ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಇದರಿಂದಾಗಿ ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಇವರ ನಿಧನದ ಸುದ್ದಿಯನ್ನು ಕೇಳುತ್ತಿದ್ದಂತೆ ರಾಜ್ಯದ ಮಿನಿ ಇರಾನ್ ಎಂದೇ ಗುರುತಿಸಿಕೊಂಡಿರುವ ಚಿಕ್ಕಬಳ್ಳಾಪುರದ ಅಲಿಪುರದಲ್ಲಿ ಶೋಕ ಮಡುಗಟ್ಟಿದ್ದು, ಅಲ್ಲಿನ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ, 3 ದಿನಗಳ ಕಾಲ ಕರಾಳ ದಿನವೆಂದು ಶೋಕಾರಚಣೆ ಮಾಡಲು ಮುಂದಾಗಿದ್ದಾರೆ.
ಸುಮಾರು 25,000 ಜನರಿರುವ ಪ್ರಧಾನ ಶಿಯಾ ಮುಸ್ಲಿಂ ಜನಸಂಖ್ಯೆ ಮತ್ತು ಇಸ್ಲಾಮಿಕ್ ಗಣರಾಜ್ಯದೊಂದಿಗಿನ ಆಳವಾದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಬಂಧಗಳಿಂದಾಗಿ ದೀರ್ಘಕಾಲದಿಂದಲೂ ʼಮಿನಿ ಇರಾನ್ʼ ಎಂದು ಕರೆಯಲ್ಪಡುತ್ತಿದ್ದ ಅಲಿಪುರ ನಿವಾಸಿಗಳು ಬೀದಿಗಿಳಿದು ಖಮೇನಿಯ ಭಾವಚಿತ್ರಗಳನ್ನು ಹೊತ್ತುಕೊಂಡು, ಕಪ್ಪು ಧ್ವಜಗಳನ್ನು ಹಿಡಿದು ಶಾಂತಿಯುತ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದಾರೆ. ದಾಳಿಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸ್ಥಳೀಯ ನಾಯಕರು ಸರ್ವೋಚ್ಚ ನಾಯಕನ ಮರಣವನ್ನು ʼಮುಸ್ಲಿಂ ಜಗತ್ತಿಗೆ ದೊಡ್ಡ ನಷ್ಟʼ ಎಂದು ಬಣ್ಣಿಸಿದ್ದಾರೆ.
ಖಮೇನಿಗೂ ಅಲಿಪುರಕ್ಕೂ ವಿಶೇಷ ನಂಟು ಏನು?
ಅಲಿಪುರದಲ್ಲಿ, ಈ ಸುದ್ದಿ ವೈಯಕ್ತಿಕವಾಗಿ ಎಲ್ಲರ ಗಮನ ಸೆಳೆದಿದೆ. 1981ರಲ್ಲಿ ಭಾರತ ಪ್ರವಾಸದ ಸಮಯದಲ್ಲಿ ಖಮೇನಿ ಸ್ವತಃ ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಆಗ ಅವರಿನ್ನೂ ಇರಾನಿನ ಪರಮೋಚ್ಚ ನಾಯಕ ಆಗಿರಲಿಲ್ಲ. ಅವರು ಗ್ರಾಮಕ್ಕೆ ಆಗಮಿಸಿದ್ದರ ನೆನಪು ಸ್ಥಳೀಯರಲ್ಲಿ ಇನ್ನೂ ಹಸಿರಾಗಿದೆ.
ಇರಾನಿನ ಬೆಂಬಲದೊಂದಿಗೆ ಅಲಿಪುರದಲ್ಲಿ ನಿರ್ಮಿಸಲಾದ ಆಸ್ಪತ್ರೆಯನ್ನು ಖಮೇನಿ ಉದ್ಘಾಟಿಸಿದ್ದರು. ಬಳಿಕ ಅಲ್ಲಿಯ ವಿದ್ವಾಂಸರು ಮತ್ತು ನಿವಾಸಿಗಳೊಂದಿಗೆ ಸಮಯ ಕಳೆದಿದ್ದು, ಸಮುದಾಯ ಮತ್ತು ಇರಾನ್ ನಡುವಿನ ಆಜೀವ ಬಾಂಧವ್ಯವನ್ನು ಬಲಪಡಿಸಿದ್ದರು ಎಂಬುದನ್ನು ಸ್ಥಳೀಯರು ನೆನಪಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಇಲ್ಲಿನ ಸುಮಾರು 25ಸಾವಿರಕ್ಕೂ ಅಧಿಕ ಶಿಯಾ ಮುಸ್ಲಿಂ ಪಂಗಡದವರು ಖಮೇನಿಯವರನ್ನು ತಮ್ಮ ಧರ್ಮಗುರು ಎಂದು ಭಾವಿಸುತ್ತಾರೆ.
ಅಲಿಪುರದ ಅನೇಕ ಕುಟುಂಬಗಳು ಇರಾನ್ನಲ್ಲಿ ಅಧ್ಯಯನ, ಕೆಲಸ ಮತ್ತು ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿವೆ. ಗ್ರಾಮದಲ್ಲಿ ಗುಮ್ಮಟಾಕಾರದ ಮಸೀದಿಗಳು, ಇಮಾಮ್ ಖಮೇನಿ ರಸ್ತೆ ಮತ್ತು ಇರಾನಿನ ಶಿಯಾ ಸಂಪ್ರದಾಯಗಳನ್ನು ಪ್ರತಿಧ್ವನಿಸುವ ಅಂಜುಮನ್-ಎ-ಜಾಫ್ರಿಯಾ ಟ್ರಸ್ಟ್ನಂತಹ ಸಂಸ್ಥೆಗಳೂ ಇವೆ.
ಈಗ ಈ ಗ್ರಾಮದ ಹಲವು ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣ ಸೇರಿದಂತೆ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಇರಾನ್ ಹೋಗಿರುವವರೆಲ್ಲರೂ ಈ ಯುದ್ದದಿಂದಾಗಿ ಅಪಾಯದಲ್ಲಿದ್ದು, ಶೀಘ್ರವೇ ಅವರು ಭಾರತಕ್ಕೆ ಸುರಕ್ಷಿತವಾಗಿ ಮರಳಲಿ ಎಂದು ಪ್ರಾರ್ಥನೆಗಳನ್ನೂ ಸಹ ನಡೆಸುತ್ತಿದ್ದಾರೆ.
ಸ್ಥಳೀಯ ಯುವಕ ಮಾತನಾಡಿ, “ಖಮೇನಿ ಅವರು ಕೇವಲ ಶಿಯಾ ಸಮುದಾಯದ ಜನತೆಗಾಗಿ ಹೋರಾಟಗಳನ್ನು ನಡೆಸಲಿಲ್ಲ. ಬದಲಿಗೆ ಇಡೀ ಜಗತ್ತಿನ ಮಾನವೀಯತೆಗಾಗಿ ತುಡಿಯುತ್ತಿದ್ದ ಜೀವವದು. ಅಂತಹ ನಾಯಕನನ್ನು ಅಮೆರಿಕ ಇಂದು ಹೊಡೆದುರುಳಿಸಿದೆ. ಅಮೆರಿಕದ ಇಂತಹ ಅಮಾನವೀಯ ಕೃತ್ಯಕ್ಕೆ ಧಿಕ್ಕಾರ” ಎಂದರು.
ಘಟನೆ ಹಿನ್ನೆಲೆ
ಪರಮಾಣು ಒಪ್ಪಂದದ ಮಾತುಕತೆಗೆ ಸ್ಪಂದಿಸದ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿದ್ದು, ದಾಳಿಯಲ್ಲಿ ಇರಾನ್ನ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ ಇರಾನ್ನ ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಫೋಟದ ಸದ್ದು ಮೊಳಗಿದ್ದು, ಆಕಾಶದಲ್ಲಿ ದಟ್ಟವಾದ ಹೊಗೆ ಆವರಿಸಿದೆ. ಜನರು ಪ್ರಾಣಭಯದಿಂದ ಸುರಕ್ಷಿತ ಸ್ಥಳಗಳತ್ತ ಓಡುತ್ತಿರುವುದು ಕಂಡುಬಂದಿದೆ. ಈ ದಾಳಿಯಲ್ಲಿ ಕೇವಲ ಸೇನಾ ನೆಲೆಗಳು ಮಾತ್ರವಲ್ಲದೆ ನಾಗರಿಕ ಪ್ರದೇಶಗಳಿಗೂ ಹಾನಿಯಾಗಿದೆ.
ಇದನ್ನೂ ಓದಿದ್ದೀರಾ? ಅಮೆರಿಕದೊಂದಿಗೆ ಮಾತುಕತೆ ನಿರಾಕರಿಸಿದ ಇರಾನ್
ಇರಾನ್ನ 30ಕ್ಕೂ ಹೆಚ್ಚು ನಗರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ರಾಜಧಾನಿ ಟೆಹ್ರಾನ್ನ ಜಮ್ಮೂರಿ, ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಉತ್ತರ ಭಾಗದ ಸೈಯದ್ ಖಂದಾನ್ ಪ್ರದೇಶ, ಅಣುಶಕ್ತಿ ಸಂಶೋಧನಾ ಕೇಂದ್ರವಿರುವ ಇಸ್ಪೃಹಾನ್ ಮತ್ತು ನಟಾಂಜ್, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರಮುಖ ನೆಲೆಗಳು ಬಂದರು ನಗರಿ ಬುಶೆಹರ್ ಸೇರಿದಂತೆ ಪ್ರಮುಖ ನಗರ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ.





