧರ್ಮಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಹಾರಕೂಡ ಶ್ರೀ ಸೇರಿದಂತೆ ಹರಗುರು ಚರಮೂರ್ತಿಗಳು ಭಾಗಿಯಾಗಿದ್ದರು.
ಭೀಮಣ್ಣ ಖಂಡ್ರೆ ಬೆಳೆದು ಬಂದ ಹಾದಿ :
ಭೀಮಣ್ಣ ಖಂಡ್ರೆ ಅವರು ವೃತ್ತಿಯಲ್ಲಿ ವಕೀಲರಾಗಿ ಬಡಜನರಿಗೆ ರೈತರಿಗೆ ನ್ಯಾಯ ಕೊಡಿಸುವ ಮೂಲಕ ಜನನಾಯಕರಾಗಿ ಹೊರಹೊಮ್ಮಿ, 1953ರಲ್ಲಿ ಭಾಲ್ಕಿ ಪುರಸಭೆಯ ಪ್ರಥಮ ಚುನಾಯಿತ ಅಧ್ಯಕ್ಷರಾಗಿ ರಾಜಕೀಯ ಜೀವನಕ್ಕೆ ಪ್ರವೇಶಿಸಿದ್ದರು. 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಅವರು, 4 ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಎಂ.ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಭೀಮಣ್ಣ ಖಂಡ್ರೆ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ, ಕೇವಲ ಕೆಲವೇ ಸಾವಿರವಿದ್ದ ಆಜೀವ ಸದಸ್ಯರ ಸಂಖ್ಯೆ ಲಕ್ಷಕ್ಕೂ ಹೆಚ್ಚಾಗುವಂತೆ ಮಾಡಿದ್ದರು. ಬೆಂಗಳೂರಿನ ಹೃದಯ ಭಾಗವಾದ ಸದಾಶಿವನಗರದಲ್ಲಿ ಬೃಹತ್ ನಿವೇಶನ ಖರೀದಿಸಿ, ಭವ್ಯ ಭವನ ಕಟ್ಟಿ ಮಹಾಸಭಾ ಸ್ವತಂತ್ರವಾಗಿ ನಿಲ್ಲುವಂತೆ ಆರ್ಥಿಕ ಸದೃಢತೆ ತಂದುಕೊಟ್ಟರು.

ಶತಾಯುಷಿ ಲೋಕನಾಯಕ:
ಬಾಲ್ಯದಲ್ಲಿ ತೀವ್ರ ಅನಾರೋಗ್ಯಪೀಡಿತರಾದಾಗ ಮುಚಳಂಬದ ಸದ್ಗುರು ನಾಗಭೂಷಣ ಶಿವಯೋಗಿಗಳಿಂದ ಯೋಗ ಕಲಿತು ನಿತ್ಯ ಯೋಗ, ಪ್ರಾಣಾಯಾಮ ಹಾಗೂ ಇಷ್ಟಲಿಂಗ ಪೂಜೆ ಮಾಡುತ್ತಾ, ಶುದ್ಧ ಸಸ್ಯಾಹಾರವನ್ನಷ್ಟೇ ಸ್ವೀಕರಿಸುತ್ತಿರುವುದೇ ತಮ್ಮ ಶತಾಯುಷ್ಯದ ಗುಟ್ಟು ಎಂದು ಹೇಳುತ್ತಿದ್ದರು. ಭೀಮಣ್ಣಖಂಡ್ರೆ ಅವರು ಭಾಲ್ಕಿ ಹಿರೇಮಠದ ಲಿಂಗೈಕ್ಯೆ ಚನ್ನಬಸವ ಪಟ್ಟದ್ದೇವರ ಪರಮ ಭಕ್ತರಾಗಿದ್ದರು. ಭೀಮಣ್ಣ ಖಂಡ್ರೆ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ಪಟ್ಟದ್ದೇವರು ಭೀಮಣ್ಣ ಅವರಿಗೆ ʼಲೋಕನಾಯಕʼ ಎಂಬ ಬಿರುದು ನೀಡಿದ್ದರು.
ಗಣ್ಯರ, ಮಠಾಧೀಶರ ನುಡಿನಮನ :
‘ನಾಡಿನ ಏಳಿಗೆಗಾಗಿ ಶ್ರಮಿಸಿದ ಹಿರಿಯ ಚೇತನರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಭೀಮಣ್ಣ ಖಂಡ್ರೆ ಅವರು ನಮಗೆಲ್ಲರಿಗೂ ಸ್ಫೂರ್ತಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.

‘ಭೀಮಣ್ಣ ಖಂಡ್ರೆ ಅವರ ನಿಧನದಿಂದ ದಾರಿದೀಪವನ್ನು ಕಳೆದುಕೊಂಡಂತಾಗಿದೆ. ಅವರ ಹೋರಾಟಗಳು ಸ್ಮರಣೀಯ. ಭೀಮಣ್ಣ ಖಂಡ್ರೆ ಅವರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉತ್ತಮ ಒಡನಾಟವಿತ್ತು. ಒಂದು ಸಮಾಜಕ್ಕೆ ಸೀಮಿತವಾಗಿದ್ದವರಲ್ಲ. ಅವರು ಹಾಕಿರುವ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆʼ ಎಂದು ಸಚಿವ ಪ್ರಿಯಾಂಕ್ ಖರ್ಗೆ ನುಡಿದರು.
ʼಭೀಮಣ್ಣ ಖಂಡ್ರೆ ಅವರು ಸಮಾಜ ಸೇವೆ, ಮಾನವೀಯತೆ ಮತ್ತು ಮೌಲ್ಯಗಳ ಪ್ರತೀಕವಾಗಿದ್ದರು. ಅವರು ನೈತಿಕ ರಾಜಕಾರಣಿಯಾಗಿದ್ದರು. ಅವರ ರಾಜಕಾರಣ ಇಂದಿನ ಸಮಾಜಕ್ಕೆ ಮಾದರಿʼ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.
ʼಅಖಿಲ ಭಾರತ ವೀರಶೈವ ಮಹಾಸಭೆಯ ಮೂಲಕ ಸಮಾಜವನ್ನು ಕಟ್ಟಿದ ಭೀಮಣ್ಣ ಖಂಡ್ರೆ ಅವರ ಅಗಲಿಕೆಯಿಂದ ಸಮಾಜದ ದೊಡ್ಡ ಕೊಂಡಿ ಕಳಚಿದಂತಾಗಿದೆʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ʼಭೀಮಣ್ಣ ಖಂಡ್ರೆ ಅವರ ಶಿಸ್ತಿನ ಜೀವನ, ಆಹಾರ ಪದ್ಧತಿ ಕ್ರಮವೇ ಶತಾಯುಷಿಗಳಾಗಲು ಕಾರಣವೆಂಬುದು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಇಡೀ ಬದುಕು ಸಂಘರ್ಷಮಯವಾಗಿತ್ತು. ಎಂತಹದೇ ಕಠಿಣ ಪ್ರಸಂಗ ಬಂದರೂ ಜನಕಲ್ಯಾಣಕ್ಕಾಗಿ ಶ್ರಮಿಸಿದರುʼ ರಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ʼಕರ್ನಾಟಕ ಏಕೀಕರಣಕ್ಕೆ ಭೀಮಣ್ಣ ಖಂಡ್ರೆ ಅವರ ಪಾತ್ರ ಪ್ರಮುಖವಾದದ್ದು, ವೀರಶೈವ-ಲಿಂಗಾಯತ ಸಮಾಜಕ್ಕೆ ಅವರ ಕೊಡುಗೆ ಅಪಾರ. ನಮ್ಮ ತಂದೆಯೊಂದಿಗೆ ಅವರ ಒಡನಾಟ ಆತ್ಮೀಯವಾಗಿತ್ತು. ಭೀಮಣ್ಣ ಖಂಡ್ರೆಯವರ ಅಗಲಿಕೆ ಸಮಾಜಕ್ಕೆ ಹಾನಿ ಉಂಟು ಮಾಡಿದೆʼ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ʼಭೀಮಣ್ಣ ಖಂಡ್ರೆ ಅವರು ನಮ್ಮ ಸಮಾಜ, ಸಮುದಾಯಕ್ಕೆ ಒಂದು ದೊಡ್ಡ ಶಕ್ತಿ, ನಿಷ್ಠುರವಾದಿಗಳಾಗಿದ್ದರು. ಸಮಾಜದ ರಕ್ಷಣೆಗೆ ಸದಾ ಅವರು ಮುಂದೆ ನಿಲ್ಲುತ್ತಿದ್ದರು. ಅವರು ಸಮಾಜದ ಅಭ್ಯುದಯಕ್ಕಾಗಿ ಮಾಡಿರುವ ಕಾರ್ಯವನ್ನು ಯಾರೂ ಮರೆಯಲು ಸಾಧ್ಯವಿಲ್ಲʼ ಎಂದು ಬಾಳೆಹೊನ್ನೂರು ಶ್ರೀರಂಬಾಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ʼತಂದೆ ಭೀಮಣ್ಣ ಖಂಡ್ರೆಯವರು ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಸಮಾಜಕ್ಕೆ ದಾರಿ ತೋರಿದ ಮಾರ್ಗದರ್ಶಕರಾಗಿದ್ದರು. ಸರಳತೆ, ಮಾನವೀಯತೆ, ಸತ್ಯನಿಷ್ಠೆ ಹಾಗೂ ಸಮಾಜ ಸೇವೆಯೇ ಅವರ ಬದುಕಿನ ಉಸಿರಾಗಿತ್ತು. ಅವರ ಅಗಲಿಕೆಯ ನೋವು ನಮ್ಮ ಹೃದಯದಲ್ಲಿ ತುಂಬಲಾರದ ಖಾಲಿತನವನ್ನು ಉಂಟುಮಾಡಿದೆʼ ಎಂದು ಈಶ್ವರ ಖಂಡ್ರೆ ನುಡಿದರು.
ʼನಾನು ಭೀಮಣ್ಣ ಖಂಡ್ರೆ ಅವರ ಮೊಮ್ಮಗನಾಗಿ ಹುಟ್ಟಬೇಕಾದರೆ ನನ್ನ ಪುಣ್ಯ ಅಂತ ಅಂದುಕೊಂಡಿದ್ದೇನೆ. ಇಷ್ಟು ಚಿಕ್ಕವಯಸ್ಸಿನಲ್ಲಿ ಸಂಸದನಾಗಲು ನನಗೆ ನನ್ನ ʼಬಾಬಾʼ ಅವರ ಆಶೀರ್ವಾದವೇ ಕಾರಣ. ಹೊಂದಾಣಿಕೆ ರಾಜಕಾರಣ ಮಾಡದೆ ಸದಾ ಸಮಾಜ ಸೇವೆಯಲ್ಲೇ ಬದುಕು ಸವೆಸಿದರು. ನನಗೆ ನಮ್ಮ ʼಬಾಬಾʼ ಭೀಮಣ್ಣ ಖಂಡ್ರೆ ಅವರೇ ʼರೋಲ್ ಮಾಡೆಲ್ʼ ಎಂದು ಸಂಸದ ಸಾಗರ್ ಖಂಡ್ರೆ ನುಡಿದರು.
ಇದನ್ನೂ ಓದಿ : ಹುಟ್ಟು ಹೋರಾಟಗಾರ ಭೀಮಣ್ಣ ಖಂಡ್ರೆ ಬದುಕು ಯುವಜನರಿಗೆ ದಾರಿದೀಪ : ಸಿಎಂ ಸಿದ್ದರಾಮಯ್ಯ





