ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಕೆಲವು ಪ್ರದೇಶಗಳಲ್ಲಿ ಅಸ್ಪೃಶ್ಯತೆಯ ಘಟನೆಗಳು ಬೆಳಕಿಗೆ ಬರುತ್ತಿವೆ. ಪರಿಶಿಷ್ಟ ಜಾತಿಗಳಿಗೆ ಸೇರಿದ ಸಮೀಕ್ಷಕರು ಜಾತಿ ತಾರತಮ್ಯಕ್ಕೆ ಒಳಗಾಗುತ್ತಿದ್ದು, ಇದು ಸಮಾಜದಲ್ಲಿ ಇನ್ನೂ ಉಳಿದಿರುವ ಕರಾಳತೆಯನ್ನು ತೋರಿಸುತ್ತದೆ.
ಚಾಮರಾಜನಗರ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸುತ್ತಿರುವ ಸಮೀಕ್ಷಕರಿಗೆ ಜಾತಿ ಕೇಳಿ ಮನೆಯೊಳಗೆ ಬಿಡದೆ ಇರುವ ಘಟನೆಗಳು ನಡೆದಿವೆ. ಪರಿಶಿಷ್ಟ ಜಾತಿಯ ಒಬ್ಬ ಶಿಕ್ಷಕಿ ಹೇಳುವಂತೆ, “ತಾಲ್ಲೂಕಿನಲ್ಲಿ ಮೇಲ್ವರ್ಗದವರ ಮನೆಗೆ ತೆರಳಿ ಸಮೀಕ್ಷೆಗೆ ಪೂರಕ ಮಾಹಿತಿ ಸಂಗ್ರಹಿಸಿದೆ. ಮನೆಯೊಳಗೆ ನೆಟ್ವರ್ಕ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಹೊರಗೆ ಬಂದು ಆ್ಯಪ್ನಲ್ಲಿ ಮಾಹಿತಿ ದಾಖಲಿಸಿ ಮತ್ತೆ ಮನೆಯೊಳಗೆ ಹೋದಾಗ ನಾವು ಕುಳಿತಿದ್ದ ಕುರ್ಚಿಗಳನ್ನು ನೀರಿನಿಂದ ತೊಳೆಯುತ್ತಿದ್ದ ದೃಶ್ಯ ಕಂಡು ಬೇಸರವಾಯಿತು.”
ಮತ್ತೊಬ್ಬ ಸಮೀಕ್ಷಕರು ಅಳಲು ತೋಡಿಕೊಂಡಂತೆ, “ಸಮೀಕ್ಷೆ ವೇಳೆ ಕೆಲವರು ಯಾವ ಜಾತಿ ಎಂದು ಕೇಳುತ್ತಾರೆ, ಪರಿಶಿಷ್ಟರೆಂದು ತಿಳಿದ ಕೂಡಲೇ ಜಗುಲಿಯಲ್ಲಿ ಕೂರಲು ಹೇಳುತ್ತಾರೆ. ಸಮೀಕ್ಷೆ ಮುಗಿದ ಬಳಿಕ ಜಗುಲಿ ಶುಚಿಗೊಳಿಸುತ್ತಾರೆ. ಇಂತಹ ಕಹಿ ಘಟನೆಗಳು ನೋವುಂಟು ಮಾಡುತ್ತಿವೆ. ಅಸ್ಪೃಶ್ಯತೆ ಎಂಬ ಕರಾಳತೆ ಇಂದಿಗೂ ಕೆಲವೆಡೆ ಜೀವಂತವಾಗಿದೆ.”
ಇದಕ್ಕೆ ಪ್ರತಿಕ್ರಿಯಿಸಿದ ಯಳಂದೂರು ತಹಶೀಲ್ದಾರ್ ಎಸ್.ಎಲ್.ನಯನ, “ತಾಲ್ಲೂಕಿನಲ್ಲಿ ಸಮೀಕ್ಷೆ ಭರದಿಂದ ನಡೆದಿದೆ. ಹೊಂದಾಣಿಕೆಯಾಗದ 437 ಯುಜಿಐಡಿ ಸಂಖ್ಯೆಗಳ ಪರಿಶೀಲನೆ ನಂತರ ಪೂರ್ಣಗೊಳ್ಳಲಿದೆ. ಸಮೀಕ್ಷಕರ ಜಾತಿಯ ಕಾರಣದಿಂದ ಯಾರೂ ಮಾಹಿತಿ ನೀಡಲು ನಿರಾಕರಿಸಿಲ್ಲ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆರ್ಎಸ್ಎಸ್ಗೆ ನೂರು, ನ್ಯಾಯಮೂರ್ತಿಗಳ ಮೇಲೆ ಶೂ ತೂರು
ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 19ರವರೆಗೆ ವಿಸ್ತರಿಸಿದ್ದಾರೆ. ಸೆಪ್ಟೆಂಬರ್ 22ರಿಂದ ಆರಂಭವಾಗಿ ಅಕ್ಟೋಬರ್ 7ರೊಳಗೆ ಮುಗಿಯಬೇಕಿದ್ದ ಸಮೀಕ್ಷೆಯನ್ನು ಬೆಂಗಳೂರು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ವಿಳಂಬವಾದ ಕಾರಣ ವಿಸ್ತರಿಸಲಾಗಿದೆ.
ಸಮೀಕ್ಷೆ ಕಾರ್ಯಕ್ಕೆ ಸಹಾಯ ಮಾಡಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯವನ್ನು ಬದಲಾಯಿಸಲಾಗಿದೆ. ಅಕ್ಟೋಬರ್ 8 ರಿಂದ 24ರವರೆಗೆ ಶಾಲೆಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ಕೆಲವು ಜಿಲ್ಲೆಗಳಲ್ಲಿ ಸಂಪೂರ್ಣ ರಜೆಯನ್ನೂ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಸಮೀಕ್ಷೆಗೆ ಮಿಶ್ರ ಪ್ರತಿಕ್ರಿಯೆಗಳು ಕಂಡುಬಂದಿವೆ. ಕೆಲವು ಪ್ರದೇಶಗಳಲ್ಲಿ ಉತ್ಸಾಹದಿಂದ ಸಹಕರಿಸುತ್ತಿದ್ದರೆ, ಇನ್ನು ಕೆಲವುಡೆ ಬಾಗಿಲನ್ನೇ ತೆರೆಯುವುದಿಲ್ಲ ಎನ್ನಲಾಗುತ್ತಿದೆ.
ಈ ಸಮೀಕ್ಷೆಯ ಮೂಲಕ ಕರ್ನಾಟಕದಲ್ಲಿ ಜಾತಿ ಆಧಾರಿತ ಆರ್ಥಿಕ-ಸಾಮಾಜಿಕ ಸ್ಥಿತಿಯನ್ನು ಅಧ್ಯಯನ ಮಾಡಿ, ಮೀಸಲಾತಿ ಮತ್ತು ಕಲ್ಯಾಣ ಯೋಜನೆಗಳನ್ನು ಸುಧಾರಿಸುವ ಗುರಿ ಹೊಂದಲಾಗಿದೆ. ಆದರೆ ಅಸ್ಪೃಶ್ಯತೆಯಂತಹ ಘಟನೆಗಳು ಸಮಾಜದಲ್ಲಿ ಬದಲಾವಣೆಯ ಅಗತ್ಯವನ್ನು ಒತ್ತಿ ಹೇಳುತ್ತಿವೆ.





