ಪ್ರವಾಹ, ಅತಿವೃಷ್ಟಿಯಿಂದ ಬೆಳೆಹಾನಿಯಾಗಿದ್ದು, ಕಲಬುರಗಿ ಜಿಲ್ಲೆಯನ್ನು ಅತಿವೃಷ್ಟಿ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ, ಸಾಲ ಮನ್ನಾ ಸೇರಿದಂತೆ ಈ ಪ್ರದೇಶವನ್ನು ‘ಹಸಿ ಬರಗಾಲ’ ಎಂದು ಘೋಷಿಸಬೇಕೆಂದು ಆಗ್ರಹಿಸಿ ಅ.13ರಂದು ಕಲಬುರಗಿ ಬಂದ್ಗೆ ವಿವಿಧ ಸಂಘಟನೆಗಳಿಂದ ಕರೆ ನೀಡಲಾಗಿದೆ.
ನಗರದಲ್ಲಿ ಜಿಲ್ಲಾ ಪತ್ರಿಕಾ ಭವನದಲ್ಲಿ ರೈತ ಮುಖಂಡ ದಯಾನಂದ ಪಾಟೀಲ್ ಮಾತನಾಡಿ, ʼವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 13ರಂದು ಬಂದ್ಗೆ ಕರೆ ನೀಡಲಾಗಿದೆ. ಅಂದು ಕಲಬುರಗಿ ನಗರದ ಪ್ರಮುಖ ರಸ್ತೆಗಳಾದ ಆಳಂದ ಚೆಕ್ ಪೋಸ್ಟ್, ರಾಮಮಂದಿರ ಸರ್ಕಲ್, ಸೇಡಂ ಹಾಗೂ ಹುಮನಾಬಾದ ರಿಂಗ್ ರೋಡ್, ಹೀರಾಪುರ ಕ್ರಾಸ್, ಹೈಕೋರ್ಟ್ ರಸ್ತೆ ಹಾಗೂ ಶಹಾಬಾದ ರಿಂಗ್ ರೋಡ್ಗಳಲ್ಲಿ ಎತ್ತಿನಗಾಡಿ ಹಾಗೂ ಟ್ರಾಕ್ಟರ್ಗಳೊಂದಿಗೆ ರೈತರು ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದುʼ ಎಂದು ತಿಳಿಸಿದರು.
ʼರೈತ, ದಲಿತ, ಕನ್ನಡ ಪರ, ಮಹಿಳಾ ಪರ ಸಂಘಟನೆಗಳು, ಕೆಎಸ್ಆರ್ಟಿಸಿ ಸಾರಿಗೆ ಸಂಘ, ಬಿದಿ ಬದಿ ವ್ಯಾಪರಸ್ಥರು, ಅಡತ್ ಬಜಾರ್, ಲಾರಿ ಮಾಲೀಕರ ಸಂಘ, ಪೆಟ್ರೋಲ್ ಬಂಕ್, ಆಟೋ ಚಾಲಕರ ಸಂಘಗಳು ಬಂದ್ ಕರೆಗೆ ಸಂಪೂರ್ಣ ಬೆಂಬಲ ಎಂದು ರೈತ ಮುಖಂಡರು ಭೀಮಾಶಂಕರ ಮಾಡ್ಯಾಳ ಹಾಗೂ ಎ ಬಿ ಹೊಸಮನಿ ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, “‘ಹಸಿ ಬರಗಾಲ’ ಎಂದು ಘೋಷಿಸಿ, ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಹಿಂಗಾರು ಬೆಳೆ ಬಿತ್ತನೆಗೆ ಬೀಜ, ರಸಗೊಬ್ಬರ ಹಾಗೂ ಸಾಲಮನ್ನಾ ಮಾಡಬೇಕು, ರೈತರ ಮಕ್ಕಳ ಶಿಕ್ಷಣಕ್ಕಾಗಿ ಖಾಸಗಿ ಶಾಲಾ, ಕಾಲೇಜಿನ ಎರಡನೇ ಕಳತಿನ ಶುಲ್ಕ ಮನ್ನಾ ಮಾಡಬೇಕು” ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಉಮಾಪತಿ ಪಾಟೀಲ್, ಅರ್ಜುನ್ ಗೊಬ್ಬೂರು, ಜಗದೇವಿ ಹೆಗಡೆ, ರವಿ ದೇಗಾವ್, ಮಂಜುಳಾ ಭಜಂತ್ರಿ, ಮೊಬಿನ್ ಅಹ್ಮದ್, ನಾಗೇಂದ್ರಪ್ಪ ಥಂಬೆ, ಮಹೇಶ್ ಕಡೆಚೂರು, ಕರೆಪ್ಪಾ ಕರಗೊಂಡ, ಮಲ್ಲನಗೌಡ ಪಾಟೀಲ್ ಮತ್ತಿತರರಿದ್ದರು.





