ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅತ್ತ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸುತ್ತಿವೆ. ಇತ್ತ ತಮ್ಮ ನಾಯಕನನ್ನು ಕಳೆದುಕೊಂಡ ಇರಾನ್ ಭೀಕರ ಪ್ರತಿದಾಳಿ ನಡೆಸುತ್ತಿದೆ. ಈ ಘನ ಘೋರ ಯುದ್ಧ 6ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧ ಕೊನೆಗೊಳ್ಳುವ ಲಕ್ಷಣಗಳಂತೂ ಕಾಣುತ್ತಿಲ್ಲ. ಈ ಮಧ್ಯೆ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಮಿನಿ ಇರಾನ್ ಎಂದು ಕರೆಸಿಕೊಳ್ಳುವ ʼಅಲಿಪುರʼ ಗ್ರಾಮದಲ್ಲಿಯೂ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಅಲಿಪುರ ಹಾಗೂ ಇರಾನ್ ದೇಶಕ್ಕೆ ಬಹಳ ಅನ್ಯೋನ್ಯವಾದ ಸಂಬಂಧ ಇದೆ. ಇಡೀ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಶಿಯಾ ಪಂಗಡದ ಮುಸ್ಲಿಮರು ಅಲಿಪುರದಲ್ಲೇ ನೆಲೆಸಿರುವ ಹಿನ್ನೆಲೆಯಲ್ಲಿ 1981ರಲ್ಲಿ ಈ ಗ್ರಾಮಕ್ಕೆ ಇರಾನ್ ಸುಪ್ರೀಂ ನಾಯಕ ಖಮೇನಿ ಭೇಟಿ ನೀಡಿದ್ದರು. ಖಮೇನಿ ರವರ ಹತ್ಯೆಯ ಸುದ್ದಿ ಹೊರ ಬರುತ್ತಿದ್ದಂತೆ ಅಲಿಪುರದ ಅಂಗಡಿಗಳನ್ನು ಬಂದ್ ಮಾಡಿ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಲಾಗಿದೆ. ಅಲ್ಲಿನ ಶಿಯಾ ಮುಸಲ್ಮಾನರು ಮೂರು ದಿನಗಳ ಕಾಲ ಶೋಕಾಚರಣೆ ಮಾಡಿದ್ದಾರೆ.
ಇರಾನ್ ಸುಪ್ರೀಂ ನಾಯಕ ಖಮೇನಿ ಅವರ ಮಾನವೀಯ ಗುಣಗಳನ್ನು ಅಲಿಪುರದ ಶಿಯಾಗಳು ಅಳವಡಿಸಿಕೊಂಡಿದ್ದಾರೆ. ಇಲ್ಲಿನ ಸುಮಾರು ವಿದ್ಯಾರ್ಥಿಗಳು ಇರಾನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ವ್ಯಾಪಾರ ವೃತ್ತಿಯಲ್ಲಿಯು ತೊಡಗಿಸಿಕೊಂಡಿದ್ದಾರೆ. 1981 ರಲ್ಲಿ ಖಮೇನಿ ಅವರು ಭೇಟಿ ನೀಡಿ ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಏಕಾಏಕಿ ಯುದ್ಧ ಮಾಡಿ ಮಾನವಿಯತೆಯ ವಿರುದ್ಧವಾಗಿ ನಡೆದುಕೊಂಡಿದ್ದಾರೆ ನಮ್ಮ ಭಾರತ ದೇಶದ ಸರ್ಕಾರ ಈ ಘಟನೆಯನ್ನು ಖಂಡಿಸಬೇಕು ಎಂದು ಅಲಿಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವರ್ಷ ಪ್ಯಾಲೆಸ್ತೀನ್ ಪರವಾಗಿ ಇರಾನ್ ನಿಂತಿದ್ದಕ್ಕೆ ಈ ರೀತಿ ಮಾಡಿದ್ದಾರೆ ಇರಾನ್ ಯಾವತ್ತಿಗೂ ಅಮೆರಿಕ ಮತ್ತು ಇಸ್ರೇಲ್ ನಂತೆ ಶಾಲಾ ಕಾಲೇಜುಗಳ ಮೇಲೆ, ಆಸ್ಪತ್ರೆಗಳ ಮೇಲೆ ದಾಳಿ ಮಾಡಿಲ್ಲ. ಆದರೆ ಅಮೆರಿಕದ ಕುತಂತ್ರದಿಂದ ಇರಾನ್ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಮರಣ ಹೊಂದಿದ್ದಾರೆ. ನಾವೇ ಸುಪ್ರೀಂ ನಾವು ಹೇಳಿದ ರೀತಿ ಕೇಳಬೇಕು ಅನ್ನುವ ಅಮೆರಿಕ-ಇಸ್ರೇಲ್ ವಾದವನ್ನು ಕೇಳದ್ದಕ್ಕೆ ಖಮೇನಿ ಅವರನ್ನು ಹತ್ಯೆ ಮಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎನ್ನುತ್ತಾರೆ ಅಲಿಪುರ ಅಂಜುಮನ್ ಅಧ್ಯಕ್ಷ ಅಲಿ ಅಬ್ಬಾಸ್.

ಅಲಿಪುರದ ಸ್ಥಳೀಯ ನಿವಾಸಿ ರೋಶನ್ ಈ ದಿನಕ್ಕೆ ಪ್ರತಿಕ್ರಿಯಿಸಿ, “ಖಮೇನಿ ಅವರನ್ನು ಮೋಸದಿಂದ ಹತ್ಯೆ ಮಾಡಲಾಗಿದೆ. ಇವರು ಕೇವಲ ಮುಸ್ಲಿಮರಿಗೆ ನಾಯಕರಾಗಿರಲಿಲ್ಲ. ಇಡೀ ಪ್ರಪಂಚಕ್ಕೆ ನಾಯಕರಾಗಿದ್ರು. ನ್ಯಾಯಕ್ಕೆ ನ್ಯಾಯ, ಅನ್ಯಾಯಕ್ಕೆ ಅನ್ಯಾಯ ಎಂದು ಹೇಳುತ್ತಿದ್ದ ವ್ಯಕ್ತಿ ನಮಗೆ ಮರಳಿ ಸಿಗಬೇಕಾದರೆ ಬಹಳ ಕಷ್ಟವಿದೆ. ಅಲಿಪುರದಿಂದ ಇರಾನ್ ಗೆ ಸುಮಾರು 120 ರಿಂದ 140 ಜನ ವಿದ್ಯಾಭ್ಯಾಸ ಹಾಗೂ ವ್ಯವಹಾರ ಉದ್ದೇಶದಿಂದ ಹೋಗಿ ಜೀವನ ಕಟ್ಟಿಕೊಂಡಿದ್ದಾರೆ. ಸದ್ಯ ಯುದ್ಧದ ಪರಿಸ್ಥಿತಿಯಿಂದ ನಾವು ಆತಂಕದಲ್ಲಿದ್ದೇವೆ. ಇರಾನ್ ರಾಯಭಾರಿ ಕಚೇರಿ ಹಾಗೂ ಭಾರತ ಸರ್ಕಾರ ಅಲ್ಲಿನ ಭಾರತೀಯರನ್ನು ಕರೆತರಲು ಬೆಂಬಲ ನೀಡುತ್ತಿವೆ. ನನ್ನ ಮಗಳು ಇರಾನ್ ನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ, ಅಲ್ಲಿನ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಬಾಂಬ್ ಬಿದ್ದ ಬಳಿಕ ಟೆಹ್ರಾನ್ನಿಂದ ಸ್ಥಳಾಂತರವಾಗಿದ್ದು, ಜೋಪಾನವಾಗಿದ್ದೇವೆ ಎಂದು ಫೋನ್ ಕಾಲ್ ಮೂಲಕ ತಿಳಿಸಿದ್ದಾಳೆ. ಆದರೆ ನಾವು ಆತಂಕದಲ್ಲೇ ಇರುವಂತಾಗಿದೆ” ಎಂದರು.
ಅಲಿಪುರ ಅಂಜುಮನ್ ಜಾಫರೀಯ ಕಾರ್ಯದರ್ಶಿ ಫಾಜೀಲ್ ರಜಾ ಮಾತನಾಡಿ, “ಅಮೆರಿಕ, ಇಸ್ರೇಲ್ ನಮ್ಮ ಇರಾನ್ ಸುಪ್ರೀಂ ಲೀಡರ್ನ್ನು ಹತ್ಯೆ ಮಾಡಿರುವ ಸುದ್ದಿ ಕೇಳಿ ಬಹಳ ನೋವಾಗಿದೆ. ಅಲಿಪುರದಲ್ಲಿ ಅಂಗಡಿಗಳನ್ನು ಬಂದ್ ಮಾಡಿ ಶೋಕಾಚರಣೆ ಮಾಡಿದ್ವಿ. ಖಮೇನಿ ಅವರು ಕೇವಲ ಧರ್ಮಗುರು ಅಲ್ಲ ಸತ್ಯ, ನ್ಯಾಯ, ಮನುಷ್ಯತ್ವಕ್ಕಾಗಿ ಶ್ರಮಿಸಿದವರು. ಪ್ಯಾಲೆಸ್ತೀನ್ ಹಾಗೂ ಗಾಜಾದಲ್ಲಿ ಅಮೆರಿಕ ಹಾಗೂ ಇರಾನ್ ನ ದುಷ್ಕರ್ಮಿಗಳು ಚಿಕ್ಕ ಮಕ್ಕಳ ಮೇಲೆ ಸಹ ಬಾಂಬ್ ಹಾಕಿ ಅವರನ್ನು ಸಾಯಿಸಿದ್ದಾರೆ. ಇಷ್ಟಾದ್ರು ಪ್ಯಾಲೆಸ್ತೀನ್ ನವರಿಗೆ ಯಾರು ಬೆಂಬಲ ನೀಡದ ಸಂದರ್ಭದಲ್ಲಿ ಇರಾನ್ ಬೆಂಬಲ ನೀಡಿತ್ತು. ಈ ಸಾವನ್ನು ಸಾವು ಅಂತ ಸ್ವೀಕಾರ ಮಾಡಲ್ಲ, ಅದನ್ನು ನಾವು ಬಲಿದಾನ ಅಂತ ಹೇಳ್ತೇವೆ. ಈ ಪ್ರಪಂಚದಿಂದ ಖಮೇನಿ ಅವರ ದೇಹ ಮಾತ್ರ ಹೋಗಿದೆ, ಆದ್ರೆ ಅವರ ನೀತಿ, ಪದ್ಧತಿ, ಅವರ ಮಾರ್ಗದರ್ಶನ ನಮ್ಮ ಹೃದಯದಲ್ಲಿದೆ” ಎಂದರು.

ಈ ಹಿಂದೆ ಕರ್ಬಾಲ ಮೈದಾನದಲ್ಲಿ ಇಮಾಮ್ ಹುಸೇನ್ ರವರು ಯಹೂದಿ ರವರಿಗೆ ಬಗ್ಗದೆ ಹೋರಾಟ ಮಾಡಿದ್ರು ಅವರ ಹಾದಿಯಲ್ಲಿ ಖಮೇನಿ ನಡೆದಿದ್ದಾರೆ. ಇರಾನ್ ನಲ್ಲಿ ಅಲಿಪುರದ ನೂರಕ್ಕೂ ಹೆಚ್ಚು ಜನರಿದ್ದು ಕಳೆದ ವರ್ಷ ಯುದ್ಧದ ಸಂದರ್ಭದಲ್ಲಿ ಭಾರತ ಸರ್ಕಾರ ಅವರನ್ನು ಯಾವ ರೀತಿ ಸೇಫ್ ಆಗಿ ದೇಶಕ್ಕೆ ಮರಳಿ ಕರೆದುಕೊಂಡು ಬಂದ್ರು ಅದೇ ರೀತಿ ಈ ಬಾರಿಯೂ ಅಲಿಪುರದ ಜನರಿಗೆ ಇರಾನ್ ನಿಂದ ವಾಪಸ್ ಕರೆಸಿಕೊಳ್ಳಬೇಕು” ಎಂದು ಗ್ರಾಮಸ್ಥರು ವಿನಂತಿಸಿದರು.
ಅಲಿಪುರ ಐ.ಕೆ ಆಸ್ಪತ್ರೆಯ ವೈದ್ಯ ಮೀರ್ ನದೀಂ, “ಅಮೆರಿಕ ಮತ್ತು ಇಸ್ರೇಲ್ ಹೇಳಿದ ಹಾಗೆ ಇರಾನ್ ಕೇಳಿಲ್ಲ. ಅದೇ ದ್ವೇಷದಿಂದ ಹತ್ಯೆ ಮಾಡಲಾಗಿದೆ. ಖಮೇನಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಒಂದು ಆಸ್ಪತ್ರೆ ನಿರ್ಮಾಣ ಮಾಡಿ ಎಂದು ನಮಗೆ ಸಲಹೆ ನೀಡಿದ್ದರು. ಇರಾನ್ ದೇಶದಲ್ಲಿ ಮಹಾತ್ಮ ಗಾಂಧಿ ಆಸ್ಪತ್ರೆ ಹಾಗೂ ಮಹಾತ್ಮ ಗಾಂಧಿ ರಸ್ತೆ ಇದೆ, ಯಾಕಂದ್ರೆ ಭಾರತ ಮತ್ತು ಇರಾನ್ ದೇಶದ ಸಂಬಂಧ ಒಳ್ಳೆಯ ರೀತಿಯಲ್ಲಿ ಇದೆ. ಅಲಿಪುರದಿಂದ ಇರಾನ್ ಗೆ 30 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಹೋಗಿದ್ದಾರೆ ಮತ್ತು ವ್ಯಾಪಾರಕ್ಕೂ ಸಹ ಹಲವಾರು ಜನರು ಹೋಗಿದ್ದಾರೆ. ಕೂಡಲೇ ಎಲ್ಲರೂ ಸಹ ಯುದ್ಧವನ್ನು ನಿಲ್ಲಿಸಿ ಶಾಂತಿಯನ್ನು ಕಾಪಾಡಿ ಆಡಳಿತ ಮಾಡಿಕೊಂಡು ಹೋಗಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ನವಜಾತ ಶಿಶು ಸಾವು: ಮರ್ಯಾದಾಗೇಡು ಹತ್ಯೆ ಆರೋಪ

ಮಧ್ಯಪ್ರಾಚ್ಯದಲ್ಲಿ ಉರಿಯುತ್ತಿರುವ ಯುದ್ಧದ ಬೆಂಕಿ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಅಲಿಪುರಂತಹ ಗ್ರಾಮಗಳಿಗೂ ತಲುಪುತ್ತಿವೆ. ಇರಾನ್ನೊಂದಿಗೆ ಐತಿಹಾಸಿಕ, ಧಾರ್ಮಿಕ ಹಾಗೂ ಮಾನವೀಯ ಸಂಬಂಧ ಹೊಂದಿರುವ ಅಲಿಪುರದ ಜನರು ಯುದ್ಧದ ಬೆಳವಣಿಗೆಗಳನ್ನು ಆತಂಕದಿಂದ ಗಮನಿಸುತ್ತಿದ್ದಾರೆ. ಅಲ್ಲಿ ವಿದ್ಯಾಭ್ಯಾಸ ಹಾಗೂ ಉದ್ಯೋಗದ ನಿಮಿತ್ತ ಇರುವ ತಮ್ಮ ಕುಟುಂಬ ಸದಸ್ಯರ ಸುರಕ್ಷತೆಗಾಗಿ ಅವರು ಕಳವಳ ವ್ಯಕ್ತಪಡಿಸುತ್ತಿದ್ದು, ಶಾಂತಿ ಸ್ಥಾಪನೆಯಾಗಬೇಕು ಎಂಬ ಆಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಯುದ್ಧದ ಹೊಗೆ ದೂರದ ದೇಶಗಳನ್ನೂ, ಸಣ್ಣ ಗ್ರಾಮಗಳನ್ನೂ ತಟ್ಟುವ ಈ ಸಂದರ್ಭ ಜಗತ್ತಿನ ನಾಯಕರು ಸಂಘರ್ಷವನ್ನು ಕೊನೆಗೊಳಿಸಿ ಮಾನವೀಯತೆ ಮತ್ತು ಶಾಂತಿಗೆ ಆದ್ಯತೆ ನೀಡಬೇಕೆಂದು ಎದುರು ನೋಡುತ್ತಿದ್ದಾರೆ.





