ದೇಶದ ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಬೆಂಬಲಿಸಬೇಕು ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ರಾಮಚಂದ್ರ ಮನವಿ ಮಾಡಿದರು.
ಚಾಮರಾಜನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ನಮ್ಮ ಸಂಘಟನೆಯು ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದಿದೆ. ದೇಶದಲ್ಲಿ ಜನರ ಅಭಿವೃದ್ಧಿಗಳನ್ನು ಸರ್ಕಾರ ಮಾಡಬೇಕೇ ವಿನಃ, ಸರ್ಕಾರವೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವುದು ಸರಿಯಲ್ಲ. ಭಾರತದಲ್ಲಿ ಈಗ ಕೋಮುವಾದವನ್ನು ಬಿತ್ತಿ ದ್ವೇಷದ ಫಸಲು ಪಡೆಯುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದೆ” ಎಂದು ದೂರಿದರು.
“ದೇಶದ ಸಂವಿಧಾನದ ಆಶಯಗಳನ್ನು ಹಾಳುಗೆಡಗುವ ಯತ್ನಗಳೂ ನಡೆಯುತ್ತಿವೆ. ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಿದೆ. ಇಎಸ್ಡಬ್ಲ್ಯೂ ಮೀಸಲಾತಿಯನ್ನು ಏಕಾಏಕಿ ಜಾರಿಗೆ ತಂದೆ ವಾಸ್ತವ ಮೀಸಲಾತಿ ವ್ಯವಸ್ಥೆಯನ್ನು ಬದಲಾಯಿಸಲು ಯತ್ನಿಸಲಾಗುತ್ತಿದೆ. ಕೇಂದ್ರದಲ್ಲಿ ಜನ, ರೈತ, ಕಾರ್ಮಿಕ, ಮಹಿಳಾ ವಿರೋಧಿ, ಕೋಮುವಾದಿ ಧರ್ಮಾಂಧ ಸರ್ಕಾರವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಜಾತ್ಯತೀತ, ಸಂವಿಧಾನದ ಆಶಯಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸುವಂತಹ ಸರ್ಕಾರ ನಮಗೆ ಬೇಕು. ಸದ್ಯ ಕಾಂಗ್ರೆಸ್ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ” ಎಂದು ರಾಮಚಂದ್ರ ಹೇಳಿದರು.
ವೇದಿಕೆಯ ಮೈಸೂರು ವಿಭಾಗದ ಸಂಚಾಲಕಿ ಲೀಲಾ ಸಂಪಿಗೆ ಮಾತನಾಡಿ, “ವೇದಿಕೆಯು ಸಂವಿಧಾನ ರಕ್ಷಿಸಿ, ಭಾರತ ಉಳಿಸಿ ಎಂಬ ಅಭಿಯಾನ ನಡೆಸುತ್ತಿದೆ. ದೇಶದಲ್ಲಿ ಮನು ಸಂವಿಧಾನ ಜಾರಿಗೆ ತರುವ ಹುನ್ನಾರ ನಡೆಯುತ್ತಿದೆ. ಇದು ಜಾರಿಯಾದರೆ ಮೊದಲಿಗೆ ಮಹಿಳೆ ಬಲಿ ಪಶುವಾಗುತ್ತಾಳೆ. ಆಕೆಯನ್ನು ಎರಡನೇ ದರ್ಜೆಯ ನಾಗರಿಕಳಂತೆ ನೋಡಲಾಗುತ್ತದೆ. ಇದೇ ಸರ್ಕಾರ ಬಂದರೆ, ದುರ್ದಿನಗಳು ಕಾದಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಮತದಾರರಿಗೆ ಉಚಿತ ಆಹಾರ ನೀಡಲು ಹೋಟೆಲ್ಗಳಿಗೆ ಹೈಕೋರ್ಟ್ ಅನುಮತಿ
“ಲಿಂಗಸಮಾನತೆಯ ಆಶಯ ಸಾಧಿಸಬೇಕಾದರೆ, ದೇಶದಲ್ಲಿ ಮಹಿಳಾ ವಿರೋಧಿ, ಕೋಮುವಾದಿ, ಮನುವಾದಿಗಳನ್ನು ಸೋಲಿಸಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳ ಪರವಾಗಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು” ಎಂದರು.
ವೇದಿಕೆಯ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ, ಜಿಲ್ಲಾ ಮಹಿಳಾ ಸಂಚಾಲಕಿ ಶಾಂತಕುಮಾರಿ, ಪದಾಧಿಕಾರಿಗಳಾದ ಆರ್ ಸೋಮಣ್ಣ, ಸುನಿಲ್ ಜಲಂಧರ್, ಮಹೇಶ್ ಇದ್ದರು.





