ಸಮಾಜದಲ್ಲಿ ಹಣ ಅಧಿಕಾರದ ಮದ ನೆತ್ತಿಗೇರಿದರೆ ರಾಜಕಾರಣಿಗಳು ಯಾವ ರೀತಿ ವರ್ತಿಸಬಹುದು ಎಂಬುದಕ್ಕೆ ತಾಜಾ ಉದಾಹಾರಣೆ ಶಿಡ್ಲಘಟ್ಟದ ರಾಜೀವ್ ಗೌಡ ಪ್ರಕರಣ.
ಶಿಡ್ಲಘಟ್ಟ ನಗರಸಭೆ ಆಯುಕ್ತೆ ಮಮತಾ ಗೌಡ ಅವರನ್ನು ಬ್ಯಾನರ್ ವಿಚಾರವಾಗಿ ನಿಂದಿಸಿ ತೀವ್ರ ವಿರೋಧದ ನಂತರ ಕ್ಷಮೆ ಕೇಳಿದ್ದು ಗೊತ್ತೇ ಇದೆ. ಒಬ್ಬ ಮಹಿಳಾ ಅಧಿಕಾರಿಯ ಪರವಾಗಿ ಬಂದ ಬೆಂಬಲ ನಿಜಕ್ಕೂ ಶ್ಲಾಘನೀಯ. ಆದರೆ, ಇದು ಕ್ಷಮೆಯೊಂದಿಗೆ ಮುಗಿಯುವ ಪ್ರಕರಣವೇ? ಯಾರಿಗೆ ಬೇಕಾದರೂ ಬಾಯಿಗೆ ಬಂದಂತೆ ಬೈದು ಕ್ಷಮೆ ಕೇಳಿದರೆ ಸಾಕೇ? ನಮ್ಮ ಸಮಾಜದಲ್ಲಿ ಮಹಿಳೆಯೆಂಬ ಕಾರಣಕ್ಕೆ ದಲಿತ, ದಮನಿತರು, ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಉನ್ನತ ಹುದ್ದೆಯಲ್ಲಿದ್ದರೂ ಸಹ ಇಂದಿಗೂ ಅನುಭವಿಸುವಂತಹ ಅವಮಾನಗಳನ್ನು ಈ ಸಮಾಜ ಚರ್ಚಿಸಬೇಕಲ್ಲವೇ? ಎದುರುಗಡೆಯವರ ಘನತೆ, ಸ್ವಾಭಿಮಾನಕ್ಕೆ ದಕ್ಕೆಯಾಗುವಂತೆ ನಡೆದುಕೊಳ್ಳುವ ರಾಜಕಾರಣಿಗಳ ಜಾತಿ, ಅಧಿಕಾರದ ಮದವನ್ನು ಇಳಿಸಲು ಇಂತಹ ಪ್ರಕರಣಗಳನ್ನು ಬಳಸಿಕೊಳ್ಳಬೇಕಲ್ಲವೇ?
ನಮ್ಮದು ಅತ್ಯಂತ ತಾರತಮ್ಯದಿಂದ ಕೂಡಿರುವ ಸಮಾಜ. ಇಲ್ಲಿ ಸಂವಿಧಾನದ ಅಸ್ತಿತ್ವದಿಂದ ಒಂದಷ್ಟು ಅವಕಾಶಗಳು ಸಿಕ್ಕರೂ ಅವನ್ನು ಪಡೆದುಕೊಳ್ಳಲು ಹೊರಾಡಲೇಬೇಕಾದ ಅನಿವಾರ್ಯತೆ ಇದೆ. ಪುರುಷಾಧಿಪತ್ಯದ ಮನಸ್ಥಿತಿಗೆ ಅಧಿಕಾರ, ಹಣ, ಜಾತಿ ಮದಗಳು ಜೊತೆಯಾದರೆ ಇನ್ನಷ್ಟು ವಿನಾಶಕರಿ ವರ್ತನೆಗಳಿಗೆ ತಲುಪುವುದರಲ್ಲಿ ಸಂಶಯವಿಲ್ಲ. ಶಿಡ್ಲಘಟ್ಟದಲ್ಲಿ ನಡೆದ ಈ ಪ್ರಕರಣದಲ್ಲಿ ಸಮಾಜ ಯೋಚಿಸುವಂತಹ ಹಲವು ವಿಚಾರಗಳು ನಮ್ಮ ಮುಂದೆ ಇವೆ. ಇದು ಕ್ಷಮೆಗೆ ಸೀಮಿತವಾದ ಪ್ರಕರಣವಲ್ಲ. ಬದಲಾಗಿ ಮಾದರಿ ಶಿಕ್ಷೆಗೆ ಪೂರಕವಾದ ಪ್ರಕರಣ ಎಂಬುದನ್ನು ಸಾಬೀತುಪಡಿಸಬೇಕಿದೆ. ಈಗಾಗಲೇ ಪ್ರಕರಣ ದಾಖಲಾಗಿದ್ದು, ಸೂಕ್ತ ಕ್ರಮವಾಗಬೇಕಿದೆ. ಮಹಿಳಾ ಆಯೋಗವು ಸಹ ಪಕ್ಷಾತೀತವಾಗಿ ಈ ಪ್ರಕರಣವನ್ನು ಕಂಡಿರುವುದನ್ನು ನಾವು ಶ್ಲಾಘಿಸಬೇಕಿದೆ.

ಈ ಕುರಿತು ಈ ದಿನ.ಕಾಮ್ಗೆ ಶಿಡ್ಲಘಟ್ಟ ಶಾಸಕ ರವಿಕುಮಾರ್ ಪ್ರತಿಕ್ರಿಯಿಸಿ, “ಜೆಡಿಎಸ್ ನ ಶಿಡ್ಲಘಟ್ಟ ತಾಲೂಕು ಅಧ್ಯಕ್ಷರು, ರಾಜೀವ್ ಗೌಡ ವಿರುದ್ಧ ದೂರು ದಾಖಲು ಮಾಡಿದ್ದಾರೆ. ನಗರಸಭೆ ಪೌರಾಯುಕ್ತ ಅಮೃತ ಗೌಡ ಅವರೂ ದೂರು ದಾಖಲಿಸಿದ್ದಾರೆ. ಒಬ್ಬ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿ ಅವಾಚ್ಯ ಪದಗಳಿಂದ ನಿಂದಿಸಿರುವುದು ಕಾಂಗ್ರೆಸ್ ಪಕ್ಷ ತಲೆತಗ್ಗಿಸುವಂತ ಪ್ರಕರಣ. ನಮ್ಮ ಕ್ಷೇತ್ರದಲ್ಲಿ ನೆಮ್ಮದಿ ಇರಬೇಕು ಯಾವುದೇ ರೀತಿಯ ಗಲಾಟೆ ಆಗಬಾರದು ಕಾನೂನು ರೀತಿಯಲ್ಲಿ ಹೋರಾಟ ಮಾಡೋಣ ಎಂದು ಮುಖಂಡರಿಗೆ ತಿಳಿಸಿದ್ದೇನೆ. ಅನಧಿಕೃತ ಬ್ಯಾನರ್ ಗಳ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮುಂದಿನ ದಿನಗಳಲ್ಲಿ ಸಭೆ ಮಾಡುತ್ತೇನೆ. ನಗರಸಭೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಅನುಮತಿ ಪಡೆದು ಬ್ಯಾನರ್ ಅಳವಡಿಕೆ ಮಾಡಬೇಕು. ಜನಪ್ರತಿನಿಧಿಗಳು ಜನರ ಮಧ್ಯೆ ಯಾವ ರೀತಿ ಮಾತನಾಡಬೇಕು ಹೇಗೆ ನಡೆದುಕೊಳ್ಳಬೇಕು ಎನ್ನುವ ಜ್ಞಾನ ಅವರಿಗೆ ಇರಬೇಕು. ರೌಡಿಗಳ ರೀತಿಯಲ್ಲಿ ವರ್ತನೆ ಮಾಡಿದರೆ ಜನಪ್ರತಿನಿಧಿಗಳು ಆಗ್ತಾರೆ ಅಂತ ಅವರು ಗಮನದಲ್ಲಿಟ್ಟುಕೊಂಡಿದ್ದಾರೆ, ಇಂತಹ ವರ್ತನೆಗಳಿಗೆ ಸಮಯ ಬಂದಾಗ ಮತದಾರರು ಬುದ್ಧಿ ಕಲಿಸುತ್ತಾರೆ. ಇಂತಹ ಪ್ರಕರಣಗಳು ಮುಂದೆ ಮರುಕಳಿಸಬಾರದು ಎಂದರೆ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದರು.
ಕೋಲಾರ ಜಿಲ್ಲಾ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಗೀತಾ ಅವರು, “ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮಹಿಳಾ ಅಧಿಕಾರಿ ವಿರುದ್ಧ ಗರ್ವ ಮತ್ತು ದರ್ಪದಿಂದ ಮಾತನಾಡಿರುವುದು ಖಂಡನೀಯ. ಒಬ್ಬ ಮಹಿಳಾ ಅಧಿಕಾರಿಗೆ ಅಷ್ಟು ಕೀಳುಮಟ್ಟದಲ್ಲಿ ಮಾತನಾಡಿ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದು, ದರ್ಪ ತೋರಿಸಿರುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಾ ಅಥವಾ ಗೂಂಡಾ ವ್ಯವಸ್ಥೆಯಾ? ಈ ರೀತಿ ಮಾತನಾಡಿರುವುದು ಸರಿಯಲ್ಲ. ಸೂಕ್ತ ಕಾನೂನು ಕ್ರಮ ಕೈಗೊಳ್ಳಲೇಬೇಕು. ರಾಜೀವ್ ಗೌಡಗೆ ತಾನೊಬ್ಬ ಪುರುಷ ಎನ್ನುವ ಅಹಂಕಾರವಿದೆ. ಅಧಿಕಾರದ ದುರಹಂಕಾರವಿದೆ. ಮಹಿಳಾ ಅಧಿಕಾರಿಗೆ ಅವನು ಮಾತನಾಡಿರುವ ಕೆಟ್ಟ ಪದಗಳಿಂದ ತುಂಬಾ ನೋವಾಗಿದೆ. ಮಹಿಳೆಯರು ತುಂಬಾ ಒತ್ತಡದಲ್ಲಿ ಬಂದು ಕೆಲಸ ನಿರ್ವಹಿಸುತ್ತಾರೆ. ಈ ರೀತಿ ಒತ್ತಡದಿಂದ ಬೇರೆ ರೀತಿಯ ಅನಾಹುತ ಆದರೆ ಯಾರು ಹೊಣೆ? ಮನಸ್ಸಿಗೆ ಬಂದಂತೆ ಮಾತನಾಡಿ ಕ್ಷಮೆ ಕೆಳೋದ್ರಲ್ಲಿ ಅರ್ಥವಿಲ್ಲ. ಇಲ್ಲಿ ಕ್ಷಮಿಸುವ ಪ್ರಶ್ನೆಯೂ ಇಲ್ಲ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪೌರ ಕಾರ್ಮಿಕರು ಇಡೀ ಊರನ್ನು ಸ್ವಚ್ಛಗೊಳಿಸುತ್ತಾರೆ. ಅವರಿಗೆ ಕೆಟ್ಟ ಪದಗಳಿಂದ ಮಾತನಾಡಿರುವುದು ಯಾಕೆ? ಅವರು ಮನುಷ್ಯರಲ್ವಾ, ಮುನ್ಸಿಪಾಲಿಟಿ ಕೆಲಸ ಮಾಡಿದ್ರೆ ಅಷ್ಟು ಕೀಳರಿಮೆನಾ?” ಎಂದು ಕಿಡಿಕಾರಿದರು.

“ರಸ್ತೆಯಲ್ಲಿ ಬ್ಯಾನರ್ ಅಳವಡಿಕೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಬ್ಯಾನರ್ ಗಳಿಗೆ ಇತಿಮಿತಿ ಇಲ್ಲದಂತಾಗಿದೆ. ಎಲ್ಲೆಂದರಲ್ಲಿ ಬ್ಯಾನರ್ ಹಾಕುವುದನ್ನು ಬ್ಯಾನ್ ಮಾಡಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಬಜಾವ್ ಮಾಡಬಾರದು. ಇಂದು ಅಧಿಕಾರಿಗೆ ಬೈದಿದ್ದು, ಹೀಗೆಯೇ ಬಿಟ್ರೆ ಮುಂದೆ ತಮ್ಮ ಪಕ್ಷದ ಮುಖಂಡರನ್ನೇ ಬೈತಾರೆ. ಅಂತವರು ಎಲ್ಲಿದ್ದರೂ ಸಹ ಎಲ್ಲರಿಗೂ ಅನಾಹುತವೇ. ಒಂದು ವೇಳೆ ಸರ್ಕಾರ ಅಂತಹ ವ್ಯಕ್ತಿಯನ್ನು ಬಜಾವ್ ಮಾಡಿದರೆ ಅವರ ನೈತಿಕತೆ ಪ್ರಶ್ನೆ ಉದ್ಭವಿಸುತ್ತದೆ. ರಾಜೀವ್ ಗೌಡ ವಿರುದ್ಧ ಶೀಘ್ರದಲ್ಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.
ಚಿಕ್ಕಬಳ್ಳಾಪುರ ರೈತ ಸಂಘ (ಪುಟ್ಟಣ್ಣ ಬಣ) ಜಿಲ್ಲಾಧ್ಯಕ್ಷ ಟಿ ಕೆ ಅರುಣ್ ಕುಮಾರ್ ಮಾತನಾಡಿ, “ರಾಜಕೀಯ ವ್ಯಕ್ತಿಗಳಲ್ಲಿ ಇದು ಸಾಮಾನ್ಯವಾಗಿಬಿಟ್ಟಿದೆ. ಇದರ ಹಿಂದೆ ಮಾಜಿ ಸಂಸದ ಮುನಿಸ್ವಾಮಿ ಪಿಡಿಒಗೆ ಅವಾಚ್ಯ ಪದಗಳಿಂದ ಮಾತನಾಡಿದ್ರೂ ಸಹ ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಈಗ ನೋಡಿದ್ರೆ ರಾಜೀವ್ ಗೌಡ ಮಹಿಳಾ ಅಧಿಕಾರಿ ಮೇಲೆ ಈ ರೀತಿ ಮಾತನಾಡಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಕಷ್ಟವಾಗುತ್ತೆ. ಆ ಕಾರಣದಿಂದ ಇಂತಹ ಘಟನೆ ಮರುಕಳಿಸದ ರೀತಿಯಲ್ಲಿ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಧಿಕಾರಿಗೆ ರಾಜಕೀಯ ಪ್ರಭಾವ ತೋರಿಸಿ ಬೆದರಿಕೆ ಹಾಕುವುದು ಸರಿಯಲ್ಲ. ಎಲ್ಲರೂ ಸಹ ಆಡಿಯೋವನ್ನು ಕೇಳಿಸಿಕೊಂಡಿದ್ದಾರೆ. ಅಂತವರಿಗೆ ಶಿಕ್ಷೆ ಆಗುವವರೆಗೂ ಹೋರಾಟ ಮಾಡ್ಬೇಕಾಗುತ್ತದೆ”

“ರಾಜೀವ್ ಗೌಡ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಲ್ಲರೂ ಅಧಿಕಾರಿಯ ಪರವಾಗಿ ನಿಲ್ಲಬೇಕು. ಮಹಿಳಾ ಅಧಿಕಾರಿ ಮೇಲೆ ಈ ರೀತಿ ಕೆಟ್ಟದಾಗಿ ಮಾತನಾಡಿ ಬೆದರಿಕೆ ಹಾಕಿರುವುದು ಬಹಳ ತಪ್ಪು ರಾಜೀವ್ ಗೌಡಗೆ ಶಿಕ್ಷೆ ಆಗುವವರೆಗೂ ಬಿಡಬಾರದು, ಶಿಕ್ಷೆ ಆದರೆ ಮಾತ್ರ, ಉಳಿದವರು ಈ ರೀತಿ ಮಾಡಲು ನೂರು ಬಾರಿ ಯೋಚಿಸುತ್ತಾರೆ” ಎಂದು ಆಗ್ರಹಿಸಿದರು.
ಇದೇ ರೀತಿ ರಾಜಕೀಯ ವ್ಯಕ್ತಿಯ ಬದಲು ರೈತರು ಯಾರಾದರೂ ಮಾತಾಡಿದ್ರೆ ಅವರನ್ನು ಸುಮ್ಮನೆ ಬಿಡಲಾಗುತ್ತಿತ್ತಾ? ಪೊಲೀಸರು ಅಂದೇ ಬಂಧಿಸುತ್ತಿದ್ದರು. ಆದರೆ ರಾಜೀವ್ ಗೌಡ ರಾಜಕಾರಣಿ ಎಂಬ ಕಾರಣಕ್ಕೆ ಇದುವರೆಗೂ ಅರೆಸ್ಟ್ ಮಾಡಲಿಲ್ಲ. ರೈತರು, ಜನಸಾಮಾನ್ಯರಾದರೆ ಪೊಲೀಸರಿಗೆ ಬೇಗ ಸಿಕ್ಕಿಬಿಡುತ್ತಾರೆ. ಆದರೆ ರಾಜೀವ್ ಗೌಡ ಸಿಗುತ್ತಿಲ್ಲ ಯಾಕೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಶಿಡ್ಲಘಟ್ಟ | ಪೌರಾಯುಕ್ತೆಗೆ ಬೆದರಿಕೆ: ಕಾಂಗ್ರೆಸ್ ಮುಖಂಡನ ಬಂಧನಕ್ಕೆ ಪೌರಕಾರ್ಮಿಕರ ಆಗ್ರಹ
ಶಿಡ್ಲಘಟ್ಟ ಪೌರಾಯುಕ್ತೆ ಅಮೃತ ಗೌಡ ಹಾಗೂ ಕಾರ್ಮಿಕರಿಗೆ ರಾಜೀವ್ ಗೌಡ ಕೆಟ್ಟ ಪದಗಳಿಂದ ಬೈದಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ, ಏನು ಬೇಕಾದರೂ ಮಾತನಾಡಬಹುದು ಅಂತ ಇದ್ರೆ ಅದು ಬಹಳ ತಪ್ಪು. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋಲಾರ ಸಂಸದ ಮಲ್ಲೇಶ್ ಬಾಬು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಶಿಡ್ಲಘಟ್ಟದ ರಾಜೀವ್ ಗೌಡ ಪ್ರಕರಣವು, ಒಬ್ಬ ರಾಜಕಾರಣಿ ಮತ್ತು ಒಬ್ಬ ಮಹಿಳಾ ಅಧಿಕಾರಿಯ ನಡುವಿನ ವೈಯಕ್ತಿಕ ಘರ್ಷಣೆಯಷ್ಟೇ ಅಲ್ಲ. ಸಮಾಜದಲ್ಲಿ ಅಧಿಕಾರ, ಹಣ, ಜಾತಿ ಹಾಗೂ ಲಿಂಗಾಧಾರಿತ ದರ್ಪಗಳು ಇನ್ನೂ ಎಷ್ಟು ಆಳವಾಗಿ ಬೇರೂರಿವೆ ಎಂಬುದಕ್ಕೆ ಹಸಿ ಸಾಕ್ಷಿ. ಕ್ಷಮೆಯೊಂದು ಇಂತಹ ವರ್ತನೆಗಳಿಗೆ ಅಂತ್ಯವಲ್ಲ. ಕಾನೂನುಬದ್ಧ, ಮಾದರಿ ಶಿಕ್ಷೆಯೇ ಇಂಥ ದರ್ಪಗಳಿಗೆ ತಡೆಗೋಡೆಯಾಗಬೇಕು. ಇಂದು ಮಹಿಳಾ ಅಧಿಕಾರಿಯ ಮೇಲೆ ನಡೆದ ಅವಮಾನಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ನಾಳೆ ಮತ್ತೊಬ್ಬ ಅಧಿಕಾರಿ, ಮತ್ತೊಬ್ಬ ಕಾರ್ಮಿಕ, ಮತ್ತೊಬ್ಬ ಸಾಮಾನ್ಯ ನಾಗರಿಕ ಇಂತಹ ದೌರ್ಜನ್ಯಕ್ಕೆ ಗುರಿಯಾಗುವ ಅಪಾಯವಿದೆ. ಕಾನೂನು ಎಲ್ಲರಿಗೂ ಸಮಾನವಾಗಬೇಕು ಎಂಬ ಸಂವಿಧಾನದ ಆತ್ಮವನ್ನು ಈ ಪ್ರಕರಣದ ಮೂಲಕ ಸರ್ಕಾರ, ಆಡಳಿತ ವ್ಯವಸ್ಥೆ ಮತ್ತು ನ್ಯಾಯಾಂಗ ಮತ್ತೊಮ್ಮೆ ಸಾಬೀತುಪಡಿಸಬೇಕಿದೆ.





