ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಆವರಣದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ 90ನೇ ಜನ್ಮದಿನದ ಅಂಗವಾಗಿ ‘ಸ್ವಾಭಿಮಾನದೆಡೆಗೆ ಹಸಿರು ಸೇನಾನಿಗಳ ಕಾಲ್ನಡಿಗೆ ಹಾಗೂ ರೈತ ಸಮಾವೇಶ’ದಲ್ಲಿ ಮಾತನಾಡಿದ, ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್, ‘ರಾಸುಗಳಿಗೆ ಬಾರುಕೋಲು ಚಡಿ ಏಟು ನೀಡಿ ದಾರಿ ತಪ್ಪದಂತೆ ಎಚ್ಚರಿಸುವ ಹಾಗೆಯೇ, ಸರ್ಕಾರಗಳು ದಾರಿ ತಪ್ಪಿದಾಗ ಬಾರುಕೋಲು ಚಡಿ ಏಟು ಕೊಟ್ಟು ಸರಿ ದಾರಿಗೆ ತರುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆಳುವ ಸರ್ಕಾರಗಳ ರೈತ ವಿರೋಧಿ ನಿಲುವುಗಳು ರೈತರ ಬದುಕಿನ ಮೇಲೆ ಗದಪ್ರಹಾರ ನಡೆಸಿದೆ. ಇದೇ ರೀತಿ ಮುಂದುವರೆದರೆ ಸಂಘರ್ಷದ ದಿನಗಳು ಎದುರಾಗುವ ಸಾಧ್ಯತೆಯಿದ್ದು ಈಗಲೇ ರೈತ ಸಮುದಾಯ ಸಂಘಟಿತರಾಗಿ ಚಳವಳಿಗೆ ಸಿದ್ದವಾಗುವಂತೆ ಕರೆ ನೀಡಿದರು. ಅಮೆರಿಕ-ಭಾರತ ನಡುವಿನ ವ್ಯಾಪಾರ ಒಪ್ಪಂದ ದೇಶದ ಕೃಷಿ ಕ್ಷೇತ್ರಕ್ಕೆ ಮಾರಕವಾಗಲಿದೆ. ಅನ್ನದಾತರ ಆತ್ಮಹತ್ಯೆ ನಿಲ್ಲಬೇಕು. ಅಭಿವೃದ್ದಿ ಹೆಸರಿನಲ್ಲಿ ರೈತರ ಅನುಮತಿಯಿರದೆ ಭೂ ಸ್ವಾಧೀನ ಪಡೆಸಿಕೊಳ್ಳುವುದನ್ನು ನಿಲ್ಲಿಸಿ, ಡಾ. ಸ್ವಾಮಿನಾಥನ್ ವರದಿಯಂತೆ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು. ಕೇಂದ್ರ ಸರ್ಕಾರ
ತರಮಾಡುತ್ತಿರುವ ವಿದ್ಯುಚ್ಚಕ್ತಿ ಮಸೂದೆ-2025, ಸ್ಮಾರ್ಟ್ ಮೀಟರ್ ಯೋಜನೆ, ಬೀಜ ಮಸೂದೆ-2025ನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಎಪಿಎಂಸಿ ಮುಂಭಾಗದಿಂದ ಆರಂಭವಾದ ಜಾಥಾ ಸುಲ್ತಾನ್ ಶೇರ್ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೆಮರಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಬಿ ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ತೆರಳಿ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆ ನಾಗರಹೊಳೆ-ಬಂಡೀಪುರದಲ್ಲಿ : ಹಿಂದಿರುವ ಹುನ್ನಾರವೇನು?

ಸಮಾವೇಶದಲ್ಲಿ ನಟ ಅಶೋಕ್, ಯದುವೀರ್ ಸಿಂಗ್, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಪ್ರೊ. ರವಿವರ್ಮ ಕುಮಾರ್, ಯಶವಂತ್, ಹೊನ್ನೂರು ಪ್ರಕಾಶ್, ಕೆ.ಟಿ. ಗಂಗಾಧರ್, ಗ್ಯಾರೆಂಟಿ ರಾಮಣ್ಣ, ಅನಸೂಯಮ್ಮ, ರಾಮಣ್ಣ ಕೆಂಚಲೆರ, ಮಂಜು ಕಿರಣ್, ಮಲ್ಲಿಕಾರ್ಜುನ, ನಿವೃತ್ತ ಪೊಲೀಸ್ ಅಧಿಕಾರಿ ಆರ್ಕೆಶ್ ಇದ್ದರು.
ಈ ಸುದ್ದಿ ಓದಿದ್ದೀರಾ? ‘ಸ್ವಚ್ಛ ಮೈಸೂರು’ ಜಾಗೃತಿಗಾಗಿ ಬೃಹತ್ ಸೈಕಲ್ ಜಾಥಾ






