ದಕ್ಷಿಣ ಕರ್ನಾಟಕದ ತಳಭಾಗದಲ್ಲಿರುವ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ಹೊಂಡರಬಾಳು ಸಮೀಪದಲ್ಲಿರುವ ‘ಅಮೃತಭೂಮಿ’ ನೈಸರ್ಗಿಕ ಕೃಷಿ ಮತ್ತು ಪರ್ಯಾಯ ಚಿಂತನೆಗಳ ಜೀವಂತ ತಾಣವಾಗಿದೆ.
ಸಾಮೂಹಿಕ ಚಳವಳಿಯ ಮೂಲಕ ರೈತ ಸಮುದಾಯಕ್ಕೆ ಸ್ವಾಭಿಮಾನದ ಧ್ವನಿ ತುಂಬಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಕನಸಿನ ಯೋಜನೆಯಾದ ಈ ತಾಣವು ಸುಮಾರು 80 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿನ ನೈಸರ್ಗಿಕ ಕೃಷಿ ಪದ್ಧತಿ, ಸಾಂಪ್ರದಾಯಿಕ ತಂತ್ರಜ್ಞಾನಗಳ ಅನುಭವಾಧಾರಿತ ಸಂಶೋಧನೆ ಮತ್ತು ಸ್ವಾವಲಂಬಿ ಬದುಕಿನ ಮಾದರಿ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ.
ಅಮೃತಭೂಮಿಯಲ್ಲಿ ಸಾವಯವ ಕೃಷಿ, ದೇಶಿ ಬೀಜ ಸಂರಕ್ಷಣೆ, ವಿವಿಧ ತಳಿಯ ಹಣ್ಣ,ತರಕಾರಿ, ಗಿಡ-ಮರ-ಬಳ್ಳಿಗಳ ಸಮೃದ್ಧ ಸಂಗ್ರಹವಿದೆ. ನಂಜುಂಡಸ್ವಾಮಿ ಅವರ ಮಗಳು ಚುಕ್ಕಿ ನಂಜುಂಡಸ್ವಾಮಿ ಅವರು ತಂದೆಯ ಕನಸಿಗೆ ನೀರೆರೆಯಲು ನೇತ್ರತ್ವ ವಹಿಸಿ ಮುನ್ನಡೆಸುತ್ತಿದ್ದಾರೆ. ವಿಷಮುಕ್ತ ಆಹಾರಕ್ಕಾಗಿ ಸಾಮಾಜಿಕ ಕಳಕಳಿಯುಳ್ಳ ಸ್ವಯಂ ಸೇವಕರ ಪಡೆಯೊಂದು ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಗೆ ಭೇಟಿ ನೀಡುವ ವಿದ್ಯಾರ್ಥಿಗಳು, ರೈತರು ಮತ್ತು ಸಂಶೋಧಕರಿಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ.

2026ರ ಹೊಸ ವರ್ಷದ ಹೊಸ್ತಿನಲ್ಲಿ ನಮ್ಮ ʼಈದಿನʼ ತಂಡಕ್ಕೆ ಆಯೋಜಿಸಿದ ಮೂರು ದಿನಗಳ ಮಾಧ್ಯಮ ತರಬೇತಿಗೆ ʼಅಮೃತಭೂಮಿʼ ಆಸರೆಯಾಯಿತು. ಮೂರು ದಿನಗಳ ಎರಡ್ಹೊತ್ತು ಊಟಕ್ಕೆ ಅಮೃತಭೂಮಿ ಪ್ರಕೃತಿ ಮಡಿಲಲ್ಲೇ ಬೆಳೆದ ವಿಷಮುಕ್ತ ತರಕಾರಿ, ಹಣ್ಣುಗಳ ಸವಿರುಚಿ ಅನುಭವಿಸುವ ಅವಕಾಶವೂ ದೊರೆಯಿತು.
ಬಿಳಿಗಿರಿರಂಗನ ಬೆಟ್ಟಗಳ ತಪ್ಪಲಿನಲ್ಲಿರುವ ಅಮೃತಭೂಮಿ ಸುತ್ತಮುತ್ತಲೂ ಕಾಡುಹಂದಿ, ಚಿರತೆ, ಹುಲಿಗಳ ಸಂಚಾರ ಸಹಜ. ಇಲ್ಲಿನ ಪ್ರತಿಯೊಂದು ಗಿಡ-ಮರ, ಬೆಳೆ ತೋಟಗಳ ರಕ್ಷಣೆಗೆ ರೈತರು ಸೋಲಾರ್ ತಂತಿ ಬೇಲಿ ಹಾಕಿರುವುದು ಇಲ್ಲಿ ಪ್ರಕೃತಿ ಮತ್ತು ಕೃಷಿ ನಡುವೆ ಇರುವ ನಾಜೂಕಿನ ಸಮತೋಲನವನ್ನು ತೋರಿಸುತ್ತದೆ.
ʼನಮ್ದುʼ ಬ್ರ್ಯಾಂಡ್ ಉತ್ಪನ್ನ :
ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ಆಶಯದಂತೆ ರೈತರ ಸ್ವಾವಲಂಬನೆ ಮತ್ತು ನೈಸರ್ಗಿಕ ಕೃಷಿಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಪ್ರಯತ್ನ ಅಷ್ಟೇ ಅಲ್ಲದೆ ವಿಷಮುಕ್ತ ಆಹಾರಗಳ ಬ್ರ್ಯಾಂಡ್ ‘ನಮ್ದು’ ಎಂಬ ಹೆಸರಿನಲ್ಲಿದೆ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಮತ್ತು ನ್ಯಾಯಯುತ ಬೆಲೆ ದೊರಕಿಸಿಕೊಡುವ ಜೊತೆಗೆ ಮಧ್ಯವರ್ತಿಗಳಿಲ್ಲದೆ ನೇರ ಮಾರಾಟ ವ್ಯವಸ್ಥೆ ಕಲ್ಪಿಸಿ ರೈತರಿಗೆ ನ್ಯಾಯಸಮ್ಮತ ಬೆಲೆ ಹಾಗೂ ಗ್ರಾಹಕರಿಗೆ ಆರೋಗ್ಯಕರ ಆಹಾರ ಒದಗಿಸುವುದು ʼನಮ್ದುʼ ಬ್ರ್ಯಾಂಡ್ನ ಪ್ರಮುಖ ಉದ್ದೇಶವಾಗಿದೆ.
ಅಮೃತಭೂಮಿ ಮಹಿಳಾ ಸಂಘದವರು ಕೃಷಿ ಉತ್ಪನ್ನಗಳ ಸಂಗ್ರಹ, ಸಂಸ್ಕರಣೆ ಮತ್ತು ಪ್ಯಾಕಿಂಗ್ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ದೇಶಿ ಧಾನ್ಯ, ಬೀಜ, ತಿಂಡಿ-ತಿನಿಸುಗಳನ್ನು ತಯಾರಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸುವ ಮಹಿಳೆಯರ ತಂಡ ಸಕ್ರಿಯವಾಗಿದೆ. ಇದು ರೈತ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಸಂಕೇತವಾಗಿದೆ.

ಎತ್ತರದ ಬೆಟ್ಟ-ಗುಡ್ಡಗಳ ಒಡಲಲ್ಲಿರುವ ಅಮೃತಭೂಮಿ ಎಂಬ ಪ್ರಕೃತಿಪರ ಕಾಳಜಿಯನ್ನು ಪನರ್ ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆ ತಿಳಿಯಲು, ತಾಣದ ಹಸಿರು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ವಿದ್ಯಾರ್ಥಿಗಳು, ಕೃಷಿಕರು, ಸಂಶೋಧಕರು ಭೇಟಿ ನೀಡುತ್ತಾರೆ. ನಮ್ಮ ತಂಡದ ತರಬೇತಿಯ ಕೊನೆಯ ದಿನದಂದ ನೇಪಾಳದ ಕೃಷಿಕರ ತಂಡವೊಂದು ಭೇಟಿ ನೀಡಿತು. ನಮ್ಮೊಂದಿಗೆ ಅವರ ದೇಶದ ಕೃಷಿ ಪದ್ಧತಿಯ ಸವಾಲು-ಸಾಧ್ಯತೆಗಳ ಅನುಭವ ಹಂಚಿಕೊಂಡದ್ದು ಅತ್ಯಂತ ಸಂತೋಷ ನೀಡಿತು.
ರಾಜ್ಯದ ಕಿರೀಟಪ್ರಾಯ ಜಿಲ್ಲೆ ಬೀದರದಿಂದ ಚಾಮರಾಜ ನಗರದವರೆಗೆ ಸುಮಾರು 1,000ಕ್ಕೂ ಅಧಿಕ ಕಿ.ಮೀ. ಕ್ರಮಿಸಬೇಕು. ಬೀದರ್ದಿಂದ ಮೈಸೂರ-ಚಾಮರಾಜನಗರ ಕಡೆಗೆ ನೇರವಾಗಿ ತೆರಳಲು ಯಾವುದೇ ಬಸ್-ರೈಲಿನ ವ್ಯವಸ್ಥೆ ಇಲ್ಲದಕ್ಕೆ ನಾನು ರೈಲಿನ ಮೂಲಕ ಬೆಂಗಳೂರು, ಮೈಸೂರು ತಲುಪಿ, ಅಲ್ಲಿಂದ ಸಾರಿಗೆ ಬಸ್ ಮೂಲಕ ಚಾಮರಾಜನಗರ ಹೋದೆ. ಅಲ್ಲಿಂದ ಮತ್ತೆ ಮೂರು ಗಾಲಿಯ ಆಟೋ ಹತ್ತಿ ʼಅಮೃತಭೂಮಿʼ ಪ್ರವೇಶಿಸುವ ಹೊತ್ತಿಗೆ ಸುಮಾರ 24 ಗಂಟೆಗಳ ಕಾಲ ಬೇಕಾಯಿತು. ಉತ್ತರದಿಂದ ದಕ್ಷಿಣದವರೆಗೆ ಸಂಪರ್ಕ ವ್ಯವಸ್ಥೆಯ ಕೊರತೆಯಿಂದ ಜನರ ಪ್ರಯಾಣ ಸಂಕಟ ನೆನಪಿಸುತ್ತದೆ.
ಹೀಗೆ ಹೋಗುವ ಮಾರ್ಗ :
ಬೆಂಗಳೂರಿನಿಂದ ತೆರಳುವವರು ಮೈಸೂರು ಬಂದು ಅಲ್ಲಿಂದ ಚಾಮರಾಜನಗರ ಹೋಗಬೇಕು. ಅಲ್ಲಿಂದ ಸುಮಾರು 12 ಕಿ.ಮೀ.ದೂರದಲ್ಲಿರುವ ಅಮೃತಭೂಮಿಗೆ ತಲುಪಬೇಕಾದರೆ ಚಂದಕವಾಡಿ, ನಾಗವಳ್ಳಿ, ನಲ್ಲೂರು ಮಾರ್ಗವಾಗಿ ಸಾರಿಗೆ ಬಸ್ ಅಥವಾ ಆಟೋ ಮೂಲಕ ತಲುಪಬಹುದು.

ಅಮೃತಭೂಮಿ ಕೇವಲ ಕೃಷಿ ತಾಣವಲ್ಲ; ಅದು ಪರ್ಯಾಯ ಬದುಕಿನ, ಸ್ವಾವಲಂಬನೆಯ ಮತ್ತು ಪ್ರಕೃತಿಯೊಂದಿಗಿನ ಸಂವಾದದ ಚಿಂತನಾ ಕೇಂದ್ರ. ಇಲ್ಲಿನ ಶುದ್ಧಗಾಳಿ, ಸಮೃದ್ಧ ಹಸಿರು, ಪ್ರಶಾಂತ ವಾತಾವರಣ, ಹಕ್ಕಿಗಳ ಕಲರವ, ವೈವಿಧ್ಯಮಯ ಹೂವು-ಹಣ್ಣು, ತೆಂಗು-ಅಡಕೆ ಸೇರಿದಂತೆ ವಿವಿಧ ಗಿಡ-ಮರಗಳ ಸಾಲು…..ಆಹಾ ನಿಜಕ್ಕೂ ಮನಮೋಹಕ.
ಆಧುನಿಕ ತಂತ್ರಜ್ಞಾನಕ್ಕೆ ತಲೆಬಾಗಿ ಒತ್ತಡದ ಬದುಕು ನಡೆಸುತ್ತಿರುವ ಮನುಷ್ಯನಿಗೆ ನಿಜವಾಗಿ ಬೇಕಾಗಿರುವುದು ಏನು ಎಂಬ ಪ್ರಶ್ನೆಗೆ ಖಂಡಿತವಾಗಿ ಇಲ್ಲಿಗೆ ಭೇಟಿ ನೀಡಿದರೆ ಉತ್ತರ ಸಿಗುವುದು ಪಕ್ಕಾ!. ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಲು ಇಲ್ಲಿನ ಪ್ರಶಾಂತ ವಾತಾವರಣ ಹೇಳಿ ಮಾಡಿಸಿದಂತಿದೆ. ವಾಕಿಂಗ್ ಅಂತ ತೆರಳಿದ ನಮ್ಮ ತಂಡದವರು ಬಗೆಬಗೆಯ ಹಣ್ಣು ಕೀಳಿ ತಿಂದರು. ಎಳೆ ಬಿಸಿಲಿಗೆ ಮೈಯೊಡ್ಡಿದ ಯುವಕರು ಮರ ಹತ್ತಿ ʼಎಳೆನೀರುʼ ಸವಿದರು.
ಅಮೃತಭೂಮಿ ಏಕೆ?
ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳು ಪ್ರಕೃತಿಯ ಮೇಲೆ ಉಂಟು ಮಾಡಿರುವ ವ್ಯತಿರಿಕ್ತ ಪರಿಣಾಮಗಳ ಪುನರ್ಮೌಲ್ಯ ನಿರ್ಣಯ ಹಾಗೂ ನೂರಾರು ವರ್ಷಗಳಿಂದ ರೂಢಿಯಲ್ಲಿದ್ದು, ಕಾಲದ ಪರೀಕ್ಷೆಯಲ್ಲಿ ಗೆದ್ದು ಬಂದಿರುವ ಸಾಂಪ್ರದಾಯಿಕ ತಂತ್ರಜ್ಞಾನಗಳ ಲಾಭಗಳ ಕುರಿತು ಸಂಶೋಧನೆ ನಡೆಸುವುದು ಅಮೃತಭೂಮಿ ಯೋಜನೆಯ ಉದ್ದೇಶವಾಗಿದೆ.
ಅಮೃತ ಭೂಮಿ’ಯು ಬಹುರಾಷ್ಟ್ರೀಯ ಸಂಸ್ಥೆಗಳ ಈ ಎಲ್ಲ ವಿನಾಶಕಾರಿ ನಡೆಗಳಿಗೆ ಪ್ರತಿಯಾಗಿ ಪರ್ಯಾಯ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಈ ನಿಟ್ಟಿನಲ್ಲಿ ಅದು ಕೃಷಿಯಲ್ಲಿ ಸಾಂಪ್ರದಾಯಿಕ ತಂತ್ರಜ್ಞಾನಗಳ ಬಳಕೆ, ಔಷಧಿಗಳು ಮತ್ತು ಆರೋಗ್ಯ, ಜೀವವೈವಿಧ್ಯ ಹಾಗೂ ಪಶು ಔಷಧಗಳನ್ನು ಪ್ರಾಥಮಿಕ ಹಂತದಲ್ಲಿ ಪರಿಚಯಿಸುತ್ತಿದೆ. ಬೀಜ, ಮಳೆ ನೀರು, ಗೊಬ್ಬರ, ಕೀಟಗಳು, ಶಕ್ತಿ ಮತ್ತು ಜೀವರಾಶಿಯೇ ಮೊದಲಾದ ಸಂಪನ್ಮೂಲಗಳ ಮರುಬಳಕೆ, ಸಂರಕ್ಷಣೆ ಹಾಗೂ ಜನಪ್ರಿಯಗೊಳಿಸುವುದು ಅದರ ಮುಖ್ಯ ಕಾರ್ಯಸೂಚಿಯಾಗಿದೆ.

ಪ್ರಾಯೋಗಿಕ ಅನ್ವಯದ ಜೊತೆಯಲ್ಲಿ ‘ಅಮೃತ ಭೂಮಿ’ಯು ‘ಹಸಿರು ಶಾಲೆʼ (ಗ್ರೀನ್ ಸ್ಕೂಲ್)ನಲ್ಲಿ ಬೋಧಿಸಬಲ್ಲ ಸ್ವಯಂಸೇವಕರ ಪಡೆಯೊಂದನ್ನು ರೂಪಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ಈ ಹಸಿರು ಶಾಲೆಗಳಿಗಾಗಿ ಸಮರ್ಪಣಾಭಾವದ ಸ್ವಯಂಸೇವಕರನ್ನು ತರಬೇತುಗೊಳಿಸುವ ಯೋಚನೆಯಾಗಿದೆ.
‘ಅಮೃತಭೂಮಿ’ ಯೋಜನೆಯು ಮುಖ್ಯವಾಗಿ ಪ್ರಕೃತಿ ಆರಾಧನೆಯಲ್ಲಿ ಮರಳಿ ತೊಡಗುವಂತೆ ಪ್ರೇರೇಪಿಸುವ ಯೋಜನೆಯಲ್ಲದೆ ಮತ್ತೇನೂ ಅಲ್ಲ. ನಾವು ಸೂರ್ಯ, ಚಂದ್ರ, ನಕ್ಷತ್ರಗಳು, ನೀರು, ಗಾಳಿ – ಇವೆಲ್ಲವುಗಳೊಂದಿಗೆ ಜೀವಿಸುತ್ತಿದ್ದೇವೆ. ನಮ್ಮ ಜೀವಿತವನ್ನು ಸಾಧ್ಯವಾಗಿಸಿರುವ ಈ ಪ್ರಕೃತಿಗೆ ಪ್ರತಿಯಾಗಿ ನಮ್ಮ ಗೌರವ, ನಮ್ಮ ಪೂಜೆ ಸಲ್ಲಬೇಕಾಗಿದೆ. ಅದನ್ನು ಸಂರಕ್ಷಿಸಬೇಕಾಗಿದೆ.
ʼಅಮೃತಭೂಮಿ ಏಕೆ ಅಗತ್ಯ? ಎಂಬ ಪ್ರಶ್ನೆಗೆ ʼಕೃಷಿಯನ್ನು ಕೇವಲ ಉತ್ಪಾದನೆಯಾಗಿ ಅಲ್ಲ, ಬದುಕಿನ ಸಂಸ್ಕೃತಿಯಾಗಿ ನೋಡಬೇಕೆಂಬ ಸಂದೇಶ ʼಅಮೃತಭೂಯಿʼ ಯೋಜನೆಯದಾಗಿದೆ.

ಪಠ್ಯದಲ್ಲಿ ನಂಜುಂಡಸ್ವಾಮಿ ಜೀವನ ಚರಿತ್ರೆ ಅಳವಡಿಸಿ :
ಅಂತರಾಷ್ಟ್ರೀಯ ಮಟ್ಟದಲ್ಲಿ ರೈತರಿಗೆ ಅರಿವು ಮತ್ತು ಆತ್ಮಗೌರವ ತಂದುಕೊಟ್ಟ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ರೈತಪರ ಹೋರಾಟಗಳು ಹಾಗೂ ಕೃಷಿಯ ಬಗ್ಗೆ ಇದ್ದಂತಹ ಕಾಳಜಿಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕೆಂದು ಈಚೆಗೆ ರೈತ ಮುಖಂಡರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ರೈತರಿಗೆ ಸ್ವಾಭಿಮಾನಿ ಧೀಕ್ಷೆ ನೀಡಿದ ಹಸಿರು ಸೇನಾನಿ ಬಾರ್ ಕೋಲ್ ಏರಿದ ಎದೆ ಹಾಗೂ ರುಮಾಲು ಸುತ್ತಿಕೊಂಡ ತಲೆ ಯಾರಿಗೂ ಬಾಗುವುದಿಲ್ಲವೆಂದು ರೈತರಿಗೆ ಪಾಠ ಹೇಳಿಕೊಟ್ಟ ಪ್ರೊ.ನಂಜುಂಡಸ್ವಾಮಿ ಅವರ 22ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವರು ಒತ್ತಾಯಿಸಿದರು.
ಇಂದು ಪ್ರೊ. ನಂಜುಂಡಸ್ವಾಮಿ ಜನ್ಮದಿನ :

ಹಸಿರು ಶಾಲಿನ ಹರಿಕಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ದಂಪತಿಯ ಸಮಾಧಿಯು ಅಮೃತಭೂಮಿ ಪರಿಸರಲ್ಲಿದೆ. ಪ್ರತಿವರ್ಷ ಪ್ರೊ.ನಂಜುಂಡಸ್ವಾಮಿ ಅವರ ಜನ್ಮದಿನ (ಫೆ.13) ಪ್ರಯುಕ್ತ ಅಮೃತಭೂಮಿಯಲ್ಲಿ ಇರುವ ಅವರ ಸಮಾಧಿ ಬಳಿ ರೈತ ಸಂಘಟನೆಗಳ ನೇತ್ರತ್ವದಲ್ಲಿ ನಂಜುಂಡಸ್ವಾಮಿ ಅವರು ಹೋರಾಟದ ಬದುಕಿನ ಕುರಿತು ಸಭೆ, ಸಮಾವೇಶಗಳು ಆಯೋಜಿಸಲಾಗುತ್ತದೆ.

ಇಂದು ಪ್ರೊ.ನಂಜುಂಡಸ್ವಾಮಿ ಅವರ ಜನ್ಮದಿನ ಅಂಗವಾಗಿ ನಾನಾ ಭಾಗದಿಂದ ಆಗಮಿಸಿದ ರೈತ ಮುಖಂಡರು ಅಮೃತಭೂಮಿಯಲ್ಲಿರುವ ನಂಜುಂಡಸ್ವಾಮಿ ಅವರ ಸಮಾಧಿ ಬಳಿ ಸೇರಿದರು. ರೈತ ಧ್ವಜಾರೋಹಣ ನೆರವೇರಿಸಿ, ಅವರ ಆದರ್ಶಗಳನ್ನು ಸ್ಮರಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಆಸ್ಪತ್ರೆಯಲ್ಲಿ ರಕ್ತಪೂರಣ ಮಾಡಿಸಿಕೊಳ್ತೀರಲ್ಲ, ಆಗ ಜಾತಿ ಯಾಕೆ ಮುಖ್ಯ ಆಗುವುದಿಲ್ಲ?






ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




