- ಸರಳ ಜೀವನ ನಡೆಸಿದ ನಾರಾಯಣ ಗುರುಗಳು ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು.
- ಕೇರಳದಲ್ಲಿ ದಲಿತೋದ್ಧಾರ ಚಳವಳಿಗಳನ್ನು ಕೈಗೊಂಡು ಸಾಮಾಜಿಕ ಸಮಾನತೆ ಎತ್ತಿ ತೋರಿದರು.
ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಿ ಸಮಾಜ ಸುಧಾರಣೆಗಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,”ಸರಳ ಜೀವನ ನಡೆಸಿದ ಅವರು ಸಮಾಜದ ಎಲ್ಲ ವರ್ಗಗಳ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಅವರ ತತ್ವಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು” ಎಂದು ನುಡಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ಟರ್ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಸಂದೇಶ ಕುರಿತು ಉಪನ್ಯಾಸ ನೀಡಿ, “ಬ್ರಹ್ಮಶ್ರೀ ಗುರುಗಳು ಸಮಾಜದಲ್ಲಿನ ಮೌಢ್ಯ, ಕಂದಾಚಾರ ಹೋಗಲಾಡಿಸಿ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರಾಗಿದ್ದರು. ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಶಿಕ್ಷಣಕ್ಕೆ ಮಹತ್ವ ಕೊಡುವುದು ಅವರ ಮುಖ್ಯ ಉದ್ದೇಶವಾಗಿತ್ತು. ಸಮಾಜದಲ್ಲಿರುವ ಅಸಮಾನತೆ, ಬಡವ ಶ್ರೀಮಂತರ ನಡುವಿನ ವ್ಯತ್ಯಾಸದ ಕುರಿತು ಯೋಚಿಸುತ್ತಿದ್ದರು. ಕಾಯಕಕ್ಕೆ ಮಹತ್ವ ಕೊಡಬೇಕು ಎಂದು ಸಾರಿದ ಇವರು ಬಾಲ್ಯದಲ್ಲಿ ಪಾಠಶಾಲೆಯಲ್ಲಿ ಪ್ರತಿಯೊಂದಕ್ಕೂ ಪ್ರಶ್ನೆ ಮಾಡುತ್ತಿದ್ದರು. ಅಗಾಧವಾದ ಮಂತ್ರ ಪಠಣ ಶಕ್ತಿ ಹೊಂದಿದ್ದರು. ಕೆಳವರ್ಗದ ಜನರಿಗೆ ಚಿಕಿತ್ಸೆ ನೀಡುತ್ತಿದ್ದರು. ಕೇರಳದಲ್ಲಿ ದಲಿತೋದ್ಧಾರ ಚಳವಳಿಗಳನ್ನು ಕೈಗೊಂಡು ಅನೇಕ ಆಶ್ರಮ, ಮಂದಿರಗಳನ್ನು, ಕಟ್ಟಿಸಿ ಸಮಾಜ ಸುಧಾರಣೆಯಲ್ಲಿ ತೊಡಗಿದರು. ಇವರ ತತ್ವಗಳು ಇಡೀ ಮನುಕುಲಕ್ಕೆ ಪ್ರಸ್ತುತವಾಗಿವೆ” ಎಂದರು.
ಕಾರ್ಯಕ್ರಮದಲ್ಲಿ ಪ್ರಕಾಶ ಬೊಮ್ಮನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ, ಆಂಜಪ್ಪ ಹುಲಕೋಟಿ, ಪರಶುರಾಮ ಈಳಗೇರ, ಫಕೀರಪ್ಪ ಈಳಗೇರ, ಶಂಕ್ರಪ್ಪ ಈಳಗೇರ, ಈಶಪ್ಪ ಈಳಗೇರ, ಶ್ರೀಮತಿ ಜಯಶ್ರೀ ಹೊಸಪೇಟಿ, ಹನಮಂತಪ್ಪ ಈಳಗೇರ, ಶಂಕರ್ ಹಾನಗಲ್, ಶಿವಮೂರ್ತೆಪ್ಪ ಈಳಗೇರ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು, ಹಿರಿಯರು ಹಾಜರಿದ್ದರು.





