ಕಳೆದ ಎರಡು ದಿನಗಳಿಂದ ಬಾಗಲಕೋಟೆಯ ಬೀಳಗಿ ಸೇರಿದಂತೆ ಹಲವು ತಾಲೂಕು ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳು ಬಿದ್ದಿದ್ದು, ರೈತರು ಬೆಳೆದ ಬೆಳೆಗಳು ನಾಶವಾಗಿದ್ದು ವಿಮೆ ಕಟ್ಟದವರಿಗೆ ತಕ್ಷಣ ಪರಿಹಾರ ಒದಗಿಸಬೇಕು, ವಿಮೆ ಕಟ್ಟಿದವರಿಗೆ ವಿಮಾಕ್ಷೇಮ್ ಕೊಡಿಸಬೇಕು, ಹಳ್ಳ ಕೊಳ್ಳ ಕೆರೆಗಳಲ್ಲಿ ತುಂಬಿದ ಹೂಳು ತೆಗೆಸಬೇಕು, ಹಾನಿಗೆ ಪರಿಹಾರ ಒದಗಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಶೀಲ್ದಾರ್ಗೆ ಭಾರತೀಯ ಕಿಸಾನ್ ರೈತ ಸಂಘಟನೆ ಮನವಿ ಸಲ್ಲಿಸಿತು.
ಸಂಘಟನೆ ಜಿಲ್ಲಾಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ ಮಾತನಾಡಿ, “ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಅಧಿಕ ಪ್ರಮಾಣದ ನೀರು ನಿಂತ ಪರಿಣಾಮ ಬಾಗಲಕೋಟೆ ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ಬಿದ್ದಿದ್ದು ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ನಷ್ಟವಾಗಿವೆ. ರೈತರ ಜಮೀನುಗಳಲ್ಲಿ ಇರುವ ಬದು ಒಡ್ಡುಗಳು ಕೊಚ್ಚಿಕೊಂಡು ಹೋಗಿ ಎಲ್ಲ ಬೆಳೆಗಳು ನೀರು ಪಾಲಾಗಿದ್ದು, ರೈತರು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸಿದ್ದು, ಸರಕಾರದ ಪ್ರತಿನಿಧಿಗಳಾದ ತಾವು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ತಕ್ಷಣ ಸರ್ವೇ ಕಾರ್ಯ ಮಾಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು”
ಇದನ್ನೂ ಓದಿ: ಬಾಗಲಕೋಟೆ | ಭಾರೀ ಮಳೆಯಿಂದ ಈರುಳ್ಳಿ ಬೆಳೆನಾಶ; ಪರಿಹಾರಕ್ಕೆ ಕಿಸಾನ್ ಸಂಘ ಆಗ್ರಹ
“ಬೆಳೆ ವಿಮೆ ಕಟ್ಟಿದವರಿಗೆ ವಿಮಾ ಕ್ಷೇಮ್ ಕೊಡಿಸಬೇಕು. ಜಮೀನುಗಳಲ್ಲಿ ನೀರು ಕೊಚ್ಚಿ ಹೋಗುವುದರಿಂದ ಫಲವತ್ತಾದ ಮಣ್ಣಿನ ಜೊತೆ ಬೆಳೆಗಳು ಕೊಚ್ಚಿಕೊಂಡು ಹೋಗುತ್ತಿದ್ದು ತಕ್ಷಣ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸಹಯೋಗದಲ್ಲಿ ಕೇಂದ್ರ ಸರಕಾರದ ನರೇಗಾ ಯೋಜನೆಡಿಯಲ್ಲಿ ಹೂಳು ತೆಗೆಸುವ ಕಾರ್ಯವನ್ನು ಮಾಡಿದರೆ ಸಾರ್ವಜನಿಕರಿಗೆ ಹಾಗೂ ರೈತರಿಗೆ ಅನೂಕೂಲವಾಗುವುದು. ತಕ್ಷಣ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾಧಿಕಾರಿಗಳು, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಮುಂದಾಗಬೇಕೆಂದು” ಒತ್ತಾಯಿಸಿದರು.
ಈ ವೇಳೆ ಕಿರಣಕುಮಾರ ಕುಲಕರ್ಣಿ, ಹೊನ್ನಯ್ಯ ಹಿರೇಮಠ, ರವಿ ಕುಂಬಾರ, ಅಶೋಕ ಹಿರೇಮಠ, ಕೆ ಎಂ ಕುಂಬಾರ, ಕುಮಾರ ಮುತ್ತಲಗೆರಿ ಇದ್ದರು.





