ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಕುರಬಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 10 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ(ಜುಲೈ 09) ಮಧ್ಯಾಹ್ನ ನಡೆದಿದೆ.
ಮನೋಜ್ ಕುಮಾರ್(10) ಮೃತ ವಿದ್ಯಾರ್ಥಿ. ಈತ ಶಾಲೆಯಲ್ಲಿ ಪಾಠ ಕೇಳುತಿದ್ದ ಸಮಯದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾನೆ. ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಈತನಿಗೆ ಹೃದಯ ಸಂಬಂಧಿ ಕಾಯಿಲೆ ಸಮಸ್ಯೆಯಿದ್ದು, ಮೈಸೂರಿನ ಜಯದೇವ ಹಾಗೂ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತಿದ್ದರು ಎನ್ನಲಾಗಿದೆ.
ಮೂಲತಃ ದೊಡ್ಡಹುಂಡಿ ಗ್ರಾಮದ ಲೇ.ನಾಗರಾಜು-ನಾಗರತ್ನ ದಂಪತಿಯ ಪುತ್ರ ಮನೋಜ್ ಕುಮಾರ್ ದೊಡ್ಡಹುಂಡಿಯಲ್ಲಿ ಒಂದು ಮತ್ತು ಎರಡನೇ ತರಗತಿ ವ್ಯಾಸಂಗ ಮಾಡಿ ಮೂರನೇ ತರಗತಿಗೆ ಪಟ್ಟಣದ ಕುರಬಗೇರಿ ಹಿರಿಯ ಪ್ರಾಥಮಿಕ ಶಾಲೆಗೆ ದಾಖಲಾಗಿದ್ದು, ಈ ವರ್ಷ ನಾಲ್ಕನೇ ತರಗತಿ ವ್ಯಾಸಂಗ ಮಾಡುತಿದ್ದನು. ಮೃತ ವಿದ್ಯಾರ್ಥಿ ತಾಯಿ ಕೂಲಿ ಕೆಲಸ ಮಾಡಿಕೊಂಡು ಮಗನನ್ನು ಓದಿಸುತ್ತ ಜೀವನ ನಡೆಸುತಿದ್ದರು.
ಇದನ್ನೂ ಓದಿದ್ದೀರಾ? ಚಾ.ನಗರ | ನೀರಿಗಾಗಿ ತಂದೆ-ತಾಯಿ ಪರದಾಟ: ಸಿಎಂಗೆ ಪತ್ರ ಬರೆದ ಬಾಲಕಿ; ಗ್ರಾಮಕ್ಕೆ ಅಧಿಕಾರಿಗಳು ದೌಡು
“ಮನೋಜ್ ಕುಮಾರ್ ನ ಹೃದಯದಲ್ಲಿ ರಂಧ್ರವಿತ್ತು, 7 ವರ್ಷದ ಬಳಿಕ ಯಾವುದೇ ಸಮಸ್ಯೆ ಆಗುವುದಿಲ್ಲವೆಂದು ವೈದ್ಯರು ತಿಳಿಸಿದ್ದರು. ಆದರೆ, ಇತ್ತೀಚೆಗೆ ತಪಾಸಣೆ ನಡೆಸಿದ ರಂಧ್ರ ದೊಡ್ಡಾಗಿರುವುದು ಕಂಡುಬಂದಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಮೊನ್ನೆಯೂ ನೋವು ಎನ್ನುತ್ತಿದ್ದ, ಇಂದು ಶಾಲೆಯಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾನೆ” ಎಂದು ಮೃತ ಮನೋಜ್ ಕುಮಾರ್ ಸಂಬಂಧಿಯೊಬ್ಬರು ಹೇಳಿಕೊಂಡಿದ್ದಾರೆ.





