ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ಗೆ ಬೆಂಗಳೂರಿನ ಸಿಸಿಹೆಚ್ 82ರ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಮತಗಳವು ಆರೋಪಕ್ಕೆ ಸಂಬಂಧಿಸಿದಂತೆ ಸುಭಾಷ್ ಗುತ್ತೇದಾರ್ ಮನೆ ಮೇಲೆ ಇತ್ತೀಚೆಗೆ ಎಸ್ಐಟಿ ದಾಳಿ ನಡೆಸಿದೆ. ಹಾಗೆಯೇ ಸಿಐಡಿ ನೋಟಿಸ್ ನೀಡಿದೆ. ಇದಾದ ಬೆನ್ನಲ್ಲೇ ಸುಭಾಷ್ ಗುತ್ತೇದಾರ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ಜಾಮೀನು ಲಭಿಸಿದ್ದು, ಮಾಜಿ ಶಾಸಕರು ಬಂಧನದ ಭೀತಿಯಿಂದ ಪಾರಾಗಿದ್ದಾರೆ.
ಇದನ್ನು ಓದಿದ್ದೀರಾ? ಮತಗಳವು ಆರೋಪ: ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆ ಮೇಲೆ ಎಸ್ಐಟಿ ದಾಳಿ
ಆಳಂದದಲ್ಲಿ ಸುಮಾರು ಆರು ಸಾವಿರ ಮತಗಳ ಡಿಲೀಟ್ ಯತ್ನ ನಡೆದಿದೆ ಎಂದು ಇತ್ತೀಚೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೂ ಆರೋಪಿಸಿದ್ದರು. ಈ ಸಂಬಂಧ ಕೆಲವು ಪುರಾವೆಗಳನ್ನೂ ಬಹಿರಂಗಪಡಿಸಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು.
ಇತ್ತೀಚೆಗೆ 100ಕ್ಕೂ ಹೆಚ್ಚು ಪೊಲೀಸರ ಜೊತೆ ಎಸ್ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಜತೆಗೆ ಸುಭಾಷ್ ಅವರ ಒಡೆತನದ ವೈನ್ ಶಾಪ್ ಸೇರಿದಂತೆ ಹಲವು ಕಡೆದ ದಾಳಿ ನಡೆದಿತ್ತು.
ಈ ನಡುವೆ ಅಮರ್ಜಾ ನದಿಯ ಹಿನ್ನೀರಿನಲ್ಲಿ ಅರ್ಧಂಬರ್ಧ ಸುಟ್ಟ ದಾಖಲೆ ಪತ್ತೆಯಾಗಿದ್ದವು. ಬೆಂಕಿ ಇಟ್ಟ ದಾಖಲೆಗಳು, ಬೂದಿಯನ್ನು ಇಲ್ಲಿ ತಂದು ಸುರಿದಿದ್ದು ಯಾರು ಎಂಬುದು ಗೊತ್ತಾಗಿರಲಿಲ್ಲ. ಗೂಡ್ಸ್ ವಾಹನದಲ್ಲಿ ಅರೆಸುಟ್ಟ ಕಾಗದಗಳನ್ನು ಸಾಗಿಸಿರುವುದಕ್ಕೆ ಸಾಕ್ಷಿ ಸಿಕ್ಕಿದ್ದು, ವಾಹನ ಜಪ್ತಿ ಮಾಡಲಾಗಿದೆ. ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.





