ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯದ 17ನೇ ದಾಖಲೆ ಬಜೆಟ್-2026, ಗಡಿ ಜಿಲ್ಲೆ ಚಿಕ್ಕಬಳ್ಳಾಪುರದ ಪಾಲಿಗೆ ಮಿಶ್ರಫಲ ನೀಡಿದೆ. ಜಿಲ್ಲೆಯ ಪ್ರಮುಖ ಉದ್ಯಮವಾದ ರೇಷ್ಮೆ ಕ್ಷೇತ್ರಕ್ಕೆ ಬಂಪರ್ ಕೊಡುಗೆ ಘೋಷಣೆಯಾಗಿದ್ದರೂ, ದಶಕಗಳ ಕಾಲದ ಶಾಶ್ವತ ನೀರಾವರಿ ಬೇಡಿಕೆಯು ಇಂದಿಗೂ ಬರೀ ಭರವಸೆಯಾಗಿಯೇ ಉಳಿದಿದೆ ಎಂಬ ಅಸಮಾಧಾನ ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ.
ಈ ಬಜೆಟ್ನಲ್ಲಿ ಜಿಲ್ಲೆಯ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಶಿಡ್ಲಘಟ್ಟದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ಮತ್ತು ಸಿಲ್ಕ್ ಪಾರ್ಕ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿರುವುದು ರೇಷ್ಮೆ ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ. ಇನ್ನು ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಹೆಚ್.ಎನ್. ವ್ಯಾಲಿ ಯೋಜನೆಯ 2ನೇ ಹಂತ ಜಾರಿಗೆ ತಂದು ಜಿಲ್ಲೆಯ 182 ಕೆರೆಗಳಿಗೆ ನೀರು ಹರಿಸಲು ಸರ್ಕಾರ ಮುಂದಾಗಿದೆ. ಇದರೊಂದಿಗೆ ಬಾಗೇಪಲ್ಲಿ ತಾಲೂಕಿನ ಕೊಮಟೊಳ್ಳ ಕೆರೆಯ ಮರುನಿರ್ಮಾಣ ಹಾಗೂ ಅಣೆಕಟ್ಟು ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿರುವುದು ಆ ಭಾಗದ ರೈತರಿಗೆ ತುಸು ಸಮಾಧಾನ ತಂದಿದೆ.
ಆದರೆ ಸರ್ಕಾರದ ಈ ಘೋಷಣೆಗಳು ಕಣ್ಣೊರೆಸುವ ತಂತ್ರ ಎಂದು ಜಿಲ್ಲೆಯ ಹಲವು ಮುಖಂಡರು ಕಿಡಿಕಾರಿದ್ದಾರೆ. ದಲಿತ ಮುಖಂಡರಾದ ಆನಂದ್ ಮಾತನಾಡಿ, “ಪ್ರತಿ ಬಜೆಟ್ನಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ. ನಮಗೆ ಹೆಚ್.ಎನ್. ವ್ಯಾಲಿಯ ಸಂಸ್ಕರಿಸಿದ ನೀರಿಗಿಂತ ಕೃಷ್ಣಾ ನದಿಯ ಶಾಶ್ವತ ನೀರು ಬೇಕು ಮತ್ತು ಜಿಲ್ಲೆಗೆ ದೊಡ್ಡ ಕೈಗಾರಿಕಾ ವಲಯ ಘೋಷಿಸದೆ ನಿರುದ್ಯೋಗಿಗಳಿಗೆ ಅನ್ಯಾಯ ಮಾಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ನೀರಿಗಾಗಿ ಒಗ್ಗಟ್ಟಾಗಿ ಒತ್ತಡ ಹೇರುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಜಿಲ್ಲೆಯ ಅಂತರ್ಜಲದಲ್ಲಿ ಯುರೇನಿಯಂ ಅಂಶ ಪತ್ತೆಯಾಗಿರುವ ಗಂಭೀರ ಪರಿಸ್ಥಿತಿ ಇದ್ದರೂ ಸರ್ಕಾರ ಕನಿಷ್ಠ ಕಾಳಜಿ ತೋರುತ್ತಿಲ್ಲ ಮತ್ತು ಎತ್ತಿನಹೊಳೆಯಂತಹ ಯೋಜನೆಗಳಿಗೆ ಅನುದಾನ ಸುರಿಯುವ ಬದಲು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕಿತ್ತು. ಸರಕಾರಕ್ಕೆ ನಾವು ಕಟ್ಟುವ ತೆರಿಗೆ ಬೇಕು, ನಮ್ಮ ರೈತರ ಭೂಮಿ ಬೇಕು, ಅಭಿವೃದ್ಧಿ ಮಾತ್ರ ಬೇಡ. ನಮ್ಮ ಜಿಲ್ಲೆಗಳ ಅಂತರ್ಜಲ ಮಟ್ಟ ಪಾತಾಳ ಮುಟ್ಟಿದೆ. ಕುಡಿಯುವ ನೀರಿನ ಮೂಲಗಳು ವಿಷಮಯವಾಗಿವೆ. ಸಿಎಜಿ ವರದಿಯಲ್ಲಿ ಎತ್ತಿನಹೊಳೆಯ ಕರ್ಮಕಾಂಡ ಬಯಲಾಗಿದ್ದರೂ ಬಜೆಟ್ನಲ್ಲಿ ಅನುದಾನ ನೀಡುವುದು ಮುಂದುವರೆದಿದೆ. ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕಿದೆ” ಎಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಮತ್ತು ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೇಶವ್ ರೆಡ್ಡಿ ಅವರು, ಬಜೆಟ್ ಅನ್ನು ಸ್ವಾಗತಿಸಿದ್ದು, ಶಿಡ್ಲಘಟ್ಟ, ಚಿಂತಾಮಣಿ ಕೆರೆಗಳಿಗೆ ನೀರು ತುಂಬಿಸುವುದು ಮತ್ತು ಗಂಟಲಮಲ್ಲಮ್ಮ ಕಣಿವೆ ಯೋಜನೆಗೆ ಚಾಲನೆ ನೀಡಿರುವುದು ಜಿಲ್ಲೆಯ ಪ್ರಗತಿಗೆ ಪೂರಕವಾಗಿದೆ ಎಂದು ಮುಖ್ಯಮಂತ್ರಿಗಳನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ನಿಂದ ರಕ್ತದಾನ ಶಿಬಿರ

ಸ್ಥಳೀಯ ನಿವಾಸಿ ಅನಂತಕೃಷ್ಣ ಅವರು, “ಬಜೆಟ್ನಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ನೀಡಿರುವ ಒತ್ತು ಜಿಲ್ಲೆಗೆ ಲಾಭದಾಯಕ. ಜಿಲ್ಲಾ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದು, ಇಡೀ ರಾಜ್ಯದಲ್ಲಿ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಘೋಷಿಸಿರುವುದು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ ಮತ್ತು 8 ರಿಂದ 12ನೇ ತರಗತಿಯಲ್ಲಿ AI ವಿಷಯಗಳ ಅಧ್ಯಯನಕ್ಕೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಇದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಘೋಷಿತ ಯೋಜನೆಗಳು ಸಕಾಲಕ್ಕೆ ಜಾರಿಯಾಗಿ ಎತ್ತಿನಹೊಳೆ ನೀರು ಜಿಲ್ಲೆಯ ಜನರಿಗೆ ತಲುಪಿದಾಗ ಮಾತ್ರ ಈ ಬಜೆಟ್ಗೆ ನಿಜವಾದ ಅರ್ಥ ಸಿಗಲಿದೆ ಎಂಬುದು ಜಿಲ್ಲೆಯ ಜನರ ಒಕ್ಕೊರಲ ಆಶಯವಾಗಿದೆ.





