ಚಾಮರಾಜನಗರ ತಾಲ್ಲೂಕಿನ ಹೊಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಹಿಳೆ ಬಿಸಿಯೂಟ ಸಿದ್ಧಪಡಿಸುತ್ತಾರೆ ಎನ್ನುವ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ದಲಿತ ಮಹಿಳೆ ಅಡುಗೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಶಾಲೆಯಿಂದ ವರ್ಗಾವಣೆ ಪತ್ರ ಪಡೆದು ಬೇರೊಂದು ಶಾಲೆಗೆ ಮಕ್ಕಳನ್ನು ಸೇರುಸುತ್ತಿದ್ದು, ಈಗ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಒಂದಕ್ಕೆ ಕುಸಿದಿದ್ದು ಶಾಲೆ ಮುಚ್ಚುವ ಹಂತಕ್ಕೆ ಬಂದು ನಿಂತಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮರ್ಪಕವಾಗಿ ನಡೆಯದ ಹಿನ್ನಲೆಯಲ್ಲಿ ಆಗಾಗ್ಗೆ ಪೋಷಕರು ಪ್ರತಿಭಟನೆ ಸಹ ಮಾಡಿದ್ದರು. 21 ವಿದ್ಯಾರ್ಥಿಗಳು ಇದ್ದ ಶಾಲೆಯಲ್ಲಿ 12 ಮಕ್ಕಳ ವರ್ಗಾವಣೆ ಪತ್ರ ಪಡೆದಿದ್ದಾರೆ. 5 ಮಕ್ಕಳು ವರ್ಗಾವಣೆ ಪತ್ರ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಇನ್ನ ಶಾಲೆಯಲ್ಲಿ ಉಳಿದಿರುವ ಮಕ್ಕಳು ಕೇವಲ ಓರ್ವ ಮಾತ್ರ.

ರೋಸ್ಟರ್ ಪದ್ಧತಿ ಅನುಸಾರ ದಲಿತ ಮಹಿಳೆಯನ್ನು ಅಡುಗೆ ಸಿಬ್ಬಂದಿಯಾಗಿ ನೇಮಕ ಮಾಡಲಾಗಿದೆ. ಇದರಿಂದಾಗಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ದಿಢೀರ್ ಕುಸಿತಗೊಂಡಿದ್ದು. ಪಕ್ಕದ ಆಲೂರು ಊರಿನ ಶಾಲೆಗೆ ತೆರಳುತ್ತಿರುವುದು ಕಂಡುಬಂದಿದೆ. ಇದಕ್ಕೆಲ್ಲ ಕಾರಣ ಅಡುಗೆ ಸಿಬ್ಬಂದಿ ದಲಿತ ಮಹಿಳೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಶಿಕ್ಷಕ ಚಿನ್ನಸ್ವಾಮಿ ಮಾತನಾಡಿ ” ಈ ಹಿಂದೆ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ ಎನ್ನುವ ಆರೋಪವಿತ್ತು. ಗ್ರಾಮಸ್ಥರು ದೂರು ಕೊಟ್ಟಿದ್ದರು. ನಂತರದಲ್ಲಿ ಇಬ್ಬರು ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಶಾಲೆಯಲ್ಲಿ ಮಕ್ಕಳಿರದ ಕಾರಣ ಇಬ್ಬರು ಅಡುಗೆ ಸಹಾಯಕಿಯರನ್ನು ಕೆಲಸದಿಂದ ತೆಗೆದುಹಾಕಿದ್ದರು. ಆದರೆ, ದಿಢೀರ್ ಅಂತೇಳಿ ಶಾಲೆಯ ಮಕ್ಕಳು ವರ್ಗಾವಣೆ ಪತ್ರ ಪಡೆದು ಹೋಗುತ್ತಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ ” ಎಂದಿದ್ದಾರೆ.

ದಲಿತ ಮಹಿಳೆ ಅಡುಗೆ ಸಿಬ್ಬಂದಿ ಎನ್ನುವ ಕಾರಣಕ್ಕೆ ಶಾಲೆಯ ಮಕ್ಕಳನ್ನು ಬೇರೆಡೆಗೆ ಪೋಷಕರು ಸೇರಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಸ್ಥಳಕ್ಕೆ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಸಂತೆಮರಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ತಾಜುದ್ದೀನ್ ಭೇಟಿ ನೀಡಿ ಪೋಷಕರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಅತ್ತೂರು ಕೊಲ್ಲಿ ಹಾಡಿಗೆ ಶಾಸಕ ಎ. ಎಸ್. ಪೊನ್ನಣ್ಣ ಭೇಟಿ; ಸರ್ಕಾರದೊಂದಿಗೆ ಚರ್ಚಿಸುವ ಭರವಸೆ
ಡಿಡಿಪಿಐ ರಾಮಚಂದ್ರ ರಾಜೆ ಅರಸ್ ಮಾತನಾಡಿ ‘ ಬಿಇಓ, ಬಿ ಆರ್ ಸಿ ಶಾಲೆಗೆ ಭೇಟಿ ನೀಡಿ ಪೋಷಕರು ಹಾಗೂ ಶಿಕ್ಷಕರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದ್ದಾರೆ.ನಾನು ಸಹ ಶಾಲೆಗೆ ಭೇಟಿ ಕೊಟ್ಟು ಮನವೊಲಿಸುವೆ ‘ ಎಂದಿದ್ದಾರೆ.





