27 ತಿಂಗಳಿನಿಂದ ವಾತನ ಪಾವತಿ ಮಾಡಿಲ್ಲವೆಂದು ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಪಿಡಿಒ ವಿರುದ್ಧ ಆರೋಪ ಮಾಡಿ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮ ಪಂಚಾಯತಿಯ ನೀರುಗಂಟಿ ಚಿಕ್ಕುಸ ನಾಯಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪ್ರಕರಣದಲ್ಲಿ ಪಂಚಾಯತಿಯ ಪಡಿಒ ರಾಮೇಗೌಡ ಕೆ.ಎನ್ ಅವರನ್ನು ಅಮಾನತು ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒಮೋನಾ ರೋತ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಹೊಂಗನೂರು ಗ್ರಾಮ ಪಂಚಾಯತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಚಿಕ್ಕೂಸ ನಾಯಕ ಅವರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಂಚಾಯತಿ ಕಟ್ಟಡದ ಕಿಟಕಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡೆತ್ ನೋಟ್ನಲ್ಲಿ, “ನಾನು ಹಲವು ವರ್ಷಗಳಿಂದ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದೇನೆ. ಕೆಲಸಕ್ಕೆ ತಕ್ಕಂತೆ ವೇತನ ಕೊಡುತ್ತಿಲ್ಲ. ವೇತನ ಪಾವತಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಒ ವಿಳಂಬ ಮಾಡುತ್ತಲೇ ಬಂದಿದ್ದಾರೆ. ನನಗೆ 27 ತಿಂಗಳುಗಳಿಂದ ವೇತನ ನೀಡಲಾಗಿಲ್ಲ” ಎಂದು ಆರೋಪಿಸಿದ್ದಾರೆ.
“ನಾನು ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ, ಕೆಲಸ ತೊರೆಯಲು ನಿರ್ಧರಿಸಿದ್ದೆ. ಆದ್ದರಿಂದ, ನನಗೆ ಪಾವತಿ ಮಾಡಬೇಕಿದ್ದ 27 ತಿಂಗಳ ವೇತನವನ್ನು ನೀಡುವಂತೆ ಪಿಡಿಒ ಅವರನ್ನು ಕೇಳಿಕೊಂಡಿದ್ದೆ. ಆದರೆ, ಅವರು ನನ್ನ ಮನವಿ ಸ್ಪಂದಿಸಲಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯತಿ ಸಿಇಒಗೆ ಪತ್ರ ಬರೆದರೂ ಯಾವುದೇ ಉಪಯೋಗವಾಗಿಲಿಲ್ಲ” ಎಂದು ಡೆತ್ ನೋಟ್ನಲ್ಲಿ ಆರೋಪಿಸಿದ್ದಾರೆ.
ಚಿಕ್ಕುಸ ನಾಯಕ ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಆರೋಪಿಗಳ ವಿರುದ್ಧ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಮತ್ತು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ಡೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು, ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993 ರ ಸೆಕ್ಷನ್ 111ರ ಅಡಿಯಲ್ಲಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವಲ್ಲಿ ಪಿಡಿಒ ರಾಮೇಗೌಡ ಕೆ.ಎನ್ ವಿಫಲರಾಗಿದ್ದಾರೆ ಎಂದು ಕಂಡುಬಂದಿದ್ದು, ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಆದೇಶದಲ್ಲಿ ಹೇಳಿದ್ದಾರೆ.




