ಚಾಮರಾಜನಗರದ ಕಾಡಂಚಿನ ಹಾಡಿ ಜನರು ಮೂಲಭೂತ ಸೌಕರ್ಯಗಳಿಂದ ಚಂಚಿತರಾಗಿದ್ದು, ಪ್ರತೀ ದಿನ ಪರದಾಡುವಂತಾಗಿದೆ. ಆಧಾರ್, ರೇಷನ್ ಕಾರ್ಡ್, ಒಟರ್ ಐಡಿ ಇಲ್ಲದೆ ಮೂಲ ಸೌಕರ್ಯಗಳು ಸಿಗದೆ ವಂಚಿತರಾಗಿದ್ದಾರೆ. ದಾಖಲೆಗಳನ್ನು ಒದಗಿಸಿಕೊಡುವಂತೆ ಸರ್ಕಾರಕ್ಕೆ ಇಲ್ಲಿನ ಜನರು ಮನವಿ ಮಾಡಿದ್ದಾರೆ.
ಸೋಲಿಗರು, ಜೇನು ಕುರುಬರು, ಬೆಟ್ಟ ಕುರುಬರು ಹಾಗೂ ಇತರೆ ಸಮುದಾಯಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. 5ಸಾವಿರಕ್ಕೂ ಹೆಚ್ಚು ಜನರು ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪಡೆದಿಲ್ಲ, ಸಾವಿರಕ್ಕೂ ಹೆಚ್ಚು ಕುಟುಂಬಗಳು ರೇಷನ್ ಕಾರ್ಡ್ನಿಂದ ವಂಚಿತವಾಗಿವೆ.
ಆರೋಗ್ಯ, ಅನ್ನಭಾಗ್ಯ, ಸರ್ಕಾರದ ಗ್ಯಾರಂಟಿ ಯೋಜನೆಗೂ ಕೂಡ ಅರ್ಹತೆ ಸಿಕ್ಕಿಲ್ಲ. ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ ಸೇರಿ ಗ್ಯಾರಂಟಿ ಯೋಜನೆಗಳು ನಮಗೆ ಸಿಗುತ್ತಿಲ್ಲ ಎಂದು ಹಾಡಿಯ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 158 ಹಾಡಿಗಳಲ್ಲಿ ಈಗಾಗಲೇ 138 ಹಾಡಿಯಲ್ಲಿ ಸಮೀಕ್ಷೆ ಮಾಡಿದೆ. ಶಿಬಿರ ಆಯೋಜಿಸಿ ರೇಷನ್, ಆಧಾರ್ ಕಾರ್ಡ್ ಮಾಡಿಕೊಡಲು ಅಧಿಕಾರಿಗಳು ಚಿಂತನೆ ನಡೆಸಿರುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.




