ಮೈಸೂರಿನ ಸೆನೆಟ್ ಭವನದಲ್ಲಿ ಜಾಗೃತ ಕರ್ನಾಟಕ, ದಲಿತ ವಿದ್ಯಾರ್ಥಿ ಒಕ್ಕೂಟ, ಸಂಶೋಧಕರ ಸಂಘ ಹಾಗೂ ಬಿಸಿಎಂ ವಿದ್ಯಾರ್ಥಿಗಳ ಸಂಘ ಸಹಯೋಗದೊಂದಿಗೆ ನಡೆದ ‘ಕರ್ನಾಟಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2025: ಚಾರಿತ್ರಿಕ ಹಿನ್ನಲೆ, ಅನುಷ್ಠಾನದ ಸವಾಲುಗಳು ಮತ್ತು ನಮ್ಮ ಪಾತ್ರ’ ವಿಚಾರಗೋಷ್ಟಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ‘ಸಮಾನತೆ ಸಾಧಿಸಲು ತೊಡಕಾಗಿರುವುದು ಜಾತಿ ವ್ಯವಸ್ಥೆ’ ಎಂದು ಅಭಿಪ್ರಾಯಪಟ್ಟರು.
“ಸಮಾಜದಲ್ಲಿ ಅತಿ ಹೆಚ್ಚಿಗೆ ಶೋಷಣೆ ಮಾಡುವ ವ್ಯವಸ್ಥೆ ಎಂದರೆ ಅದುವೇ ಜಾತಿ ವ್ಯವಸ್ಥೆ. ಬಲವಾಗಿ ಬೇರೂರಿರುವ ಕ್ರೂರ ಜಾತಿಯತೆಯಿಂದಲೇ ಎಲ್ಲವೂ ನಿರ್ಧರಿತ. ಸಮಾಜದಲ್ಲಿ ಹಿಂದೆಯಿಂದ ಹಿಡಿದು ಇಂದಿನವರೆಗೂ ಸಮಾಜದಲ್ಲಿ ಬದಲಾಗದ ವ್ಯವಸ್ಥೆ ಎಂದರೆ ಅದು ಜಾತಿ. ಈ ಸಮಾಜದಲ್ಲಿ ಹುಟ್ಟಿದ ಯಾವುದೇ ವ್ಯಕ್ತಿಯಾಗಲಿ ಜಾತಿಯಿಂದ ನಲುಗುತ್ತಾನೆ. ಹಿಂದುಳಿಯಲು ಜಾತಿಯು ನೇರ ಕಾರಣ. ಸಮಾನತೆ ಸಾಧಿಸಲು ಜಾತಿ ತೊಡಕಾಗಿದೆ. ಬಹುಸಂಖ್ಯಾತರಿಗೆ ಶಿಕ್ಷಣ, ಭೂಮಿ, ಅಧಿಕಾರ ಎಲ್ಲಾದರಿಂದಲೂ ವಂಚನೆಯಾಗಿದೆ. ಇದನ್ನೇ ಲಾಭ ಮಾಡಿಕೊಂಡವರು ಅಧಿಕಾರ, ಆಸ್ತಿ ಅನುಭವಿಸುವಂತಾಗಿದೆ.”
“ಜಾತಿ ವ್ಯವಸ್ಥೆ ತೊಲಗಿಸಲು ಸಾಕಷ್ಟು ಮಹನೀಯರು ಪ್ರಯತ್ನ ಮಾಡಿದ್ದಾರೆ. ಆದರೇ, ಕ್ಷಣಿಕವಾಗಿ ಬದಲಾವಣೆ ಖಂಡಿದೆ ವಿನಃ, ಮತ್ತದೇ ದಾರಿಗೆ ಮರಳುವುದೇ ಆಗಿದೆ. ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಜಾತಿ ವ್ಯವಸ್ಥೆ ಮಾತ್ರ ಬದಲಾಗಲಿಲ್ಲ. ಯಾವುದೇ ಕ್ಷೇತ್ರ ತೆಗೆದುಕೊಳ್ಳಿ ಅಲ್ಪ ಸಂಖ್ಯೆಯ ಸಮುದಾಯ ಹಿಡಿತ ಹೊಂದಿದೆ. ಇದರಿಂದ ಬಹು ಸಂಖ್ಯೆಯ ಸಮುದಾಯಕ್ಕೆ ಅನ್ಯಾಯವಾಗುತ್ತಲೇ ಬಂದಿದೆ.”

“ಸಮಾಜದಲ್ಲಿ ಸುಧಾರಣೆ ಅತ್ಯಗತ್ಯ. ಧರ್ಮ ಸುಧಾರಣೆಯಿಂದ ಜಾತಿ ತೊಲಗಿಸಲು ಸಾಧ್ಯ. ಇಂತಹ ಸಾಧ್ಯತೆ ಸಮೀಕ್ಷೆಗಳಿಂದ ಆಗಬೇಕು. ಹಿಂದುಳಿದ ವರ್ಗದ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡಿದಾಗ ದತ್ತಾಂಶ ಆಧಾರಿತವಾಗಿ ಬಲ ನೀಡಲು ಸಾಧ್ಯ. ಘನ ನ್ಯಾಯಾಲಯವು ಸಹ ಯಾವ ಆಧಾರದಲ್ಲಿ ಮೀಸಲಾತಿ ನೀಡುತ್ತೀರಿ? ಎನ್ನುವ ಪ್ರಶ್ನೆಗೆ ಸಮೀಕ್ಷೆಯ ದತ್ತಾಂಶ ತೀರ ಅಗತ್ಯ, ಅದರ ಅನುಸಾರವೇ ಒಪ್ಪಿಗೆ. ಇದನ್ನೆಲ್ಲಾ ಗಮನಿಸಿ ನ್ಯಾಯಾಲಯದ ಆದೇಶದ ಅನ್ವಯ ಸಮೀಕ್ಷೆ ನಡೆಯುತ್ತಿದೆ.”
ಆದರೇ, ಇದಕ್ಕೆ ಪ್ರಬಲ ಸಮುದಾಯಗಳ ವಿರೋಧ ವ್ಯಕ್ತವಾಗುತ್ತಿದೆ. ವ್ಯಕ್ತವಾಗುವಂತೆ ಮಾಡುತ್ತಿದ್ದಾರೆ. ಅಲ್ಲದೇ, ಜನಪ್ರತಿನಿದಿಗಳು ಸಹ ಕೈಜೋಡಿಸಿ ಸುಳ್ಳು ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದುವರೆಗೆ ನಡೆದ ಸಮೀಕ್ಷೆಗಳು ಜಾರಿಯಾಗಲು ಬಿಟ್ಟಿಲ್ಲ. ಜಾರಿಯಾದರೆ ತಮ್ಮ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಎನ್ನುವುದನ್ನು ಅರಿತು ಅಂದಿನಿಂದ ಇಂದಿನವರೆಗೂ ತಡೆಯುವಂತಹ ಕೆಲಸ ಮಾಡಿಕೊಂಡೇ ಬಂದಿರುತ್ತಾರೆ.
“ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಮೂಲಾಧಾರ. ಸಮೀಕ್ಷೆಯಲ್ಲಿ ಧರ್ಮ ಒಡೆಯುವ, ಆರ್ಥಿಕ ಸ್ಥಿತಿಗತಿ ತಿಳಿಯುವ ವ್ಯವಸ್ಥೆಯಾಗಿದೆ ಎನ್ನುವ ಸುಳ್ಳು ಭಿತ್ತಿದ್ದಾರೆ. ಇಂತಹ ಕೆಲಸ ಖಂಡಿತ ಆಗುವುದಿಲ್ಲ. ಸಮೀಕ್ಷೆಯಿಂದ ಸರ್ಕಾರ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಸಮೀಕ್ಷೆ ತಡೆಗಟ್ಟಲು ನ್ಯಾಯಾಲಯದಲ್ಲಿ ತಡೆ ಕೋರಿದ್ದರು. ಆದರೇ, ಘನ ನ್ಯಾಯಾಲಯ ತಿರಸ್ಕರಿಸಿದೆ.”

ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲಿದೆ. ಇದರಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸಂಗ್ರಹ ಇರುವುದಿಲ್ಲ. ರಾಜ್ಯ ಸರ್ಕಾರ ಇದನ್ನೆಲ್ಲಾ ಒಳಗೊಂಡಂತೆ ಸಮೀಕ್ಷೆ ನಡೆಸುತ್ತಿದೆ. ಇದರಿಂದ, ಸರ್ಕಾರ ತನ್ನ ಕಾರ್ಯಕ್ರಮದ
ಅನುಷ್ಠಾನ ರೂಪಿಸಲು ಸಾಧ್ಯವಾಗುತ್ತದೆ. ಜಾತಿ ವ್ಯವಸ್ಥೆ ದುರುಪಯೋಗ ಮಾಡಿಕೊಂಡವರು ಈಗಲೂ ದೇಶದಲ್ಲಿ ಅಧಿಕಾರ ಹೊಂದಿದ್ದಾರೆ. ಅವರಿಗೆ ಸಮೀಕ್ಷೆ ನಡೆಯಬಾರದು ಎನ್ನುವುದೊಂದೇ ಉದ್ದೇಶ. ಕಾರಣ, ಅಧಿಕಾರ ಅವರಲ್ಲಿಯೇ ಉಳಿಯಬೇಕು.
ಕಾರ್ಯಕ್ರಮದ ಲೈವ್ ವೀಕ್ಷಿಸಲು https://www.youtube.com/live/BPvq42phJkI?si=eP3c-FraEs9IK-oi
ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಶಿಕ್ಷಣ, ಉದ್ಯೋಗ ಎಲ್ಲದಕ್ಕೂ ಅನುಕೂಲ ಆಗುವ ಸಮೀಕ್ಷೆ ಇದಾಗಿದ್ದು, ಎಲ್ಲಾ ಸಮುದಾಯ ಬೆಂಬಲಿಸಿ, ಒಳಗೊಳ್ಳಬೇಕು. ಇದರಿಂದ ಸಾಮಾಜಿಕ ನ್ಯಾಯದ ಅನುಷ್ಠಾನ ಸಾಧ್ಯ ಎಂದು ಹೇಳಿದರು.





