ಬಾಗಲಕೋಟೆ ಜಿಲ್ಲೆಯ ಎಲ್ಲ ತಾಲೂಕಿನ ಎಪಿಎಮ್ಸಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆದು ಕೇಂದ್ರ ಸರಕಾರದ ರೂ.2400 ಗಳ ಬೆಂಬಲ ಬೆಲೆಯಡಿ ಕನಿಷ್ಠ 50 ಕ್ವಿಂಟಲ್ ಜೋಳ ಖರೀದಿಸಬೇಕು. ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ, ವಿಮೆ ಕ್ಲೇಮ್ಗಳನ್ನು ಶೀಘ್ರದಲ್ಲಿ ಕೊಡಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿ ತಹಶೀಲ್ದಾರ ವಿನೋದ ಹತ್ತಳ್ಳಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಭಾರತೀಯ ಕಿಸಾನ ಸಂಘದ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಯ್ಯ ಪ ಹಿರೇಮಠ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, “ಬಾಗಲಕೋಟೆ ಜಿಲ್ಲೆಯ ರೈತರು 85,000 ಹೆಕ್ಟೇರ್ ಜೋಳ ಬೆಳೆದಿದ್ದು, ಪ್ರತಿ ಕ್ವಿಂಟಲ್ಗೆ ಕೇವಲ 1,500 ರಿಂದ 1,800 ರೂಗಳಿಗೆ ಮಧ್ಯವರ್ತಿಗಳಿಗೆ ಮಾರಾಟ ಮಾಡಲಾತ್ತಿದೆ. ಇದರಿಂದ ಬಿತ್ತನೆಗೆ ಮಾಡಿದ ಖರ್ಚೂ ಬಾರದೆ ತೊಂದರೆ ಅನುಭವಿಸುತ್ತಿದ್ದಾರೆ. ಅಳಿದುಳಿದ ಮೆಕ್ಕೆಜೋಳವನ್ನು ಜಮಖಂಡಿ, ಬಾಗಲಕೋಟೆಗೆ ಹೋಗಿ, ಗುಣಮಟ್ಟವನ್ನು ಪರೀಕ್ಷಿಸಿ ಅಲ್ಲಿ ಪಾಸಾದರೆ ನಂತರ ಧಾರವಾಡಕ್ಕೆ ಹೋಗಿ ಮಾರಾಟ ಮಾಡಬೇಕು. ಅಲ್ಲಿಗೆ ಹೋಗಬೇಕಾದರೆ ಪ್ರತಿ ಕ್ವಿಂಟಲ್ ಗೆ 200 ರಿಂದ 300 ರೂಗಳ ಖರ್ಚಾಗುತ್ತದೆ. ಅದರಲ್ಲಿ ಪಾಸಾದರೆ 25 ಕ್ವಿಂಟಲ್ ಮೆಕ್ಕೆಜೋಳವನ್ನು ಕೆಎಂಎಫ್ ಪಶು ಆಹಾರ ಘಟಕದವರು ಖರೀದಿಸುತ್ತಾರೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬಾಗಲಕೋಟೆ | ರೈಲು ಸೇವೆ ವಿಸ್ತರಣೆಗೆ ಒತ್ತಾಯಿಸಿ ಪ್ರತಿಭಟನೆ
“ಕೆರೂರ್ ಪಿಕೆಪಿಎಸ್ ನಲ್ಲಿ 5 ಕ್ವಿಂಟಲ್ ಖರೀದಿಗೆ ಅವಕಾಶ ನೀಡಿದ್ದು, ಸರ್ಕಾರ ಅವೈಜ್ಞಾನಿಕ ಆದೇಶ ಹೊರಡಿಸಿದ್ದು, ಸರಿಯಾದುದ್ದಲ್ಲ. ತಕ್ಷಣ ಕೇಂದ್ರ ಸರ್ಕಾರದ ರೂ.2400 ಬೆಂಬಲ ಬೆಲೆ, ರಾಜ್ಯ ಸರ್ಕಾರದ ರೂ. 600 ಗಳನ್ನು ಹೆಚ್ಚಿಗೆ ನೀಡಿ ಒಟ್ಟು 3000 ರೂ ಕೊಟ್ಟು ಕನಿಷ್ಠ 50 ಕ್ವಿಂಟಲ್ ಖರೀದಿಸಬೇಕು. ಧಾರವಾಡ ಕೆಎಂಎಫ್ ಬದಲು ಆಯಾ ತಾಲೂಕು ಕೇಂದ್ರದ ಎಪಿಎಂಸಿಯಲ್ಲಿ ಖರೀದಿಸುವಂತೆ ಅದೇಶಿಸಬೇಕು” ಎಂದು ಒತ್ತಾಯಿಸಿದರು.





