ಚಾಮರಾಜನಗರದ ನಗರಸಭೆ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿಯಾದ ಶ್ರೀರೂಪ 2026-27ನೇ ಸಾಲಿನಲ್ಲಿ ₹1.87 ಕೋಟಿ ಉಳಿತಾಯ ಬಜೆಟ್ ಮಂಡಿಸಿದ್ದಾರೆ.
₹77.11 ಕೋಟಿ ರೂಪಾಯಿ ಬಜೆಟ್ ನಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಕುಡಿಯುವ ನೀರು, ಒಳಚರಂಡಿ, ಸ್ವಚ್ಛತೆ, ಉದ್ಯಾನವನ ನಿರ್ವಹಣೆಗೆ ₹75.23 ಕೋಟಿ ರೂಪಾಯಿ ವ್ಯಯಿಸಲಾಗಿದೆ.
ಸದರಿ ಸಾಲಿನಲ್ಲಿ ಆಸ್ತಿ ತೆರಿಗೆ, ದಂಡ ಪಾವತಿ, ಘನತ್ಯಾಜ್ಯ ನಿರ್ವಹಣೆ ಕರ, ನೀರಿನ ಶುಲ್ಕ, ಶುದ್ಧ ಕುಡಿಯುವ ನೀರಿನ ಘಟಕ, ಅಂಗಡಿ-ಮಳಿಗೆ ಬಾಡಿಗೆ, ತರಕಾರಿ ಮಾರುಕಟ್ಟೆ ಶುಲ್ಕ, ಉದ್ದಿಮೆ ಪರವಾನಗಿ, ಅಭಿವೃದ್ಧಿ ಮೇಲ್ವಿಚಾರಣಾ ಶುಲ್ಕ, ರಸ್ತೆ ಅಗೆತ ಶುಲ್ಕ, ಕಟ್ಟಡ ಪರವಾನಗಿ, ಮಾರುಕಟ್ಟೆ ಶುಲ್ಕ, ಉದ್ದಿಮೆ ಪರವಾನಗಿ ಶುಲ್ಕ, ಸಾರ್ವಜನಿಕ ಶೌಚಾಲಯ ಬಾಡಿಗೆ, ಒಳಚರಂಡಿ ಸಂಪರ್ಕ ಶುಲ್ಕ, ಮುದ್ರಾಂಕ ಶುಲ್ಕ, ಬ್ಯಾಂಕ್ ಬಡ್ಡಿ, ಠೇವಣಿ ಮೇಲಿನ ಬಡ್ಡಿ, ಅಕ್ರಮ ನೀರಿನ ಸಂಪರ್ಕ ದಂಡ ವಸೂಲಿ, ಖಾತೆ ಶುಲ್ಕ, ಖಾತೆ ಬದಲಾವಣೆ ಶುಲ್ಕ, ಜಾಹೀರಾತು ತೆರಿಗೆ, ಗುತ್ತಿಗೆದಾರರ ಭದ್ರತಾ ಠೇವಣಿ, ಶೌಚಾಲಯಗಳ ಹರಾಜು, ಅಂಗಡಿ ಮುಂಗಡ ಠೇವಣಿ ಹಣ ಸೇರಿದಂತೆ ಇನ್ನಿತರೇ ಮೂಲಗಳಿಂದ ₹21.17 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.
16ನೇ ಹಣಕಾಸು ಆಯೋಗದ ಅನುದಾನ, ವೇತನ ಅನುದಾನ, ಮುಕ್ತನಿಧಿ, ಎಸ್ ಎಫ್ ಸಿ ವಿಶೇಷ ಅನುದಾನ, ಎಸ್ಸಿಎಸ್ಪಿ-ಟಿಎಸ್ಪಿ, ಬೀದಿ ದೀಪ, ನೀರು ಸರಬರಾಜು, ವಿದ್ಯುತ್ ಅನುದಾನ, ಕುಡಿಯುವ ನೀರು, ಗೃಹ ಭಾಗ್ಯ ಯೋಜನೆ ಅನುದಾನ, ಸ್ವಚ್ಛ ಕಲಿಕಾ ಕೇಂದ್ರ, ಸ್ವಚ್ಛ ಭಾರತ್ ಅಭಿಯಾನ ಅನುದಾನ, ಇಂದಿರಾ ಕ್ಯಾಂಟೀನ್ ನಿರ್ವಹಣೆ, ವಿದ್ಯುತ್ ಚಿತಗಾರ ನಿರ್ಮಾಣ, ಡೇ ನಲ್ಮ್ ಅನುದಾನ, ಜನಗಣತಿ ಅನುದಾನ ಸೇರಿ ₹37.78 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, “ಚಾಮರಾಜನಗರಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ ಮಾಲಂಗಿ ಯೋಜನೆ ಅನುಷ್ಠಾನವಾಗಲಿದ್ದು, ಜನರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಯಾಗಬೇಕು. ಮಳೆಗಾಲಕ್ಕೂ ಮುನ್ನ ಕೆರೆಗಳ ಹೂಳು ತೆಗಿಸಬೇಕು. ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆಯಿದ್ದು, ಭರ್ತಿ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ನಗರದಲ್ಲಿ ಕಸ ಸಂಗ್ರಹಣೆ-ವಿಲೇವಾರಿ ಕುರಿತಾಗಿ ಸಾರ್ವಜನಿಕರಿಂದ ದೂರುಗಳಿದ್ದು, ಸರಿ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಿದೆ. ಕುಡಿಯುವ ನೀರಿಗೆ ಕೇವಲ ₹10 ಲಕ್ಷ ಇರಿಸಿರುವುದು ಯಾವುದಕ್ಕೂ ಸಾಲಲ್ಲ, ಇದನ್ನ ಹೆಚ್ಚಿಸಿ ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕೆ ಆರ್ ಪೇಟೆ | ಗವಿಮಠ ವಸತಿ ಶಾಲೆಗೆ ಸೇರಿದ ಆಹಾರ ದಾಸ್ತಾನು ರೈಸ್ ಮಿಲ್ ನಲ್ಲಿ ಪತ್ತೆ; ದೂರು ನೀಡಿದ ರೈತಸಂಘ
ಸಭೆಯಲ್ಲಿ ಯೋಜನಾ ನಿರ್ದೇಶಕ ವೆಂಕಟೇಶ್, ಪೌರಾಯುಕ್ತ ಪರಶುರಾಮ ಛಲವಾದಿ ಸೇರಿದಂತೆ ಅಧಿಕಾರಿಗಳು ಇದ್ದರು.





