ಪ್ರತಿ ಧರ್ಮವು ಶಾಂತಿ, ಸೌಹಾರ್ದತೆ ಸಂದೇಶವನ್ನು ಸಾರುತ್ತದೆಯಾದರೂ, ಕೆಲ ಕಿಡಿಗೇಡಿಗಳ ಪಿತೂರಿಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಅಂತಹವರ ಮಾತುಗಳಿಗೆ ಕಿವಿಗೊಡದೆ, ಎಲ್ಲರೂ ಒಗ್ಗಟ್ಟಾಗಿ ಶಾಂತಿಯ ಸಂದೇಶ ಸಾರಬೇಕು. ಪ್ರತಿ ಹಬ್ಬಗಳನ್ನು ಜಾತಿ-ಭೇದಭಾವ ಮರೆತು ಎಲ್ಲರೂ ಒಟ್ಟಾಗಿ ಆಚರಿಸುತ್ತಿದ್ದೇವೆ. ನಮ್ಮಲ್ಲಿ ವಿಷಬೀಜ ಬಿತ್ತಲು ಯತ್ನಿಸುವವರ ಮಾತು ಕೇಳದೆ, ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸಾಗಿದರೆ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವೆಂದು ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ರಾಜ್ಯದಕ್ಷ ಎಂ ಎಂ ಭಾಷ ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಈದ್ ಮಿಲಾದ್ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಬ್ದುಲ್ ಕಲಾಂ ಫೌಂಡೇಶನ್ ಹಾಗೂ ಆಲ್ ಇಂಡಿಯಾ ಮಿಲಿ ಕೌನ್ಸಿಲ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು.
“ಇಸ್ಲಾಂ ಧರ್ಮವೇ ಶಾಂತಿ, ಸೌಹಾರ್ದತೆ, ಮಾನವೀಯತೆ ಎಂಬ ಸಂದೇಶವನ್ನು ಸಾರುತ್ತದೆ. ಪ್ರವಾದಿ ಮುಹಮ್ಮದ್ ಅವರು ಸಮಾಜ ಪರಿವರ್ತನೆಗಾಗಿ ಸೌಮ್ಯದ ಮಾರ್ಗವನ್ನು ಅನುಸರಿಸಿ, ಎಲ್ಲೆಡೆ ಶಾಂತಿ ನೆಲಸಬೇಕು ಎಂಬುದೇ ಅವರ ಆಶಯವಾಗಿತ್ತು. ನಾವೂ ಕೂಡ ಅವರ ಹಾದಿಯಲ್ಲಿ ನಡೆಯಬೇಕು” ಎಂದು ಹೇಳಿದರು.
“1500ನೇ ಈದ್ ಮಿಲಾದ್ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಶಾಂತಿ ಸಂದೇಶ ಸಾರಲಾಯಿಗಿದ್ದು, ದಯೆ, ಒಗ್ಗಟ್ಟು, ಪ್ರೀತಿ, ಬದ್ಧತೆ ಇಸ್ಲಾಂ ಧರ್ಮದ ಮೂಲ ತತ್ವಗಳಾಗಿದ್ದು, ಗಳಿಕೆಯ ಒಂದು ಭಾಗವನ್ನು ಬಡವರಿಗೆ ನೀಡುವಂತೆ ಇಸ್ಲಾಂ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಗಣೇಶ ವಿಸರ್ಜನೆ ದಿನ ಡಿಜೆ ಬಳಸಿದರೂ ಎಸ್ಪಿ ಮೌನ: ಸಾರ್ವಜನಿಕರ ಆಕ್ರೋಶ
“ನಿರ್ಗತಿಕರು ಹಾಗೂ ಅನಾಥರ ಜೀವನದಲ್ಲಿ ಬೆಳಕನ್ನು ತರುವಂತೆ, ಅವರನ್ನು ಉತ್ತಮ ಜೀವನ ಸಾಗಿಸಲು ಪ್ರೇರೇಪಿಸುವ ಧರ್ಮವೇ ಇಸ್ಲಾಂ” ಎಂದು ಹೇಳಿದರು.
ಈ ವೇಳೆ ಅಬ್ದುಲ್ ರೆಹಮಾನ್ ಸಾಬ್, ಸೈದ್ ಅಮಾನುಲ್ಲಾ,ರಾಜಶೇಖರ್, ಹಾಶಿಂ ಬನ್ನೂರು, ಅಲಿಪೂರ್ ಜರಾರ್ ಹುಸೇನ್, ಕಳವಾರ ಶ್ರೀಧರ್, ಇಬ್ರಾಹಿಂ, ತಬಕೀರ್, ಅಮ್ಜದ್, ಸಫೀರ್, ಅರ್ಬಾಜ್, ಅಬುಬಕರ್, ನವಾಜ಼್, ರಹಮತ್, ಆಲ್ತಾಫ್, ರೋಷನ್ ಮತ್ತು ಇತರರು ಇದ್ದರು.





