ಚಾಮರಾಜನಗರ ಗ್ರಾಮಾಂತರ ತಾಲ್ಲೂಕು ಜ್ಯೋತಿಗೌಡನಪುರ ಗ್ರಾಮದಲ್ಲಿ ಬೌದ್ಧ ವಿಹಾರದ ಒಳ ಹೊಕ್ಕು ಬುದ್ಧರ ಪ್ರತಿಮೆ ಭಗ್ನಗೊಳಿಸಿ, ಅಂಬೇಡ್ಕರ್ ಫ್ಲೆಕ್ಸ್ ವಿರೂಪಗೊಳಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಬಿ.ಟಿ. ಕವಿತಾ ಅವರು ಪತ್ರಿಕಾಗೋಷ್ಠಿ ನಡೆಸಿ ಪ್ರಕರಣಕ್ಕೆ ಸಂಭಂಧಿಸಿದಂತೆ ಸದರಿ ಗ್ರಾಮದ ನಾಯಕ ಸಮುದಾಯದ ಮುನಿಸ್ವಾಮಿ ನಾಯಕ ಅವರ ಮಗ, ಮಂಜುನಾಥ (31) ಎಂಬುವನನ್ನು ಪೊಲೀಸರು ಬಂಧಿಸಿ, ಹೆಚ್ಚಿನ ತನಿಖೆಗೆ ಒಳಪಡಿಸಿರುವುದಾಗಿ ತಿಳಿಸಿದರು.
ಘಟನೆಗೆ ಕಾರಣ, ಕಳೆದ ಎರಡು ತಿಂಗಳ ಹಿಂದೆ ಅಂಗಡಿಯೊಂದರಲ್ಲಿ ಸಾಮಾನು ಖರೀದಿಸುವ ವೇಳೆ ನಾ ಮೊದಲು, ತಾನು ಮೊದಲು ಸಾಮಾನು ಖರೀದಿ ಮಾಡಬೇಕು ಎನ್ನುವ ವಿಚಾರಕ್ಕೆ ಗಲಾಟೆ ನಡೆದು, 60 ವರ್ಷ ವಯೋಮಾನದ ನಾಗಬಸಮ್ಮ ಎಂಬ ದಲಿತ ಮಹಿಳೆಯನ್ನು ಚಪ್ಪಲಿಯಲ್ಲಿ ಹೊಡೆದಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಸದರಿ ಗ್ರಾಮದಲ್ಲಿ ನ್ಯಾಯ ಪಂಚಾಯತಿ ನಡೆಸಿ 60 ಸಾವಿರ ದಂಡ ವಿಧಿಸಲಾಗಿತ್ತು.
ಅದರಂತೆ, ಅದೇ ದಿನ ₹30 ಸಾವಿರ ರೂಪಾಯಿಯನ್ನು ಅವರ ಬಾವ ಒಡವೆ ಒತ್ತೆಯಿಟ್ಟು ಕೊಟ್ಟಿರುತ್ತಾರೆ. ಬಳಿಕ ಬೈಕ್ ಮಾರಾಟ ಮಾಡಿ ₹30 ಸಾವಿರ ಬಾಕಿ ಹಣ, ಬಾವ ಅಡಮಾನ ಇರಿಸಿದ್ದ ಒಡವೆ ಬಿಡಿಸಲು ಕೊಟ್ಟಿರುವುದಾಗಿ ತಿಳಿದುಬಂದಿದೆ. ಇದೇ ವೈಷಮ್ಯದಿಂದ ಪಾನಮತ್ತನಾಗಿ ಮಧ್ಯರಾತ್ರಿ ಸಮಯದಲ್ಲಿ ಅಂಬೇಡ್ಕರ್ ಫ್ಲೆಕ್ಸ್ ವಿರೂಪಗೊಳಿಸಿ, ಬುದ್ಧರ ಪ್ರತಿಮೆ ಭಗ್ನಗೊಳಿಸಿರುವುದಾಗಿ ಸಾಕ್ಷಿಯಿಂದ ತಿಳಿದು ಬಂದಿರುವುದಾಗಿ ಹೇಳಿದರು.
ಈ ವ್ಯಕ್ತಿ ನಾಯಕ ಸಮುದಾಯಕ್ಕೆ ಸೇರಿದ್ದು, ಶಾಮಿಯಾನವೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಈ ಹಿಂದೆಯೂ ಬೇರೆ ಬೇರೆ ವಿಚಾರಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿರುತ್ತದೆ. ಸ್ವಭಾವದಲ್ಲಿ ಒರಟನಾಗಿದ್ದು, ಕುಡಿತದ ಸಂಧರ್ಭದಲ್ಲಿ ಏನು ಬೇಕಾದರು ಮಾಡಬಹುದಾದ ವ್ಯಕ್ತಿತ್ವ ಹೊಂದಿರುವವನು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ‘ಗ್ರೇಟರ್ ಮೈಸೂರು’ ನಗರದ ಘನತೆ, ಸಂಸ್ಕೃತಿ, ವಿಶಾಲತೆಗೆ ಧಕ್ಕೆಯಾಗಬಾರದು; ಸಿಎಂ ಸಿದ್ದರಾಮಯ್ಯ
ಘಟನೆ ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆದಿತ್ತು. ವ್ಯಾಪಕವಾಗಿ ಖಂಡಿಸಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು.





