ಪ್ರತಿದಿನ ಟೊಮೆಟೊ ಬೆಲೆ ಕುಸಿಯುತ್ತಿರುವ ಕಾರಣ ರೈತರು ನಿರಾಶೆಗೆ ಒಳಗಾಗಿದ್ದಾರೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಲ್ಲಿ ಟೊಮೆಟೊ ಬೆಲೆ 400 ರೂಪಾಯಿಗೂ ಅಧಿಕವಾಗಿತ್ತು. ಆದರೆ ಕೆಲವು ದಿನಗಳಿಂದ ಟೊಮೆಟೊ ಬೆಳೆ ಏಕಾಏಕಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ರೈತರಿಗೆ ಬಹಳ ನಷ್ಟ ಅನುಭವಿಸುತ್ತಿದ್ದಾರೆ.
ರಾಜ್ಯದ ಬಯಲು ಸೀಮೆ ಪ್ರದೇಶಗಳಾದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತರು ಹೆಚ್ಚಾಗಿ ಟೊಮೆಟೊ ಬೆಳೆಯುತ್ತಾರೆ. ಟೊಮೆಟೊ ಬೆಳೆಯ ಮೇಲೆಯೇ ಇಲ್ಲಿನ ಸಾವಿರಾರು ರೈತರು ಅವಲಂಬಿತರಾಗಿದ್ದಾರೆ. ಕೋಲಾರದಲ್ಲಿ ಏಷ್ಯಾದ ಎರಡನೇ ಅತಿದೊಡ್ಡ ಎಪಿಎಂಸಿ ಮಾರುಕಟ್ಟೆ ಇದೆ. ಇಲ್ಲಿಂದ ಭಾರತದ ಹಲವು ರಾಜ್ಯ ಮತ್ತು ಇತರೆ ದೇಶಗಳಿಗೂ ಇಲ್ಲಿನ ಟೊಮೆಟೊ ಪೂರೈಕೆಯಾಗುತ್ತದೆ. ಇದೀಗ ಬೆಲೆ ಕುಸಿತ ಕಂಡಿದ್ದು, ಸರ್ಕಾರ ಟೊಮೆಟೊ ಬೆಲೆಗೆ ಬೆಂಬಲ ಬೆಲೆ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಿಗೆ ಕೋಲಾರದಿಂದ ಹೋಗುತ್ತಿದ್ದ ಟೊಮೆಟೊ ಪೂರೈಕೆಯ ಪ್ರಮಾಣ ತೀರಾ ಕುಸಿದಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಟೊಮೆಟೊ ಮಾರುಕಟ್ಟೆಯಲ್ಲೇ ಸಂಗ್ರಹವಾಗಿದೆ. ಅಲ್ಲದೆ ಸ್ಥಳೀಯವಾಗಿ ಟೊಮೆಟೊ ಉತ್ಪಾದನೆ ಹೆಚ್ಚಾಗಿರುವುದು ಮತ್ತು ಬೇಡಿಕೆ ಕಡಿಮೆಯಾಗಿರುವುದು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು, ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡ ಕಿರುಗಂಬಿ ಗ್ರಾಮದ ರೈತ ನರಸಿಂಹ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ನಾನು ಸುಮಾರು 15 ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದು, ಇದು ನಮ್ಮ ಪ್ರಮುಖ ಬೆಳೆ. ಸುಮಾರು ಎರಡು ಎಕರೆಯಲ್ಲಿ ಟೊಮೆಟೊ ಬೆಳೆ ಬೆಳೆದಿದ್ದೇನೆ. ಒಂದು ವರ್ಷದಿಂದ ಟೊಮಾಟೊ ಬೆಲೆಯಲ್ಲಿ ನಾಲ್ಕರಿಂದ ಐದು ಲಕ್ಷದವರೆಗೆ ನಷ್ಟ ಅನುಭವಿಸಿದ್ದೇನೆ. ಸುಮಾರು ಒಂದು ಎಕರೆ ಟೊಮೆಟೊ ಬೆಳೆಯಲು 2 ಲಕ್ಷ ರೂ. ಖರ್ಚಾಗುತ್ತದೆ. ಆದರೆ ಬೆಲೆ ಕುಸಿತ ಕಂಡಿದ್ದು, ನಮಗೆ ತೀವ್ರ ನಷ್ಟವಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಟೊಮೆಟೊ ಬೆಲೆ 60 ರಿಂದ 120 ರೂಪಾಯಿವರೆಗೆ ಇದ್ದು, ಟೊಮೆಟೊ ಬೆಳೆಯುವ ನಮ್ಮಂತ ಸಾವಿರಾರು ರೈತರು ಸಂಕಷ್ಟದಲ್ಲಿದ್ದಾರೆ. ಹೆಚ್ಚಾಗಿ ರೈತರು ಸಾಲ ಮಾಡಿ ಬೆಳೆ ಬೆಳೆಯುತ್ತಾರೆ. ಬೆಲೆ ಕುಸಿದರೆ ಸಾಲವನ್ನೂ ತೀರಿಸಲಾಗದೆ ರೈತರು ತೊಂದರೆಗೆ ಒಳಾಗಾಗುತ್ತಿದ್ದು, ಸರ್ಕಾರ ನಮಗೆ ಸೂಕ್ತ ರೀತಿಯಲ್ಲಿ ಬೆಂಬಲ ಬೆಲೆ ನೀಡಬೇಕು” ಎಂದು ಆಗ್ರಹಿಸಿದರು.

“ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಟೊಮೆಟೊ ಬೆಳೆದು ಅದರ ಮೇಲೆಯೇ ಅವಲಂಬಿತರಾಗಿರುತ್ತಾರೆ. ಟೊಮೆಟೊ ಬೆಳೆ ಕುಸಿತ ಕಂಡಿದ್ದು, ರೈತರಿಗೆ ಬಹಳ ನಷ್ಟ ಉಂಟಾಗಿದೆ. ಕೂಡಲೇ ಸರ್ಕಾರ ರೈತರನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಟೊಮೆಟೊ ಬೆಳೆಗೆ ಬೆಂಬಲ ಬೆಲೆ ನೀಡಬೇಕು, ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತೇವೆ” ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ರೈತ ಮುಖಂಡ ತ್ಯಾಗರಾಜ್ ಎಚ್ಚರಿಕೆ ನೀಡಿದರು.
ಕೋಲಾರದ ಟೊಮಾಟೊ ಬೆಳೆಗಾರ ವೆಂಕಟೇಶ್ ಮಾತನಾಡಿ, “ಟೊಮೆಟೊ ಬೆಲೆ ಕುಸಿತವಾಗಿದ್ದು, ರೈತರಿಗೆ ಬಹಳ ನಷ್ಟವಾಗಿದೆ. ಕೆಲವು ದಿನಗಳ ಹಿಂದೆ ಟೊಮೆಟೊ ಬೆಲೆ ಕೇವಲ ₹50 ರಿಂದ ₹60 ರೂಪಾಯಿ ಇತ್ತು. ಆದರೆ ಈಗ 100 ರೂಪಾಯಿ ಮೇಲೆ ದಾಟಿದೆ. ಆದರೂ ಇದು ರೈತರಿಗೆ ನಷ್ಟದ ಬೆಲೆಯಾಗಿದೆ. ಮುಂದೆ ಟೊಮೆಟೊ ಬೆಲೆ ಯಾವ ರೀತಿಯಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ” ಎಂದರು.
ಇದನ್ನೂ ಓದಿದ್ದೀರಾ? ಅವನತಿಯತ್ತ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರ: ಮರೆಯಾಗುವುದೇ ಗಾಂಧೀಜಿ ಭೇಟಿಯ ನೆನಪು
ಪ್ರತಿದಿನ ಟೊಮೆಟೊ ಬೆಲೆ ಕುಸಿಯುತ್ತಿರುವ ಕಾರಣ ರೈತರು ನಿರಾಶೆಗೆ ಒಳಗಾಗಿದ್ದಾರೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಲ್ಲಿ ಟೊಮೆಟೊ ಬೆಲೆ 400 ರೂಪಾಯಿಗೂ ಅಧಿಕವಾಗಿತ್ತು. ಆದರೆ ಕೆಲವು ದಿನಗಳಿಂದ ಟೊಮೆಟೊ ಬೆಳೆ ಏಕಾಏಕಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ರೈತರು ಬಹಳ ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಇದರ ಬಗ್ಗೆ ಗಮನವಹಿಸಿ ಬೇರೆ ಬೆಳೆಗಳಿಗೆ ನೀಡಿದ ರೀತಿಯಲ್ಲಿ ಟೊಮೆಟೊ ಬೆಳೆಗೂ ನಷ್ಟದ ಸಂದರ್ಭದಲ್ಲಿ ಬೆಂಬಲ ಬೆಲೆ ನೀಡಬೇಕು ಎಂದು ಎರಡೂ ಜಿಲ್ಲೆಯ ಟೊಮೆಟೊ ಬೆಳೆಗಾರರ ಆಗ್ರಹವಿದ್ದು, ಸರ್ಕಾರ ಇದರ ಕುರಿತು ಯಾವ ರೀತಿ ಕ್ರಮ ವಹಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.





