ಹೇಗೆ ಸಸ್ಯಗಳ ಆರೋಗ್ಯವನ್ನು ರಕ್ಷಿಸುವುದರಿಂದಾಗಿ ಅದು ಜನರ ಹಸಿವನ್ನು ನಿವಾರಿಸಿ ಬಡತನವನ್ನು ಕಡಿಮೆ ಮಾಡುವುದರ ಜತೆಗೆ ಜೀವವೈವಿಧ್ಯತೆ ಮತ್ತು ಪರಿಸರವನ್ನೂ ರಕ್ಷಿಸುತ್ತದೆ ಮತ್ತು ಈ ಮೂಲಕ ಆರ್ಥಿಕ ಅಭಿವೃದ್ಧಿಗೂ ಇದು ಸಹಾಯ ಮಾಡುತ್ತದೆ ಎಂಬುದರ ಕುರಿತು ಜಾಗತಿಕ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ಪ್ರತಿ ವರ್ಷ ಮೇ 12ರಂದು ಅಂತಾರಾಷ್ಟ್ರೀಯ ಸಸ್ಯ ಆರೋಗ್ಯ ದಿನ ಎಂದು ಘೋಷಿಸಿದೆ.
ಈ ಅಂತಾರಾಷ್ಟ್ರೀಯ ಸಸ್ಯ ಆರೋಗ್ಯ ದಿನ 2024ರ ಅಂಗವಾಗಿ ಮೇ 10ರಿಂದು 14ರವರೆಗೆ ಸಮಗ್ರ ಸಸ್ಯಪೀಡಾ ನಿರ್ವಹಣಾ ಕೇಂದ್ರ, ಬೆಂಗಳೂರು ಇವರಿಂದ ಕೋಲಾರದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಕಾರ್ಯಕ್ರಮಗಳನ್ನು ಸಸ್ಯಪೀಡಾ ನಿರ್ವಹಣಾ ಕೇಂದ್ರ, ಬೆಂಗಳೂರು ಮುಖ್ಯಸ್ಥ ಡಾ. ಅಲಂಗೀರ್ ಸಿದ್ದಿಕಿ ಇವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ವರ್ಗದವರು ಯಶಸ್ವಿಯಾಗಿ ಆಯೋಜಿಸಿದ್ದರು. ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುಳ್ಳಹಳ್ಳಿ ಗ್ರಾಮದಲ್ಲಿ ಅನೇಕ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು.

ರೈತರಿಗಾಗಿ ಜೈವಿಕ ಕೀಟನಾಶಕಗಳು, ವಿವಿಧ ಬಗೆಯ ಪರೋಪಕಾರಿ ಕೀಟಗಳು ಮತ್ತು ಪರಭಕ್ಷಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಇದರ ಕುರಿತು ನುರಿತ ತಜ್ಞರು ರೈತರಿಗೆ ಮಾಹಿತಿ ನೀಡಿದರು. ರೈತ ಸಮ್ಮೇಳನದಲ್ಲಿ ಸಮಗ್ರ ಸಸ್ಯಪೀಡಾ ನಿರ್ವಹಣಾ ಕೇಂದ್ರದ ತಜ್ಞರು ಹಾಗೂ ಡಾ ನರಸರೆಡ್ಡಿ, ಸಹಾಯಕ ಪ್ರಾಧ್ಯಾಪಕರು, ಕೃಷಿ ಕಾಲೇಜು, ಚಿಂತಾಮಣಿ ಹಾಜರಿದ್ದು ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದರು.

ಈ ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಮುಳ್ಳಹಳ್ಳಿ ಗ್ರಾಮ ಚಿಂತಾಮಣಿ ತಾಲೂಕು ಮತ್ತು ಶ್ರೀ ವಿದ್ಯಾನಿಕೇತನ ಶಾಲೆ, ಮೆಡಹಳ್ಳಿ, ಬೆಂಗಳೂರು, ಶಾಲಾ ಮಕ್ಕಳಿಗೆ ಚಿತ್ರಕಲೆ, ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ 60 ಮಕ್ಕಳು ಪಾಲ್ಗೊಂಡಿದ್ದರು. ವಿಜೇತರಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಲೋಕಾಯುಕ್ತ ದಾಳಿ; ಸಿ ಎಸ್ ಪುರದ ಕಂದಾಯ ನಿರೀಕ್ಷಕರ ಬಂಧನ
ಮೇ 14ರಂದು ರೈತರಿಗಾಗಿ ಕೀಟನಾಶಕಗಳ ಸುರಕ್ಷಿತ ಬಳಕೆ ಮತ್ತು ಜೇನುಸಾಕಣೆ ಬಗ್ಗೆ ಅಂತರ್ಜಾಲದ ಮೂಲಕ ವೆಬಿನಾರ್ ಅನ್ನು ಆಯೋಜಿಸಲಾಗಿತ್ತು. ರಾಜ್ಯದ ಹಲವು ಜಿಲ್ಲೆಗಳಿಂದ ರೈತರು ಭಾಗವಹಿಸಿ ಮಾಹಿತಿಯನ್ನು ಪಡೆದರು.





